ಬೆಂಗಳೂರು,ಜುಲೈ,9,2025 (www.justkannada.in): ಸುಳ್ಳು ಸುದ್ದಿಗಳ ಹಾವಳಿ ಮತ್ತು ಊಹಾಪೋಹದ ಸುದ್ದಿಗಳ ಹಾವಳಿ ಮಿತಿ ಮೀರುತ್ತಿದೆ. ಈ ಪಿಡುಗು ತಡೆಗಟ್ಟಲು ರಾಜ್ಯ ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
ನಗರದ ಪ್ರೆಸ್ ಕ್ಲಬ್ ಆವರಣದಲ್ಲಿ ಕೆಂಧೂಳಿ ವಾರಪತ್ರಿಕೆ ಆಯೋಜಿಸಿದ್ದ “ವಾರಪತ್ರಿಕೆ ಅಂದು -ಇಂದು” ಕುರಿತ ವಿಚಾರಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಕೆ.ವಿ ಪ್ರಭಾಕರ್ ಅವರು ಮಾತನಾಡಿದರು.
ಸುಳ್ಳು ಸುದ್ದಿಗಳ ಹಾವಳಿ ಮತ್ತು ಊಹಾಪೋಹದ ಸುದ್ದಿಗಳ ಹಾವಳಿ ಮಿತಿ ಮೀರುತ್ತಿದೆ. ಈ ಪಿಡುಗು ತಡೆಗಟ್ಟಲು ರಾಜ್ಯ ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ. ರಾಜ್ಯ ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ಈ ಕುರಿತು ವಿಧೇಯಕ ಮಂಡಿಸಲಾಗುವುದು ಎಂದು ಪ್ರಭಾಕರ್ ತಿಳಿಸಿದರು.
ಕೆಲವು ಗಂಭೀರ ವಿಷಯಗಳ ಪ್ರಸಾರ ಮಾಡಬೇಕಾದ ಮಾಧ್ಯಮಗಳು ಅದನ್ನು ಬಿಟ್ಟು ಮೌಢ್ಯ ಬಿತ್ತುವ ಕೆಲಸವಾಗುತ್ತಿದೆ ಈ ಮೂಲಕ ಪತ್ರಿಕೋದ್ಯಮ ಹಾದಿ ತಪ್ಪುತ್ತಿದೆ ಎಂದರು.
ಹಿರಿಯ ಪತ್ರಕರ್ತ ಶಶಿಧರ್ ಭಟ್ ಮಾತನಾಡಿ, ಪತ್ರಿಕೋದ್ಯಮದ ಮಡಿವಂತಿಕೆ ದೂರವಾಗಬೇಕು. ಪ್ರಶ್ನೆ ಮಾಡುವ ಹಕ್ಕನ್ನು ಪತ್ರಕರ್ತರು ಕಳೆದುಕೊಳ್ಳಬಾರದು. ಆಳುವ ಸರ್ಕಾರಗಳ ಕೈಗೊಂಬೆಯಾಗಿ ಮಾಧ್ಯಮಗಳು ಇಂದು ಕೆಲಸ ಮಾಡುತ್ತಿರುವುದು ತೀವ್ರ ನೋವು ತಂದಿದೆ ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಆರ್. ಜಿ ಹಳ್ಳಿ ನಾಗರಾಜ್, ಕನ್ನಡ ಪತ್ರಿಕೋದ್ಯಮದಲ್ಲಿ ವಾರಪತ್ರಿಕೆಗಳ ಗತವೈಭವ ಹಾಗೂ ಇತಿಹಾಸವನ್ನು ಮೆಲುಕು ಹಾಕಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ್ ತಗಡೂರು ಮಾತನಾಡಿ, ಮಾಧ್ಯಮ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಹಾಗೂ ಬದಲಾಗುತ್ತಿರುವ ಪತ್ರಕರ್ತರ ವೃತ್ತಿ ಬದುಕು ಕುರಿತು ಅಭಿಪ್ರಾಯ ವ್ಯಕ್ತಪಡಿಸಿ, ಒಟ್ಟಾರೆ, ಪತ್ರಿಕೋದ್ಯಮದ ಗಾಂಭೀರ್ಯ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.
ಅಂಕಣಗಾರ್ತಿ ಕುಸುಮ ಆಯರಹಳ್ಳಿ ಮಾತನಾಡಿ, ಮಾಧ್ಯಮ ಲೋಕದಲ್ಲಿ ಅಜಗಜಾಂತರ ಬದಲಾವಣೆಗಳು ಆಗಿವೆ. ಆದರೆ, ವೈಚಾರಿಕ ಪ್ರೌಢಿಮೆ ಇಂದಿನ ಯುವ ಪೀಳಿಗೆಯ ಪತ್ರಕರ್ತರಲ್ಲಿ ಕಣ್ಮರೆಯಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಂಧೂಳಿ ಪತ್ರಿಕೆಯ ಸಂಪಾದಕ ತುರುವನೂರು ಮಂಜುನಾಥ್ ಅತಿಥಿಗಳನ್ನು ಗೌರವಿಸಿದರು.
ಕೆಂಧೂಳಿ ಪತ್ರಿಕೆಯ ಹಿರಿಯ ವರದಿಗಾರ ಪರಶಿವ ಧನಗೂರು ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Key words: fake news, Law, implemented, next session, KV Prabhakar