ಉಡುಪಿ,ಜೂನ್,14,2025 (www.justkannada.in): ಕೋಮು ದಳ್ಳುರಿ ನಿಗ್ರಹಕ್ಕಾಗಿ ರಚನೆ ಮಾಡಲಾಗಿರುವ ಎಸ್ಎಎಫ್ ನಿಂದ ಉಡುಪಿ ಘನತೆಗೆ ಧಕ್ಕೆಯಾಗುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಎಸ್ಎಎಫ್ ವ್ಯಾಪ್ತಿಗೆ ಸೇರಿಸಿರುವುದರಿಂದ ಬ್ರ್ಯಾಂಡ್ ಉಡುಪಿ ಘನತೆಗೆ ಧಕ್ಕೆಯಾಗಿದೆ ಎಂಬ ಶಾಸಕ ಯಶ್ ಪಾಲ್ ಸುವರ್ಣ ಅವರ ಹೇಳಿಕೆ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜ.ಪರಮೇಶ್ವರ್, ಕೋಮು ನಿಗ್ರಹಕ್ಕಾಗಿ ರಚನೆಯಾಗಿರುವ ವಿಶೇಷ ಕಾರ್ಯಪಡೆಯ ವ್ಯಾಪ್ತಿಗೆ ಸೇರಿಸಿರುವುದರಿಂದ ಉಡುಪಿ ಜಿಲ್ಲೆಯ ಘನತೆಗೆ ಧಕ್ಕೆಯಾಗುವುದಿಲ್ಲ. ಕರಾವಳಿ ಭಾಗದಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ಘಟನಾವಳಿಗಳ ಆಧಾರದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ. ಯಾವುದೇ ಜಿಲ್ಲೆಯನ್ನು ಕೋಮು ಸೂಕ್ಷ್ಮ ಪ್ರದೇಶ ಎಂದು ಬಿಂಬಿಸುವ ಸಲುವಾಗಿ ಮಾಡಿಲ್ಲ ಎಂದರು.
ಈ ಮಧ್ಯೆ ಕಾರ್ಕಳ ಭಾಗದಲ್ಲಿ ನಕ್ಸಲ್ ನಿಗ್ರಹ ಪಡೆಯ ಮುಖ್ಯ ಕಚೇರಿ ಆರಂಭಿಸಿದ್ದೆವು. ಎಎನ್ಎಫ್ನಿಂದ ಉಡುಪಿಯ ಘನತೆ ಕಡಿಮೆಯಾಯಿತೇ..? ನಕ್ಸಲರಿಂದ ಬಹಳಷ್ಟು ಜನರ ಹತ್ಯೆ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಉಡುಪಿಯಲ್ಲಿ ಎಎನ್ಎಫ್ ಕಚೇರಿ ಆರಂಭಿಸಿದ್ದೆವು. ಕೋಮುವಾದಕ್ಕೆ ಸಂಬಂಧಪಟ್ಟ ಪ್ರಕರಣಗಳು ನಡೆಯದಿದ್ದಲ್ಲಿ ಎಸ್ಎಎಫ್ ಅಗತ್ಯ ಬರುವುದಿಲ್ಲ ಎಂದು ಪರಮೇಶ್ವರ್ ತಿಳಿಸಿದರು.
Key words: Udupi, dignity, SAF, Home Minister, Dr G Parameshwar