ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ಅಡಿ ಹುದ್ದೆಗಳ ಆಯ್ಕೆ ನಿಯಮಾನುಸಾರ ನಡೆಸಿ: ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

ಬೆಂಗಳೂರು,ಮೇ,27,2025 (www.justkannada.in): ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದಂತೆ 371 ಜೆ ಅಡಿ ಸರ್ಕಾರದ ವಿವಿಧ ಸಂಸ್ಥೆಗಳಲ್ಲಿ ಹುದ್ದೆಗಳ ನೇಮಕಾತಿಗಳು ಸರ್ಕಾರ ನಿಗದಿ ಪಡಿಸಿರುವ ಮಾನದಂಡಗಳಂತೆ ನಡೆಯುತ್ತಿಲ್ಲ, 2023ರ ಸರ್ಕಾರದ ಆದೇಶದಂತೆ ಕಟ್ಟುನಿಟ್ಟಾಗಿ ಎಲ್ಲ ಆಯ್ಕೆಗಳನ್ನು ಮಾಡಬೇಕು  ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರೂ ಆದ  371-ಜೆ ಅನುಷ್ಟಾನ ಕುರಿತಾದ ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷ ಪ್ರಿಯಾಂಕ್‌ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು.

ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ,ಶರಣಪ್ರಕಾಶ್‌ ಪಾಟೀಲ್‌ ಅವರೂ ಪಾಲ್ಗೊಂಡು ಸರ್ಕಾರದ ವಿವಿಧ ಸಂಸ್ಥೆಗಳು ಸರ್ಕಾರದ ಸೂಚನೆಯನ್ನು ಪಾಲಿಸುವಲ್ಲಿ ಲೋಪ ಮಾಡುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ ನಿಯಮಬಾಹಿರವಾಗಿ ಮಾಡಿರುವ ಆಯ್ಕೆಗಳನ್ನು ಹಿಂಪಡೆಯಬೇಕೆಂದು ಸೂಚಿಸಿದರು.

ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದಾಗ್ಯೂ ವಿವಿಧ ಇಲಾಖೆಗಳಲ್ಲಿ ಗೊಂದಲ ಇರುವುದರಿಂದ ಮತ್ತೊಮ್ಮೆ ಸೂಕ್ತ ಮಾರ್ಗದರ್ಶನಗಳನ್ನು ನೀಡುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಸಭೆಯಲ್ಲಿದ್ದ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಜಿ.ಸತ್ಯವತಿ ಅವರಿಗೆ ಸೂಚಿಸಿದರು.vtu

ಮುಂದಿನ ತಿಂಗಳು 371-ಜೆ ಅನುಷ್ಟಾನ ಕುರಿತಾದ ಸಚಿವ ಸಂಪುಟದ ಉಪ ಸಮಿತಿಯ ಸಭೆ ಕರೆದು ಈ ಸಂಬಂಧದ ಗೊಂದಲಗಳನ್ನು ನಿವಾರಿಸಲಾಗುವದೆಂದು ಸಂಪುಟ ಉಪ ಸಮಿತಿಯ ಅಧ್ಯಕ್ಷರೂ ಆದ ಸಚಿವ ಪ್ರಿಯಾಂಕ್‌ ಖರ್ಗೆ ಸಭೆಯಲ್ಲಿ ಪ್ರಕಟಿಸಿದರು.

ಸಭೆಯಲ್ಲಿ ಕಿಯೊನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕ ಪವನ್‌ ಕುಮಾರ್‌ ಮಾಲಪಾಟಿ, ಎಂ.ಎಸ್.ಐ.ಎಲ್‌ನ ಮನೋಜ್‌ ಕುಮಾರ್‌, ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಭಾರತಿ, ಕರ್ನಾಟಕ ನಗರ ಜಲಮಂಡಳಿಯ ಡಾ.ಸೆಲ್ವಮಣಿ, ಆಹಾರ ಹಾಗೂ ನಾಗರಿಕ ಪೂರೈಕೆ ನಿಗಮದ ಎಂ.ವಿ.ಚಂದ್ರಕಾಂತ್‌ ಮುಂತಾದವರು ಭಾಗವಹಿಸಿದ್ದರು.

Key words: recruitment, Kalyana Karnataka, Minister,  Priyank Kharge