Sunday, September 13, 2026

BDA Apartments

Home Front Page ಗುಜರಾತ್ ಮಾದರಿಯಂತೆ ರಾಜ್ಯ ಸಚಿವ ಸಂಪುಟ ರಚನೆಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹ.

ಗುಜರಾತ್ ಮಾದರಿಯಂತೆ ರಾಜ್ಯ ಸಚಿವ ಸಂಪುಟ ರಚನೆಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹ.

ದಾವಣಗೆರೆ,ಜನವರಿ,15,2022(www.justkannada.in):  ನಮ್ಮಲ್ಲಿ ಕೆಲವರು ಸಚಿವರಾದವರೇ ಮತ್ತೆ ಮತ್ತೆ ಸಚಿವರಾಗುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಗುಜರಾತ್ ಮಾದರಿಯಲ್ಲಿ ಸಚಿವ ಸಂಪುಟ ರಚನೆಯಾಗಬೇಕು ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಕರ್ನಾಟಕದಲ್ಲಿ ಸಿಎಂ ಸ್ಥಾನ ಹೊರತುಪಡಿಸಿ ಗುಜರಾತ್ ಮಾದರಿ ಸಂಪುಟ ರಚನೆಯಾಗಬೇಕು. ಹೊಸ ಮುಖಗಳಿಗೆ ಸಂಪುಟದಲ್ಲಿ ಸ್ಥಾನ ದೊರೆಯಬೇಕು. ಹಿರಿಯರು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಲಿ.  ರೇಣುಕಾಚಾರ್ಯ ಬಂಡಾಯದ ಪ್ರಶ್ನೆಯೇ ಇಲ್ಲ. ಬಿಎಸ್ ವೈ ಸೂಚನೆಯಂತೆ ನಾವೆಲ್ಲಾ ಕೆಲಸ ಮಾಡುತ್ತಿದ್ದೇವೆ. ಹಮಾಲಿಯಂತೆ ಕೆಲ ಶಾಸಕರು ಕೆಲಸ ಮಾಡುತ್ತಿದ್ದೇವೆ.

ನಾವು ಅಪರೇಷನ್ ಕಮಲ ಮಾಡಿಲ್ಲ.  ಬೆಲೆ ಸಿಗದಿದ್ದಕ್ಕೆ ಅವರು ಜೆಡಿಎಸ್ ಕಾಂಗ್ರೆಸ್ ಪಕ್ಷ ಬಿಟ್ಟು ಬಂದಿದ್ದಾರೆ. ಪದೇ ಪದೇ ಅವರೇ ಸಚಿವರು ಅಗುತ್ತಿದ್ದಾರೆ. ಹೊಸ ಮುಖಗಳಿಗೆ ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತಿದ್ದೇವೆ ಎಂದು ಎಂಪಿ ರೇಣುಕಾಚಾರ್ಯ ತಿಳಿಸಿದರು.

ಇದೇ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಎಂದರೆ ಮಕ್ಕಳಾಟದಂತಾಗಿದೆ. ಮಕ್ಕಳಿಗೆ ಜಾತ್ರೆಯಲ್ಲಿ ಕಾರು ಕೊಡಿಸಿದಂತೆ ನನಗೆ ಕಾರು ಕೊಟ್ಟಿದ್ದಾರೆ, ಮನೆ ಕೊಟ್ಟಿದ್ದಾರೆ, ಜನಪರ ಕೆಲಸ ಮಾಡಲು ಮಾತ್ರ ಆಗುತ್ತಿಲ್ಲ. ಹಾಗಾಗಿ ನನಗೆ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ ಎಂದು ಹೇಳಿದರು.

Key words: MLA- MP Renukacharya – formation – cabinet-Gujarat.