ಆಹಾರಮೇಳದಲ್ಲಿ 160ಕ್ಕೂ ಹೆಚ್ಚು ಮಳಿಗೆಗಳು: ತಮಗಿಷ್ಟದ ಭೋಜನ ಸವಿಯಿರಿ- ಸಚಿವ ಕೆಎಚ್ ಮುನಿಯಪ್ಪ

ಮೈಸೂರು,ಸೆಪ್ಟಂಬರ್,22,2025 (www.justkannada.in):  ಮೈಸೂರು ದಸರಾ ಆಹಾರಮೇಳದಲ್ಲಿ 160ಕ್ಕೂ ಹೆಚ್ಚು ಮಳಿಗೆಗಳಿವೆ. ವಿವಿಧ ಶೈಲಿಯ ಆಹಾರ ಪದ್ಧತಿಗಳಿದ್ದು, ತಮಗೆ ಇಷ್ಟವಾದ ಭೋಜನಗಳನ್ನು ಸವಿಯಲು ಒಂದು ಅಪೂರ್ವ ಅವಕಾಶವನ್ನು ಒದಗಿಸಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆಹೆಚ್. ಮುನಿಯಪ್ಪ ತಿಳಿಸಿದರು.

ವಿಶ್ವ ವಿಖ್ಯಾತ ಮೈಸೂರು ದಸರಾ – 2025ರ ಅಂಗವಾಗಿ, ಮಹಾರಾಜ ಕಾಲೇಜು ಮೈದಾನದಲ್ಲಿ “ರುಚಿಯೊಂದಿಗೆ ಸ್ವಚ್ಛತೆಯ ಸಿರಿ” ಎಂಬ ಧ್ಯಾಯ ವಾಕ್ಯದೊಂದಿಗೆ ಜನಪ್ರಿಯ ಆಹಾರ ಮೇಳವನ್ನು ಆಯೋಜಿಸಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಸಚಿವ ಕೆಎಚ್ ಮುನಿಯಪ್ಪ,  ಯುಪಿಎ  ಅವಧಿಯ ಸರ್ಕಾರದಲ್ಲಿ ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ  ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತರಲಾಯಿತು.  ಅಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ಬಡವರಿಗೆ ಉಚಿತವಾಗಿ ಅಕ್ಕಿ ಯನ್ನು ವಿತರಿಸಲಾಯಿತು. ಅಂದಿನಿಂದ ಆರಂಭಗೊಂಡ ಈ ಯೋಜನೆ ಇಂದಿನವರೆಗೂ ಮುಂದುವರೆಯುತ್ತಿದ್ದು ನಮ್ಮ ಸರ್ಕಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ 10ಕೆ.ಜಿ ಅಕ್ಕಿಯನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ ಎಂದರು.

ಈ ಆಹಾರ ಮೇಳದಲ್ಲಿ ಒಟ್ಟು 160 ಕ್ಕೂ ಹೆಚ್ಚು ಮಳಿಗೆಗಳು ತೆರೆದಿದ್ದು, ಅವುಗಳಲ್ಲಿ 121 ಸಸ್ಯಾಹಾರಿ ಹಾಗೂ 39 ಮಾಂಸಾಹಾರಿ ಮಳಿಗೆಗಳಿವೆ. ಇಲ್ಲಿ ಸ್ಥಳೀಯವಾಗಿ ಮೈಸೂರಿನ ವಿಶೇಷ ಆಹಾರ ಶೈಲಿ, ಬುಡಕಟ್ಟು, ಮಲೆನಾಡು, ಕೊಡವ, ಕರಾವಳಿ, ಉತ್ತರ ಹಾಗೂ ಮಧ್ಯ ಕರ್ನಾಟಕದ ಪಾಕಶೈಲಿಗಳ ಜೊತೆಗೆ ಗುಜರಾತಿ, ರಾಜಸ್ಥಾನಿ, ಹೈದರಬಾದಿ, ಕೇರಳ, ಚೈನೀಸ್ ಮತ್ತು ಅಂತರಾಷ್ಟ್ರೀಯ ಪಾಕಶೈಲಿಗಳನ್ನೂ ಪರಿಚಯಿಸಲಾಗಿದೆ. ಈ ಮೇಳವು ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಕುಟುಂಬ ಸಮೇತ ಭೇಟಿ ನೀಡಿ, ವಿವಿಧ ಶೈಲಿಯ ಆಹಾರ ಪದ್ಧತಿಗಳ ಪರಿಚಯ ಪಡೆದು, ತಮಗೆ ಇಷ್ಟವಾದ ಭೋಜನಗಳನ್ನು ಸವಿಯಲು ಒಂದು ಅಪೂರ್ವ ಅವಕಾಶವನ್ನು ಒದಗಿಸುತ್ತದೆ. ಆಹಾರ ಮೇಳಕ್ಕೆ ಆಗಮಿಸುವ ಪ್ರತಿಯೊಬ್ಬರೂ ಸ್ವಚ್ಚತೆಯನ್ನು ಕಾಪಾಡಿ, ಆಹಾರ ವ್ಯರ್ಥ ಮಾಡದೆ, ತಮಗೆ ಬೇಕಾದಷ್ಟು ಮಾತ್ರ ಆಹಾರವನ್ನು ಕೊಂಡು ಉಪಯೋಗಿಸುಲು ಮನವಿ‌ ಮಾಡಿದರು.

ಕಾರ್ಯಕ್ರಮದಲ್ಲಿ  ಸಚಿವ ಕೆಜೆ ಜಾರ್ಜ್, ಶಾಸಕರಾದ ರವಿಶಂಕರ್, ರಮೇಶ್ ಬಂಡಿ ಸಿದ್ದೇಗೌಡ, ಡಾ. ತಿಮ್ಮಯ್ಯ  ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ನಟರಾಜ್ ಹಾಗೂ ಜಂಟಿ ಉಪ‌ನಿರ್ದೇಶಕರಾದ ಮಂಟೇಶ್ವಾಮಿ, ಅಧಿಕಾರಿಗಳು ಉಪಸ್ಥಿತರಿದ್ದರು.

Key words: Mysore dasara, food fair, Minister, KH Muniyappa