Sunday, August 2, 2026

BDA Apartments

Home Front Page ಹಸ್ತ ಪ್ರತಿಗಳು ಜ್ಞಾನನಿಧಿ, ಅವುಗಳನ್ನು ಸಂರಕ್ಷಿಸುವುದು ಬಹಳ ಮುಖ್ಯ : ಪ್ರೊ.ಜಿ.ಹೇಮಂತ್ ಕುಮಾರ್

ಹಸ್ತ ಪ್ರತಿಗಳು ಜ್ಞಾನನಿಧಿ, ಅವುಗಳನ್ನು ಸಂರಕ್ಷಿಸುವುದು ಬಹಳ ಮುಖ್ಯ : ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು, ಆಗಸ್ಟ್,25,2020(www.justkannda.in) ; ಹಸ್ತ ಪ್ರತಿಗಳು ಜ್ಞಾನನಿಧಿಯಾಗಿದ್ದು, ಅವುಗಳನ್ನು ಸಂರಕ್ಷಿಸುವುದು ಬಹಳ ಮುಖ್ಯವಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

jk-logo-justkannada-logo

ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿರುವ ಪುರಾತನ ಕಾಲದ ಹಸ್ತ ಪ್ರತಿಗಳನ್ನು ಸಂರಕ್ಷಿಸುವ ಧೂಮಕೋಷ್ಠ(ಫಿಮಿಗೇಷನ್) ಸೆಂಟರ್ ಗೆ ಸೋಮವಾರ ಚಾಲನೆ ನೀಡಿ ಅವರು  ಮಾತನಾಡಿದರು.

ಮೈಸೂರು ವಿವಿ ಅಧೀನದಲ್ಲಿರುವ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಪ್ರಾಚೀನ ತಾಳೆ ಗರಿ ಗ್ರಂಥಗಳು ಸೇರಿದಂತೆ ಎಲ್ಲ ಭಾಷೆಯ ಗ್ರಂಥಗಳಿವೆ. ಅದರಲ್ಲಿ ಅತಿ ಚಿಕ್ಕದಾದ ಕೌಟಿಲ್ಯನ ಅರ್ಥಶಾಸ್ತ್ರ ಸೇರಿದಂತೆ ಹಲವು ಅಮೂಲ್ಯ ಗ್ರಂಥಗಳಿವೆ. ಈ ತಾಳೆಗರಿಯ ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಫಿಮಿಗೇಷನ್ ಸೆಂಟರ್ ಅನ್ನು ಆರಂಭ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಇಟರ್ನ್ ಶಿಪ್ ಮೂಲಕ ಹಸ್ತಪ್ರತಿ ಸಂರಕ್ಷಣೆ ಮಾಹಿತಿ 

ಸಾವಿರಾರು ಹಸ್ತ ಪ್ರತಿಗಳಿದ್ದು, ಅವುಗಳನ್ನು ಸಂರಕ್ಷಿಸುವ ಯೋಜನೆ ರೂಪಿಸಲಾಗುವುದು. ದೂಮಕೋಷ್ಠ(ಫಿಮಿಗೇಷನ್) ಸೆಂಟರ್ ಅನ್ನು ದೊಡ್ಡದಾಗಿ ಆರಂಭಿಸಲಾಗುವುದು. ಕೆಮಿಕಲ್ ಬಳಸಿ ಹಸ್ತಪ್ರತಿಗಳನ್ನು ಹೇಗೆ ಸಂರಕ್ಷಿಸುವುದು ಇತ್ಯಾದಿ ಮಾಹಿತಿ ಕುರಿತು ವಿದ್ಯಾರ್ಥಿಗಳಿಗೆ ಇಟರ್ನ್ ಶಿಪ್ ಮೂಲಕ ಮಾಹಿತಿ ನೀಡಲಾಗುವುದು.

ಧೂಮಕೋಷ್ಠ(ಫಿಮಿಗೇಷನ್) ಸೆಂಟರ್ ಅನ್ನು ಲ್ಯಾಬೊರೇಟರಿ ಮಾದರಿಯಲ್ಲಿ ಸಿದ್ದಪಡಿಸಲು ಯೋಜನೆ ನೀಡುವಂತೆ ತಿಳಿಸಿದ್ದು, ಅಮೂಲ್ಯವಾದ ಗ್ರಂಥಗಳನ್ನು ಆರು ತಿಂಗಳೊಳಗೆ ಪ್ರಕಟಿಸಿ ಬೇಕಾದ ಸೌಲಭ್ಯ ಕೊಡಲಾಗುವುದು. ಇದು ಒಳ್ಳೆಯ ಪ್ರಯತ್ನವಾಗಿದ್ದು, ನಿಜಕ್ಕೂ ಸಂತೋಷದ ವಿಷಯ. ಈ ದಿಕ್ಕಿನಲ್ಲಿ ನಿರ್ದೇಶಕರು ತೆಗೆದುಕೊಂಡಿರುವ ಕಾರ್ಯಕ್ಕೆ ಸಂಪೂರ್ಣ ಸಹಕಾರವಿದೆ ಎಂದರು.

ಹಸ್ತಪ್ರತಿಗಳಿಗೆ ಡಿಜಿಟಲ್ ಸ್ಪರ್ಶ

ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿರುವ ಹಸ್ತಪ್ರತಿಗಳು ಕೆಡದಂತೆ ರಾಸಾಯನಿಕಗಳಿಂದ ಸಂರಕ್ಷಿಸುವುದರ ಜೊತೆಗೆ ಅವುಗಳಿಗೆ ಡಿಜಿಟಲ್ ಸ್ಪರ್ಶ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎರಡು ವರ್ಷದೊಳಗೆ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಹಸ್ತಪ್ರತಿಗಳು ಸಿದ್ದಗೊಳ್ಳಲಿವೆ ಎಂದು ತಿಳಿಸಿದರು.

ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಎಸ್.ಶಿವಪ್ಪ ಮಾತನಾಡಿ, ದೂಮಕೋಷ್ಠ ಕೊಠಡಿ ಆರಂಭದಿಂದ ಹಸ್ತಪ್ರತಿಗಳ ಸಂರಕ್ಷಣೆಯು ಸಹಕಾರಿಯಾಗಿದ್ದು, ವರ್ಷದಲ್ಲಿ ಸುಮಾರು 10 ಸಾವಿರ ಹಸ್ತಪ್ರತಿಗಳನ್ನು ಸಂರಕ್ಷಿಸಬೇಕಿದೆ ಎಂದರು.

ಹಸ್ತಪ್ರತಿಗಳನ್ನು ಅಗತ್ಯ ವಿಧಿವಿಧಾನವಾಗಿ ಶುಚಿಗೊಳಿಸುವುದರ ಜೊತೆಗೆ ಸಂರಕ್ಷಿಸಬೇಕಿದೆ. ಅವುಗಳನ್ನು ಸ್ಕ್ಯಾನಿಂಗ್ ಮಾಡಿ, ಅದಕ್ಕೆ ವಿವರಣೆಯೊಂದಿಗೆ ಸಂಪೂರ್ಣ ಮಾಹಿತಿ ನೀಡಬೇಕಿದೆ. ಹಸ್ತಪ್ರತಿಗಳಲ್ಲಿ ವೈಚಾರಿಕ, ವೈಜ್ಞಾನಿಕ ವಿಚಾರಗಳಲಿದ್ದು, ಈ ಎಲ್ಲಾ ಅಂಶಗಳನ್ನು ಜನಸಾಮಾನ್ಯರಿಗೆ ಮೊಬೈಲ್ ನಲ್ಲಿಯೇ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕಿದೆ. ಸಂಶೋಧನಾಲಯದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಶ್ರೀ ತತ್ವ ಶ್ರೀರ್ಷಿಕೆಯಡಿ ಬರೆದಿರುವ ಗ್ರಂಥಗಳನ್ನು ಮುದ್ರಣ ಮಾಡಿಸಬೇಕಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ

Manuscripts-knowledgeable-preserving-important-Prof.G. Hemant Kumar

6 ತಿಂಗಳು ಹಸ್ತಪ್ರತಿ ಸಂರಕ್ಷಣೆ ಕಾರ್ಯದಲ್ಲಿ ಶ್ರಮಿಸಿದ ಮಹಾರಾಜ ಕಾಲೇಜಿನ ಸಂಸ್ಕೃತ ಹಾಗೂ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ 22 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಮಹಾರಾಜ ಕಾಲೇಜು ಆಡಳಿತಾಧಿಕಾರಿ ಡಾ.ಜಿ.ಎಚ್.ನಾಗರಾಜ್, ಪ್ರಾಚೀನ ಇತಿಹಾಸ, ಪುರಾತತ್ವ ವಿಭಾಗದ ಮುಖ್ಯ ಸಂಯೋಜನಾಧಿಕಾರಿ ಡಾ.ರೋಹಿತ್ ಈಶ್ವರ್ ಇತರರು ಉಪಸ್ಥಿತರಿದ್ದರು.

key words  ; Manuscripts-knowledgeable-preserving-important-Prof.G. Hemant Kumar