ಕಾರವಾರ,ಜುಲೈ,30,2025 (www.justkannada.in): ಸಿಎಂ ಸಿದ್ದರಾಮಯ್ಯಗೆ ಶಕ್ತಿ ಪ್ರದರ್ಶನ ಮಾಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ್ ಬಿಟ್ಟು ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ಬಗ್ಗೆ ಟೀಕೆ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸುತ್ತಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಅನ್ನೋ ವಿಚಾರ ಮುಗಿದ ಅಧ್ಯಾಯ ಸಿದ್ದರಾಮಯ್ಯ ಶಕ್ತಿಪ್ರದರ್ಶನ ಮಾಡುವ ಅವಶ್ಯಕತೆ ಇಲ್ಲ ಕಳೆದ ವರ್ಷದಂತೆ ಈಗಲೂ ಶಾಸಕರ ಜೊತೆ ಸಭೆ ನಡೆಸುತ್ತಿದ್ದಾರೆ ಅಷ್ಟೆ ಎಂದರು.
ಅಪರೇಷನ್ ಸಿಂಧೂರ ಕುರಿತು ನಿನ್ನೆ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಉತ್ತರ ಕುರಿತು ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಪ್ರಧಾನಿ ಮೋದಿ ಯಾರಿಗಾದರೂ ಉತ್ತರ ಕೊಡುತ್ತಾರಾ ? ಅವರಿಗೆ ಪ್ರಶ್ನೆ ಕೇಳುವುದಕ್ಕೆ ಅವಕಾಶ ಇಲ್ಲ. ನಾನು ಯಾರಿಗೂ ಉತ್ತರ ಕೊಡಬೇಕಾಗಿಲ್ಲ ಎನ್ನುವ ಸರ್ವಾಧಿಕಾರಿ ಧೋರಣೆ ಇದು. ಪುಲ್ವಾಮಾ ಘಟನೆ ಆಗಲು ವೈಫಲ್ಯ ಏನು ಅನ್ನೋದನ್ನ ಹೇಳುವುದೇ ಇಲ್ಲ. ನಮ್ಮ 40 ಸೈನಿಕರು ಹುತಾತ್ಮರಾಗಿದ್ದಕ್ಕೆ ವೈಫಲ್ಯವೇನು ಎನ್ನುವುದನ್ನೇ ಬಹಿರಂಗಪಡಿಸಿಲ್ಲ. ಪಹಲ್ಗಾಮ್ ದಾಳಿಯಲ್ಲೂ ಯಾವುದೇ ಸ್ಪಷ್ಟ ಉತ್ತರ ಬಂದಿಲ್ಲ. ಅಮೆರಿಕಾ ಅಧ್ಯಕ್ಷ ಟ್ರಂಪ್ ನಾನೇ ಯುದ್ಧ ನಿಲ್ಲಿಸಿದ್ದೆಂದು ಹೇಳಿದ್ದರು. ಪಾಕಿಸ್ತಾನದವರು ಭಾರತದ 5 ಜೆಟ್ ಗಳನ್ನು ಹೊಡೆದಿದ್ದೇವೆ ಎಂದರು. ಆದರೆ ಕೇಂದ್ರ ಸರ್ಕಾರ ಇದುವರೆಗೂ ಈ ಬಗ್ಗೆ ಎಂದೂ ಸ್ಪಷ್ಟಪಡಿಸಿಲ್ಲ ಎಂದು ಕಿಡಿಕಾರಿದರು.
Key words: CM Siddaramaiah, DCM, DK Shivakumar, Minister, Dinesh Gundu Rao