ಮೈಸೂರು,ಫೆಬ್ರವರಿ,26,2026 (www.justkannada.in): ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಅಧಿಕಾರ ಹಸ್ತಾಂತರ ವಿಚಾರದಲ್ಲಿ ರಾಜ್ಯದಲ್ಲಿ ಗೊಂದಲವಿದೆ ಎಂದು ಶಾಸಕ ತನ್ವೀರ್ ಸೇಠ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಗೊಂದಲ ನಿವಾರಿಸುವಂತೆ ಸುರ್ಜೇವಾಲ ಬಳಿ ಮನವಿ ಮಾಡಿದ್ದೇನೆ. ರಾಜಕೀಯವಾಗಿ ರಾಜ್ಯದಲ್ಲಿ ಯಾವುದೂ ಸರಿಯಿಲ್ಲ. ರಾಜ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಹೀಗೆ ಆದರೆ ಬೇರೆ ಪಕ್ಷಕ್ಕೂ ನಮ್ಮ ಪಕ್ಷಕ್ಕೂ ಏನು ವ್ಯತ್ಯಾಸ. ಪಕ್ಷದ ಕಾರ್ಯಾಧ್ಯಕ್ಷನಾಗಿ ನನಗೂ ಜವಾಬ್ದಾರಿಗಳಿವೆ. ಬೆಂಕಿ ನನ್ನ ಕೈಲಿದ್ದಾಗ ಮಾತು ಕೇಳುತ್ತೆ. ಕೈ ತಪ್ಪಿದರೆ ಮಾತು ಕೇಳದ ಪರಿಸ್ಥಿತಿ ಆಗುತ್ತದೆ. ಅಂತಹ ಸನ್ನಿವೇಶ ನಮ್ಮಲ್ಲಿ ಸೃಷ್ಠಿ ಆಗಬಾರದು. ಅಧಿಕಾರ ಹಂಚಿಕೆ ಚರ್ಚೆ ಆಗಿದ್ದರೆ ಬಹಿರಂಗವಾಗಲಿ. ಒಂದು ವೇಳೆ ಸಿಎಂ ಸ್ಥಾನ ನೀಡುವುದಿದ್ದರೆ ನೀಡಲಿ. ಸಿದ್ದರಾಮಯ್ಯ ಅವರೇ ಮುಂದುವರಿಯುವುದಿದ್ದರೆ ಅದನ್ನೇ ಸ್ಪಷ್ಟಪಡಿಸಲಿ. ಅನಾಹುತ ಆಗುವ ಮುನ್ನ ಹೈಕಮಾಂಡ್ ಎಚ್ಚೆತ್ತುಕೊಳ್ಳಬೇಕು. ಈ ಕುರಿತು ಸುರ್ಜಿವಾಲ ದೆಹಲಿಗೆ ಬರಲು ತಿಳಿಸಿದ್ದಾರೆ ಎಂದರು.
ಒಂದು ಬಾರಿ ಗೆದ್ದವರು ಸಚಿವರಾಗಬೇಕಾದರೆ, ಆರನೇ ಬಾರಿಗೆದ್ದವನು ಸಿಎಂ ಆಗಬಾರದಾ? ರಾಜ್ಯದಲ್ಲಿ ಹಾವು ಮುಂಗುಸಿ ಆಟ ನಡೆಯುತ್ತಿದೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಈ ಕುರಿತು ವರಿಷ್ಠರ ಗಮನಕ್ಕೆ ತಂದಿರುವೆ ಎಂದರು.
ಗ್ಯಾರೆಂಟಿ ಯೋಜನೆಗಳ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದೇವೆ
ಗ್ಯಾರೆಂಟಿ ಯೋಜನೆಗಳಿಂದ ಯಾವುದೇ ತೊಂದರೆ ಆಗಿಲ್ಲ. ಗ್ಯಾರೆಂಟಿ ಯೋಜನೆಗಳ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದೇವೆ. ಸೂಕ್ತ ವ್ಯಕ್ತಿಗಳಿಗೆ, ಸರಿಯಾದ ಕುಟುಂಬಗಳಿಗೆ ಗ್ಯಾರಂಟಿಗಳು ಸಿಗುತ್ತಿಲ್ಲ. ಎಷ್ಟು ಸೌಲಭ್ಯ ಕೊಡ್ತೀವಿ,ಅಷ್ಟು ದುರುಪಯೋಗವಾಗುತ್ತಿದೆ. ಅರ್ಹರಿಗೆ ಯೋಜನೆ ತಲುಪಿದರೆ ಯಶಸ್ವಿಯಾಗುತ್ತದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಕಾರ್ಯಕ್ರಮ. ನಮಗೆ ಸಂಪನ್ಮೂಲದ ಕೊರತೆ ಇರುವ ಸ್ಥಳದಿಂದ ಸರಿಪಡಿಸಬೇಕು ಎಂದು ತನ್ವೀರ್ ಸೇಠ್ ತಿಳಿಸಿದರು.
ಮೊದಲ ಬಾರಿಗೆ ಗೆದ್ದವರು ಸಚಿವರಾಗು ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್, ಮೊದಲ ಬಾರಿಗೆ 54 ಮಂದಿ ಶಾಸಕರಾಗಿದ್ದರು. ಆ ಸಂದರ್ಭದಲ್ಲಿ ಮೊದಲು ಗೆದ್ದವರಿಗೆ ಸಚಿವ ಸ್ಥಾನ ಬೇಡ. ಅವರಿಗೆ ನಿಗಮ ಸ್ಥಾನ ನೀಡಿ ಎಂದು ಚರ್ಚೆ ಆಯಿತು. ಆ ಕಾರಣಕ್ಕೆ ಅಂದಿನಿಂದ ಯಾರಿಗೂ ಮೊದಲು ಗೆದ್ದವರಿಗೆ ಸಚಿವ ಸ್ಥಾನ ನೀಡಿಲ್ಲ. ಎಲ್ಲರಿಗೂ ಕೇಳುವ ಹಕ್ಕಿದೆ. ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಸಚಿವ ಸ್ಥಾನ ನೀಡುವುದು ಹೈಕಮಾಂಡ್ ವಿಚಾರ ಎಂದರು.
Key words: All, not, well, Congress party, MLA, Tanveer Sait







