ಮಳೆ ಅಡ್ಡಿ: ನಿರೀಕ್ಷಿತ ಮಟ್ಟದಲ್ಲಿ ರೈತರ ಕೈ ಹಿಡಿಯದ ಮಾವು ಮೇಳ.

ಮೈಸೂರು,ಮೇ,27,2025 (www.justkannada.in):  ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದ್ದು ಈ ಮಧ್ಯೆ ಭಾರಿ ಮಳೆಯಿಂದಾಗಿ ಮೈಸೂರಿನಲ್ಲಿ ಆಯೋಜಿಸಿದ್ದ ಮಾವು ಮೇಳ ನಿರೀಕ್ಷಿತ ಮಟ್ಟದಲ್ಲಿ ಕೈಹಿಡಿದಿಲ್ಲ ಎಂಬ ಬೇಸರ ವ್ಯಕ್ತವಾಗಿದೆ.

ಕಳೆದ ವಾರ ಜಿಲ್ಲಾ ತೋಟಗಾರಿಕಾ ಇಲಾಖೆ ವತಿಯಿಂದ ಮೂರು ದಿನಗಳ ಕಾಲ ಮಾವು ಮೇಳ ಆಯೋಜನೆ ಮಾಡಲಾಗಿತ್ತು. ಕಳೆದ ಶುಕ್ರವಾರ,ಶನಿವಾರ ಮತ್ತು ಭಾನುವಾರ ಆಯೋಜಿಸಲಾಗಿತ್ತು. ಮಾವುಮೇಳಕ್ಕೆ ಮೈಸೂರು, ಚಾಮರಾಜನಗರ, ರಾಮನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಆಗಮಿಸಿದ್ದರು. ಆದರೆ ಈ ಬಾರಿಯ ಮಾವು ಮೇಳಕ್ಕೆ ಮಳೆ ಅಡ್ಡಿಪಡಿಸಿದ್ದು, ಮಾವು ಮೇಳ ಯಶಸ್ವಿ ಆಗದಿದ್ದಕ್ಕೆ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಮಮತಾ ಬೇಸರ ವ್ಯಕ್ತಪಡಿಸಿದ್ದಾರೆ.

ಮೊದಲ ಎರಡು ದಿನ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿತ್ತು. 49 ಸ್ಟಾಲ್ ಗಳನ್ನ ತೆರೆಯಲಾಗಿತ್ತು. ಸುಮಾರು 200 ಟನ್ ಗಳಷ್ಟು ಮಾವು ವಿವಿಧ ಜಿಲ್ಲೆಗಳಿಂದ ಬಂದಿತ್ತು. ಸುಮಾರು 110 ಟನ್ ಗಳಷ್ಟು ಮಾವು ಮಾರಾಟವಾಯಿತು. ಸುಮಾರು 90 ಟನ್ ಮಾರಾಟವಾಗದೆ ಉಳಿಯಿತು‌. ಕೊನೆಯ ದಿನ ಮಾರಾಟವಾಗುವ ನಿರೀಕ್ಷೆ ಇತ್ತು. ಆದರೆ ನಿರಂತರ ಮಳೆ ಬಿದ್ದ ಕಾರಣ ಗ್ರಾಹಕರು ಬಾರದೆ ಮಾರಾಟವಾಗಲಿಲ್ಲ. ಹಾಗಾಗಿ ಕೊಂಚ ಬೇಸರದಲ್ಲೇ ರೈತರು ವಾಪಸ್ ಹೋದರು ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಮಮತಾ ಹೇಳಿದರು.

Key words:  Mysore, Rain, disrupts, mango fair