Saturday, August 8, 2026

BDA Apartments

Home Front Page ಮಂಡ್ಯ ಕಾಂಗ್ರೆಸ್‌ನ ಭದ್ರಕೋಟೆ: ವಿರೋಧಿಗಳ ಟೀಕೆಗೆ ಅಭಿವೃದ್ಧಿಯೇ ಉತ್ತರ – ಸಚಿವ ಚಲುವರಾಯಸ್ವಾಮಿ,

ಮಂಡ್ಯ ಕಾಂಗ್ರೆಸ್‌ನ ಭದ್ರಕೋಟೆ: ವಿರೋಧಿಗಳ ಟೀಕೆಗೆ ಅಭಿವೃದ್ಧಿಯೇ ಉತ್ತರ – ಸಚಿವ ಚಲುವರಾಯಸ್ವಾಮಿ,

ಮಂಡ್ಯ, ಆ.8,2026 (www.justkannada.in): ಮಂಡ್ಯ ಜಿಲ್ಲೆ ಕಾಂಗ್ರೆಸ್‌ ನ ಭದ್ರಕೋಟೆ. ನನಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಕ್ಕಿರುವುದು ಜನರ ಪ್ರೀತಿ ಮತ್ತು ಕಾರ್ಯಕರ್ತರ ಆಶೀರ್ವಾದದ ಫಲ ಎಂದು ನೂತನ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ನಗರದ ಸಿಲ್ವರ್ ಜೂಬಿಲಿ ಪಾರ್ಕ್‌ ನಲ್ಲಿ ನೂತನ ಸಚಿವರಿಗೆ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ  ಸಚಿವ ಚಲುವರಾಯಸ್ವಾಮಿ ಅವರು ಮಾತನಾಡಿದರು.

“ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ”

“ನೀವು ನನಗೆ ಕೊಟ್ಟ ಭಿಕ್ಷೆಯಿಂದಲೇ ಇಂದು ನಾನು ಈ ಸ್ಥಾನದಲ್ಲಿ ಇದ್ದೇನೆ. ನಿಮ್ಮ ಪ್ರೀತಿ, ಬೆಂಬಲವೇ ನನ್ನ ಬಲ. ಮತ್ತೊಮ್ಮೆ ಸಚಿವರಾಗುವುದು ಅಷ್ಟು ಸುಲಭವಲ್ಲ. ನಿಮ್ಮ ಪ್ರೀತಿ ಇದ್ದರೆ ಮಾತ್ರ ಸಾಧ್ಯ” ಎಂದು ಭಾವುಕರಾಗಿ ಹೇಳಿದರು.

“ಮಂಡ್ಯ ಅಂದರೆ ಇಂಡಿಯಾ”

ಮಂಡ್ಯವನ್ನು ಗಂಡು ಭೂಮಿ ಎಂದು ಕರೆಯುತ್ತಾರೆ. ಮಾದೇಗೌಡ, ಶಂಕರೇಗೌಡ, ಎಸ್.ಎಂ. ಕೃಷ್ಣ ಅವರಂತಹ ರಾಜಕಾರಣಿಗಳನ್ನು ನೀಡಿದ ಮಂಡ್ಯ ವೈಶಿಷ್ಟ್ಯಪೂರ್ಣ ಜಿಲ್ಲೆ. ಈ ಹಿಂದೆ ನಮ್ಮದೇ ಭದ್ರಕೋಟೆ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ನಿಮ್ಮ ಪ್ರೀತಿಯಿಂದ ಮತ್ತೆ ಮಂಡ್ಯವನ್ನು ಕಾಂಗ್ರೆಸ್ ಭದ್ರಕೋಟೆಯಾಗಿ ಮಾಡಿದ್ದೀರಿ. ಜಿಲ್ಲೆಯ 6 ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ. ಕೆ.ಆರ್.ಪೇಟೆಯನ್ನು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

“2028ಕ್ಕೆ ಕಹಳೆ – ವಿರೋಧಿಗಳಿಗೆ ಟಾಂಗ್”

ಈ ಸ್ವಾಗತ 2028ರ ಚುನಾವಣೆಗೆ ಕಹಳೆ ಊದುವ ಪ್ರೀತಿಯ ಸಂಕೇತವಾಗಿದೆ. ವಿರೋಧ ಪಕ್ಷದವರು ಎದುರಿಗೆ ಬಂದು ಮಾತನಾಡಲಿ, ನಾನು ಉತ್ತರ ಕೊಡುತ್ತೇನೆ. ಟೀಕೆ-ಟಿಪ್ಪಣಿ ಬೇಡ, ಏನಾದರೂ ಕೆಲಸ ಮಾಡಿ. ನಮ್ಮ ಅಭಿವೃದ್ಧಿಯನ್ನು ನೋಡಿ ಅವರಿಗೆ ಹೊಟ್ಟೆಉರಿಯಾಗುತ್ತಿದೆ ಎಂದು ವಿರೋಧ ಪಕ್ಷದವರ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

“10,000 ಕೋಟಿ ಲೆಕ್ಕಕ್ಕೆ ಪ್ರಶ್ನೆ”

“10,000 ಕೋಟಿ ಎಂದು ಪೇಪರ್ ಅಲ್ಲಾಡಿಸುವವರಿಗೆ ನಾನು ಲೆಕ್ಕ ಕೊಡುವ ಅವಶ್ಯಕತೆ ಇಲ್ಲ. ನಾನು ಜನರಿಗೆ ಗುಲಾಮ, ಅವರಿಗೆ ಗುಲಾಮನಲ್ಲ. 10 ಸಾವಿರ ಕೋಟಿ ಲೆಕ್ಕ ಕೊಡಿ ಎಂದು ಪತ್ರ ಬರೆದಿದ್ದಾರೆ. ಏನು ಲೆಕ್ಕ ಕೊಡುವುದು?” ಎಂದು ಪ್ರಶ್ನಿಸಿದರು.

“ಸಿಎಂ ಡಿಕೆಶಿ ನೇತೃತ್ವದಲ್ಲಿ ಹೊಸ ಇತಿಹಾಸ”

ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಅವರ ನೇತೃತ್ವದಲ್ಲಿ 2028ಕ್ಕೆ ಕಾಂಗ್ರೆಸ್ ಅನ್ನು ಮತ್ತಷ್ಟು ಬಲಪಡಿಸುತ್ತೇವೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಕಟಿಬದ್ಧನಾಗಿದ್ದೇನೆ. ಕದಲೂರು ಉದಯ್ ಅವರು ಉದ್ಯಮ ಬಿಟ್ಟು ಕ್ಷೇತ್ರದ  ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕಣ್ಣೀರಾಕುವ ಅವಶ್ಯಕತೆ ಇಲ್ಲ”

ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಮುಗಿದುಹೋಯಿತು ಎಂದು ಬರೆಯುತ್ತಿದ್ದಾರೆ. ಅವರ ಟೀಕೆಗೆ ಗೌರವಯುತವಾಗಿ ಉತ್ತರ ಕೊಡಬೇಕು. ನಮ್ಮ ಕೆಲಸವೇ ಅವರ ಟೀಕೆಗೆ ಉತ್ತರವಾಗಲಿದೆ ಎಂದು ಕಾರ್ಯಕರ್ತರಿಗೆ ಸಚಿವ  ಚಲುವರಾಯಸ್ವಾಮಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನೂತನ ಸಚಿವ ಪಿಎಂ ನರೇಂದ್ರಸ್ವಾಮಿ ಯವರು ಮಾತನಾಡಿದರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಸ್ಥಳೀಯ ಮುಖಂಡರು, ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

Key words: Mandya, stronghold, Congress, Minister, Chaluvarayaswamy,