ಅಶೋಕ್, ವಿಜಯೇಂದ್ರ, ಕರಾವಳಿ ಭಾಗದ ಬಿಜೆಪಿ ಶಾಸಕರ ಮೇಲೆ ದೇಶದ್ರೋಹಿ ಕೇಸ್ ಹಾಕಿ, ಗಡಿಪಾರು ಮಾಡಿ- ಎಂ.ಲಕ್ಷ್ಮಣ್

ಮೈಸೂರು,ಜೂನ್,3,2025 (www.justkannada.in):  ದಕ್ಷಿಣ ಕರ್ನಾಟಕ ಭಾಗದ ಎಲ್ಲಾ ಬಿಜೆಪಿ ಶಾಸಕರು ಹಾಗೂ ಆರ್. ಅಶೋಕ್, ವಿಜಯೇಂದ್ರ ಮೇಲೆ ದೇಶದ್ರೋಹಿ ಕೇಸ್ ಹಾಕಿ, ಅವರೆಲ್ಲರನ್ನೂ ಗಡಿಪಾರು ಮಾಡಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.

ಕರಾವಳಿ ಗಲಭೆ ವಿಚಾರ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ , ಕಲ್ಲಡ್ಕ ಪ್ರಭಾಕರ್ ಅಲ್ಲ ಅವರು ಕಳ್ಳ ಪ್ರಭಾಕರ್ . ಕಲ್ಲು ಹಾಕುವುದೇ ಕಲ್ಲಡ್ಕ ಪ್ರಭಾಕರ್ ಅವರೇನೂ ಸ್ವಾತಂತ್ರ್ಯ ಹೋರಾಟಗಾರರಾ ? ಕರಾವಳಿ ಭಾಗದಲ್ಲಿರುವ 6 ಜನ ಬಿಜೆಪಿ ಶಾಸಕರು ಮತ್ತು ಸಿ.ಟಿ ರವಿ, ಆರ್. ಅಶೋಕ್, ವಿಜಯೇಂದ್ರ ಮೇಲೆ ದೇಶದ್ರೋಹಿ ಕೇಸ್ ಹಾಕಿ. ಅವರೆಲ್ಲರನ್ನೂ ಗಡಿಪಾರು ಮಾಡಿ.  ದೇಶ ದ್ರೋಹ ಕೇಸ್ ದಾಖಲಿಸಿ ಒದ್ದು ಜೈಲಿಗೆ ಹಾಕಬೇಕು. ಇವರಿಂದಲೇ ರಾಜ್ಯದಲ್ಲಿ, ಕರಾವಳಿಯಲ್ಲಿ ಅಶಾಂತಿ ಎದ್ದಿರುವುದು. ಇವರು ಸಮಾಜದಲ್ಲಿ ಕೋಮು ದ್ವೇಷ ಉಂಟು ಮಾಡುವ, ಹಿಂದು ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇವರ ಮೇಲೆ ಕೇಸ್ ಹಾಕಿ ಜೈಲಿಗೆ ಅಟ್ಟಬೇಕು ಎಂದು ವಾಗ್ದಾಳಿ ನಡೆಸಿದರು.

ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ರಾಜ್ಯ ಸರ್ಕಾರದ 15 ಸಾವಿರ ಕೋಟಿಗೂ ಹೆಚ್ಚು ಅಕ್ರಮವೆಸಗಿದೆ ಎಂದು ಆರೋಪ ಮಾಡುವ ಬಿಜೆಪಿ ಸುಳ್ಳು ಹೇಳುತ್ತಿದೆ. ಆ ಯೋಜನೆಯ ಒಟ್ಟು ಮೊತ್ತವೇ ಕೇವಲ 1500 ಕೋಟಿ ರೂ ಯೋಜನೆ. ರಾಜ್ಯದಲ್ಲಿ ಸುಮಾರು 3 ಸಾವಿರ ವಿದ್ಯುತ್ ಮೀಟರ್ ಗಳಿವೆ. ಅದರಲ್ಲಿ ಈಗ ಕೇವಲ ನಾಲ್ಕು ಲಕ್ಷ ಸ್ಮಾರ್ಟ್ ಮೀಟರ್ ಗಳನ್ನ ಮಾತ್ರ ಅಳವಡಿಕೆಗೆ ಸರ್ಕಾರ ಮುಂದಾಗಿದೆ. ಅದರಲ್ಲಿ ಯಾವುದೇ ಅಕ್ರಮವನ್ನ ಸರ್ಕಾರ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

ಈಗಾಗಲೇ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಸ್ಮಾರ್ಟ್ ಮೀಟರ್ ಅಳವಡಿಕೆ ಆಗಿದೆ. ದೇಶದಲ್ಲಿ ಕರ್ನಾಟಕ ಮತ್ತು ತೆಲಂಗಾಣ ಹೊರತುಪಡಿಸಿ ಬೇರೆಲ್ಲಾ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯಾಗಿದೆ. ಈಗ ನಮ್ಮ ರಾಜ್ಯದಲ್ಲಿ ಅಳವಡಿಕೆ ಪ್ರಕ್ರಿಯೆ ಆರಂಭವಾಗಿದೆ. ಅದಕ್ಕೆ ಕೆಲವು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸ್ಮಾರ್ಟ್ ಮೀಟರ್ ಅಳವಡಿಕೆ ರಾಜಶ್ರೀ ಎಲೆಕ್ಟ್ರಿಕ್ ಕಂಪನಿಗೆ ಕೊಟ್ಟಿದೆ. ಬಿಜೆಪಿ ಮುಖಂಡ ಅಶ್ವಥ್ ನಾರಾಯಣ್ ಅವರಿಗೆ ಸೇರಿದ ಸಹ್ಯಾದ್ರಿ ಎಲೆಕ್ಟ್ರಿಕ್ ಕಂಪನಿಗೆ ಕಂಟ್ರಾಕ್ಟರ್ ಮಿಸ್ಸಾಗಿದೆ ಅದಕ್ಕೆ ನಮ್ಮ ಸರ್ಕಾರದ ಮೇಲೆ ಅಕ್ರಮದ ಆರೋಪ ಮಾಡುತ್ತಿದ್ದಾರೆ. ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಸರ್ಕಾರ ಯಾವುದೇ ಅಕ್ರಮ ಮಾಡಿಲ್ಲ ಎಂದು ಬಿಜೆಪಿ ನಾಯಕರಿಗೆ ಲಕ್ಷ್ಮಣ್ ತಿರುಗೇಟು ಕೊಟ್ಟರು.vtu

Key words: File, case, against, Ashok, Vijayendra, Mysore, M. Laxman