ಶ್ರದ್ಧೆ, ನಿರಂತರ ಪರಿಶ್ರಮದ ಮೂಲಕ ನಿಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಿ- ಕೆ.ಎ. ದಯಾನಂದ್ ಕಿವಿಮಾತು

ಮೈಸೂರು, ಜೂನ್,10,2025 (www.justkannada.in):  ಮನುಷ್ಯ ಕನಸು ಕಾಣಬೇಕು. ಹೇಗೆಂದರೆ ಗಾಢನಿದ್ರೆಯನ್ನು ಬಡಿದೆಬ್ಬಿಸುವ ಕನಸು ಅದಾಗಿರಬೇಕು. ಶ್ರದ್ಧೆ ಮತ್ತು ನಿರಂತರ ಪರಿಶ್ರಮದ ಮೂಲಕ ಆ ಕನಸನ್ನು ಸಾಕಾರಗೊಳಿಸಿಕೊಳ್ಳಬೇಕು. ಅದನ್ನು ಬಿಟ್ಟು ಸಿನಿ ಮತ್ತು ಕ್ರಿಕೆಟ್‌ತಾರೆಯರ ಕುರಿತು ಹಗಲುಗನಸು ಕಾಣುತ್ತಾ ರಾತ್ರಿ ಗಾಢನಿದ್ರೆಯಲ್ಲಿದ್ದರೆ ಏನೂ ಪ್ರಯೋಜನವಿಲ್ಲ, ಆರ್.ಸಿ.ಬಿ. ದುರಂತವನ್ನು ನೆನಪಿಸಿಕೊಳ್ಳಿ ಎಂದು ಕರ್ನಾಟಕ ಗೃಹ ಮಂಡಳಿಯ ಆಯುಕ್ತ ಕೆ.ಎ. ದಯಾನಂದ್ ಅವರು ಅಭಿಪ್ರಾಯಪಟ್ಟರು.

ಮಂಗಳವಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ 50 ದಿನಗಳ ಐ.ಎ.ಎಸ್.‌ ಮತ್ತು ಕೆ.ಎ.ಎಸ್.‌ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ, ಶುಭ ಹಾರೈಸಿ ಅಧ್ಯಯನ ಪುಸ್ತಕಬಿಡುಗಡೆ ಮಾಡಿ ಮಾತನಾಡಿದರು.

ಬಡನತ, ಕೂಲಿಯ ಕಷ್ಟ ಮತ್ತು ಹಸಿವಿನ ಒತ್ತಡ ಇದ್ದವರಿಗೆ ಮಾತ್ರ ಸಾಧನೆ ಮಾಡಲು ಸಾಧ್ಯ. ಉದಾಹರಣೆಗೆ ನಾನು ಕೆ.ಆರ್.ನಗರ ತಾಲ್ಲೂಕಿನ ಕೆಸ್ತೂರು ಕೊಪ್ಪಲಿನ ಗುಡಿಸಲಿನಲ್ಲಿ ವಾಸವಿದ್ದು, ಮುಂಜಾನೆ ಎದ್ದು ಐದಾರು ಕಿ.ಮೀ.ನಡೆದು ಕಬ್ಬು ಮತ್ತು ಟೊಮೆಟೋ ಹಣ್ಣನ್ನು ಕಿತ್ತು, ಮತ್ತೆ ಐದಾರುಕಿ.ಮೀ ಹೊತ್ತು ಪಕ್ಕದ ಊರಿನ ಹೆಬ್ಬಾಳಿಗೆ ನಡೆಯುತ್ತಿದ್ದ ಕಡು ಕಷ್ಟದ ಆ ದಿನಗಳು, ನನ್ನಲ್ಲಿ ಹಠ ಮತ್ತು ಛಲದ ಕಿಚ್ಚನ್ನು ಹಚ್ಚಿಸಿದವು. ನನ್ನ ಮತ್ತು ನನ್ನ ಕುಟುಂಬವನ್ನು ಕಿತ್ತು ತಿನ್ನುತ್ತಾ ಕಾಡುವ ಈ ಬಡತನ ಮತ್ತು ಈ ಹೊಟ್ಟೆಹಸಿವಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲೆಂದೇ ಆರಂಭಿಸಿದ ಓದಿನ ಓಟ ಈಗ ನನ್ನನ್ನು ಐ.ಎ.ಎಸ್.‌ ವರೆಗೆ ತಂದು ನಿಲ್ಲಿಸಿದೆ.

ನಿಮ್ಮ ಹಾಗೆ ನಾನು ಕಾಲೇಜಿನ ಜಾಲಿ ಜೀವನವನ್ನುಎಂಜಾಯ್‌ ಮಾಡಲಿಲ್ಲ. ಬದಲಾಗಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಲೈನ್‌ಮನ್‌ ಆಗಿ ಕೆಲಸ ಮಾಡಿದೆ. ತಳ್ಳುವ ಗಾಡಿಯಲ್ಲಿಈರುಳ್ಳಿ-ಬೆಳ್ಳುಳ್ಳಿ ಮಾರಾಟ ಮಾಡಿ,ಬಿಡುವಿನ ಸಮಯದಲ್ಲಿ ಸಾರ್ವಜನಿಕ ಗ್ರಂಥಾಲಯದಲ್ಲಿ ಓದಿ ಕೆ.ಎ.ಎಸ್.‌ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ಎ.ಸಿ. ಆಗಿ ಆಯ್ಕೆಯಾಗಿ ಇಂದು ಐ.ಎ.ಎಸ್.‌ ಅಧಿಕಾರಿಯಾಗಿದ್ದೇನೆ. ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನರಿಗೆ ಜಿಲ್ಲಾಧಿಕಾರಿಯಾಗಿ ಒಂದಲ್ಲ ಎರಡು ಬಾರಿ ಆಗಿದ್ದೆ.  1993ರಲ್ಲಿ ಬೆಂಗಳೂರಿನ ಇಂದಿನ ಏಟ್ರಿಯಲ್ ಹೋಟೇಲ್‌ ಕಟ್ಟುವಾಗ ನಾನು ಕಾರ್ಮಿಕನಾಗಿ ದುಡಿದಿದ್ದೆ; ಆಶ್ಚರ್ಯವೆಂದರೆ 2018ರಲ್ಲಿ ನಾನು ಬೆಂಗಳೂರಿನ ಜಿಲ್ಲಾಧಿಕಾರಿಯಾಗಿದ್ದಾಗ ಅದೇ ಹೊಟೇಲ್‌ಸಮಸ್ಯೆ ಕುರಿತು ಅದರ ಮಾಲೀಕ ನನನ್ನ ಭೇಟಿ ಮಾಡಲು ಕಚೇರಿಯ ಹೊರಗೆ ಕಾಯುತ್ತಿದ್ದ ಅಂದರೆ, ನೀವೇ ಯೋಚಿಸಿ ಮನಸ್ಸು ಮಾಡಿದರೆ ಯಾರು ಏನು ಬೇಕಾದರೂ ಮತ್ತು ಯಾವ ಏತ್ತರಕ್ಕೆ ಬೇಕಾದರೂ ಏರಬಲ್ಲ ಎನ್ನುವುದಕ್ಕೆ ಇದೊಂದು ಸಣ್ಣಉದಾರಹಣೆ ಎಂದರು.

1999ರಲ್ಲಿ ಕೆ.ಎ.ಎಸ್.‌ ಪರೀಕ್ಷೆಯಲ್ಲಿ ನನ್ನೊಂದಿಗೆ ಸರಿಸುಮಾರು 20ಜನ ಎ.ಸಿ. ಆಗಿ ಆಯ್ಕೆಯಾಗಿದ್ದರು. ಅವರಲ್ಲಿ ಕಂಪ್ಯೂಟರ್‌ ಪದವಿ, ಎಂಜಿನಿಯರಿಂಗ್‌ ಮತ್ತು ವೈದ್ಯರು ಜೊತೆಗಿದ್ದರು. ನಾನು ಶುದ್ಧ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ಓದಿದವನು. ಇವರ ಮಧ್ಯ ನಾನು ಸರ್ವೈವಲ್‌ಆಗುತ್ತೇನೆಂದು ಕನಸು ಕಂಡಿರಲಿಲ್ಲ. ಆದರೆ ನನ್ನಲ್ಲಿ ಶ್ರದ್ಧೆ ಮತ್ತು ನಿರಂತರ ಪರಿಶ್ರಮ ಹಾಕುವ ಗಟ್ಟಿ ಮನಸ್ಸು ಮಾತ್ರ ಇತ್ತು. ಇದರ ಫಲವಾಗಿ ನನಗೆಕಂಪ್ಯೂಟರ್‌ಅಂದರೆ ಏನು ಎಂದು ಗೊತ್ತಿಲ್ಲದ ಸಮಯದಲ್ಲಿ ಕರ್ನಾಟಕ ಸರ್ಕಾರದ ಇ-ಆಫೀಸ್‌ತಂತ್ರಜ್ಞಾನವನ್ನು ಮೊಟ್ಟಮೊದಲ ಬಾರಿಗೆ ತರುವಲ್ಲಿ ನಾನು ಪ್ರಮುಖ ಪಾತ್ರವಹಿಸಿದ್ದೇನೆ. ನನ್ನಜೊತೆಗಿದ್ದ ಕಂಪ್ಯೂಟರ್‌ ಗೊತ್ತಿದ್ದವರು ಮಾಡದ ಈ ಕೆಲಸವನ್ನು ನಾನು ಆಸಕ್ತಿ, ಶ್ರದ್ಧೆ ಮತ್ತು ನಿರಂತರ ಕಲಿಕೆಯಿಂದ ಮಾಡಿದ್ದೇನೆ. ಹೀಗಾಗಿ ಗ್ರಾಮೀಣ ಬಡ ವಿದ್ಯಾರ್ಥಿಗಳಲ್ಲಿಅಂತಹ ಅದ್ಭುತಗಳನ್ನುಸಾಧಿಸುವ ಶಕ್ತಿ ಇರುತ್ತದೆ. ಕನ್ನಡ ಮಾಧ್ಯಮ, ಬಡತನ ಎಂದು ಅಂಜದಿರಿ ಮತ್ತುಅಳುಕದಿರಿ ಎಂದು ಧೈರ್ಯ ತುಂಬಿ ಮಾತನಾಡಿದರು.

ಗುರುವಿಗಾಗಿ ಹುಡಕಬೇಡಿ ಮತ್ತುಅಲೆಯಬೇಡಿ. ಅಲ್ಲಮಪ್ರಭು ಹೇಳಿದ ಹಾಗೆ ತನ್ನನ್ನುತಾನು ಅರಿತವನಿಗೆ ಗುರುವಿನ ಹಂಗು ಮತ್ತು ಅಗತ್ಯವಿಲ್ಲ. ಮನಸ್ಸು ನಮ್ಮನ್ನು ಆಳಬಾರದು ಬದಲಾಗಿ ಮನಸ್ಸನ್ನು ನಾವು ಆಳಬೇಕು. ಮನಸ್ಸಿಗೆ ಗುಲಾಮಗಿರಿ ಮಾಡಿದರೆ ನಾವು ಆಜೀವ ಪರ್ಯಂತ ಗುಲಾಮರಾಗಿ ಬದುಕಬೇಕಾಗುತ್ತದೆ ಎಂದರು.

ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲೆಯ ಅಪರಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಶಿಬಿರಾರ್ಥಿಗಳೊಂದಿಗೆ ಐ.ಎ.ಎಸ್.‌ ಮತ್ತು ಕೆ.ಎ.ಎಸ್.‌ ಪರೀಕ್ಷೆಯ ಕುರಿತಂತೆ ಆಸಕ್ತಿದಾಯಕ ಪ್ರಶ್ನೋತ್ತರದ ಸಂವಾದ ನಡೆಸಿ ಪರೀಕ್ಷಾ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಲಪತಿ ಪ್ರೊ. ಶರಣಪ್ಪವಿ. ಹಲಸೆ ಅವರು ನಮ್ಮ ಕರಾಮುವಿ ವತಿಯಿಂದ ಗ್ರಾಮೀಣ, ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು-ಕಾರ್ಮಿಕರು, ನಗರದ ಬಡ ಮತ್ತು ಮಧ್ಯಮವರ್ಗದವರಿಗೆ ಕೈಗೆಟುಕುವದರದಲ್ಲಿ ಪದವಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನುನೀಡುತ್ತಿದ್ದೇವೆ. ಇದರ ಸದುಪಯೋಗ ಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಮಾರಂಭದಲ್ಲಿ ಪರೀಕ್ಷಾಂಗ ಕುಲಸಚಿವ ಡಾ. ಸಿ.ಎಸ್.‌ ಆನಂದಕುಮಾರ್, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್‌ ಹೊನ್ನೂರ್‌, ಬಿ.ಗಣೇಶ ಕೆ.ಜಿ.ಕೊಪ್ಪಲ್‌ ಇದ್ದರು.vtu

Key words: dream, dedication, hard work, KSOU, K.A. Dayanand,  advice