ಹೊಳೆನರಸೀಪುರಕ್ಕಿಂತ ಒಂದು ಮತ ಹೆಚ್ಚು ಲೀಡ್ ಹಾಸನದಲ್ಲಿ ಬರುತ್ತೆ : ಗೊಂದಲಗಳಿಗೆ ಸ್ಪಷ್ಟನೆ ನೀಡಿದ ಪ್ರೀತಂಗೌಡ

ಮೈಸೂರು,ಏಪ್ರಿಲ್,8,2024 (www.justkannada.in): ಹಾಸನ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮತ್ತು ಬಿಜೆಪಿ ಮುಖಂಡ ಮಾಜಿ ಶಾಸಕ ಪ್ರೀತಂಗೌಡ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಪ್ರೀತಂಗೌಡ ಬೆಂಬಲಿಗರು ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ ಎಂದು ಸುದ್ದಿಯಾಗುತ್ತಿರುವ ಹಿನ್ನೆಲೆ ಈ ಬಗ್ಗೆ ಸ್ವತಃ ಮಾಜಿ ಶಾಸಕ ಪ್ರೀತಂಗೌಡ ಅವರೇ ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿರುವ ಪ್ರೀತಂಗೌಡ,  ಹೊಳೆ ನರಸೀಪುರಕ್ಕಿಂತ ಒಂದು ಮತ ಹೆಚ್ಚು ಲೀಡ್ ಹಾಸನದಲ್ಲಿ ಬರುತ್ತೆ. ಇದಕ್ಕಿಂತ ಇನೇನ್ನು ಹೇಳಬೇಕು ಹೇಳಿ. ಹೊಳೆ ನರಸೀಪುರದಲ್ಲಿ ಶಾಸಕರು ಯಾರು..? ಅಭ್ಯರ್ಥಿಯ ತಂದೆ ಅಲ್ವ ? ಅವರಿಗಿಂತ ಹೆಚ್ಚು ಲೀಡ್ ಹಾಸನದಲ್ಲಿ ಬರುತ್ತೆ ಎಂದು ಸ್ಪಷ್ಟನೆ ನೀಡಿದರು.

ನಾನು ಇಂದು ರಾತ್ರಿ ಹಬ್ಬಕ್ಕೆ ಹಾಸನಕ್ಕೆ ಹೋಗುತ್ತೇನೆ. ನಮ್ಮ ಯಾವ ಬೆಂಬಲಿಗರು ಕಾಂಗ್ರೆಸ್ ಜತೆ ಹೋಗಿಲ್ಲ. ಈಗ ಯಾರೋ ಹೋಗಿರುವ ಒಬ್ಬ ಬೂತ್ ಅಧ್ಯಕ್ಷ ಕೂಡ ಅಲ್ಲ. ಪಾಂಪ್ಲೆಟ್ ಪಡೆದ ಕೂಡಲೇ  ಕಾಂಗ್ರೆಸ್ ಸೇರಿದಂತೆ ಆಗಲ್ಲ. ನಾವೇ ಕಾಂಗ್ರೆಸ್ ನವರನ್ನು ಇಲ್ಲಿಗೆ ಕರೆದುಕೊಂಡು ಬರುವ ಪ್ರಯತ್ನ ಮಾಡುತ್ತಿದ್ದೇನೆ. ಇಲ್ಲಿಂದ ಅಲ್ಲಿಗೆ ಹೋಗೋ ಪ್ರಶ್ನೆ ಯಾರಿಗೆ ಬರುತ್ತದೆ ಎಂದು ಪ್ರೀತಂಗೌಡ ತಿಳಿಸಿದರು.

ನಮ್ಮ ಕಾರ್ಯಕರ್ತರ ಪ್ರತ್ಯೇಕ ಸಭೆಯ ಅಗತ್ಯ ಏನು ಇಲ್ಲ. 2ನೇ ತಾರೀಕು ಸಭೆ ಮಾಡಿ ಕೆಲಸ ಮಾಡಲು ಹೇಳಿದ್ದೇನೆ. ಎಲ್ಲರೂ ಎನ್ ಡಿ ಎ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಸುಮ್ಮನೆ ಪದೇ ಪದೆ ಎಲ್ಲಾ ಊಹಾಪೋಹಗಳಿಗೆ ಉತ್ತರ ಕೊಡಲು ಆಗುವುದಿಲ್ಲ. ಎನ್.ಡಿ.ಎ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ. ಎಲ್ಲರನ್ನೂ ಗೆಲ್ಲಿಸುತ್ತೇವೆ ಎಂದು ಮಾಜಿ ಶಾಸಕ ಪ್ರೀತಂಗೌಡ ತಿಳಿಸಿದರು.

Key words: Lead- Hassan –BJP- Prithamgowda-mysore