ಹೊಸ ಬಸ್ ಖರೀದಿಗೆ ಟೆಂಡರ್: ಕೊರತೆ ಇರುವ ಕಡೆ ಬಸ್ ಗಳನ್ನು ಒದಗಿಸುತ್ತೇವೆ- ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಮಾರ್ಚ್,18,2026 (www.justkannada.in): ನಾವು ಬಂದ ಮೇಲೆ ಸುಮಾರು 6 ಸಾವಿರ ಹೊಸ ಬಸ್‌‍ ಖರೀದಿ ಮಾಡಲು ತೀರ್ಮಾನಿಸಿದ್ದೇವೆ. ಹೊಸ ಬಸ್‌‍ ಖರೀದಿಗೆ ಟೆಂಡರ್‌ ಕರೆಯಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

ವಿಧಾನಪರಿಷತ್ ನಲ್ಲಿ ಶಕ್ತಿ ಯೋಜನೆ ಹಣ ಸರ್ಕಾರದಿಂದ ಬಾಕಿ  ಮತ್ತು ಬಸ್ ಖರೀದಿ ಬಗ್ಗೆ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವ ರಾಮಲಿಂಗರೆಡ್ಡಿ, ಹೊಸ ಬಸ್‌‍ ಖರೀದಿಗೆ ಟೆಂಡರ್‌ ಕರೆಯಲಾಗಿದ್ದು, ಎಲ್ಲೆಲ್ಲಿ ಕೊರತೆ ಇದೆಯೋ ಅಂತಹ ಕಡೆ ಆದ್ಯತೆ ಮೇರೆಗೆ ಬಸ್‌‍ಗಳನ್ನು ಒದಗಿಸುತ್ತೇವೆ. ಸುಮಾರು 6 ಸಾವಿರ ಹೊಸ ಬಸ್‌‍ ಖರೀದಿ ಮಾಡಲು ತೀರ್ಮಾನಿಸಿದ್ದೇವೆ. ಇದರ ಮೊದಲ ಭಾಗವಾಗಿ ಹೊಸ ಬಸ್‌‍ ಖರೀದಿಗೆ ಟೆಂಡರ್‌ ಕರೆಯಲಾಗಿದೆ, ಪ್ರಕ್ರಿಯೆಯಿಂದ ತಡವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ಸಾವಿರ ಕೋಟಿ ರೂ. ಸಾಲ ಕೊಟ್ಟಿದ್ದಾರೆ, ಅದನ್ನ ಕೆ ಎಸ್‌‍ ಆರ್‌ ಟಿಸಿ ತೀರಿಸುತ್ತಿದೆ. ಇಲಾಖೆಯಲ್ಲಿ ಒಟ್ಟು 6 ಸಾವಿರ ಕೋಟಿ ರೂ. ಸಾಲ ಇದೆ. ಇದನ್ನು ಸರ್ಕಾರವೇ ತೀರಿಸಲಿದೆ ಎಂದರು.

ನಮ್ಮ ಸರ್ಕಾರ ಬಂದ ಮೇಲೆ ಸುಮಾರು 6 ಸಾವಿರ ಹೊಸ ಬಸ್‌‍ ನಾವು ಖರೀದಿ  ಮಾಡುತ್ತಿದ್ದು ಅವಧಿ ಮೀರಿರುವ ಯಾವುದೇ ಬಸ್‌‍ ನಮಲ್ಲಿ ಇಲ್ಲ. 1 ಲಕ್ಷ ನಿತ್ಯ ಬಸ್‌‍ ಟ್ರಿಪ್‌ ಇದೆ, ಒಂದೋ ಎರಡೋ ಸಮಸ್ಯೆ ಆಗಬಹುದು. ಇದು ಇಂದೂ ಆಗುತ್ತಿದೆ, ಮುಂದೆಯೂ ಆಗುತ್ತದೆ. ಹಿಂದಿನ ಸರ್ಕಾರ ಬಸ್‌‍ ಖರೀದಿ ಮಾಡಿರಲಿಲ್ಲ, ನೇಮಕಾತಿ ಆಗಿರಲಿಲ್ಲ  ಎಂದು ಸಚಿವ ರಾಮಲಿಂಗರೆಡ್ಡಿ  ಟೀಕಿಸಿದರು.

Key words: Tender, purchase, new buses, Minister, Ramalingareddy