Friday, September 18, 2026

BDA Apartments

Home Front Page KSCA ಮಹಾರಾಜ ಟ್ರೋಫಿ: ಮೈಸೂರು ವಾರಿಯರ್ಸ್ ತಂಡದ ನಾಯಕನಾಗಿ ವೈಶಾಖ್ ವಿಜಯ್ ಕುಮಾರ್

KSCA ಮಹಾರಾಜ ಟ್ರೋಫಿ: ಮೈಸೂರು ವಾರಿಯರ್ಸ್ ತಂಡದ ನಾಯಕನಾಗಿ ವೈಶಾಖ್ ವಿಜಯ್ ಕುಮಾರ್

ಮೈಸೂರು,ಜೂನ್,18,2026 (www.justkannada.in):  ಜೂನ್ 20 ರಿಂದ ಜುಲೈ 12 ರವರೆಗೆ ನಡೆಯಲಿರುವ ಬಹುನಿರೀಕ್ಷಿತ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ಅಧಿಕೃತ ಗೀತೆಯನ್ನ ಬಿಡುಗಡೆ ಮಾಡಲಾಯಿತು.

ಇಂದು ಎಂ.ಜಿ. ರಸ್ತೆಯ ರಾಡಿಸನ್ ಬ್ಲೂ ಹೋಟೆಲ್‌ ನಲ್ಲಿ ಆಯೋಜಿಸಿದ್ದ ಜಂಟಿ ಮಾಧ್ಯಮ ಗೋಷ್ಠಿಯಲ್ಲಿ  ಬಿಡುಗಡೆ ಮಾಡಲಾಗಿದ್ದು, ಹಾಗೆಯೇ ಮೈಸೂರು ವಾರಿಯರ್ಸ್ ತಂಡ ಪ್ರಕಟಲಾಗಿದೆ. ತಂಡದ ನಾಯಕನಾಗಿ ವೈಶಾಖ್ ವಿಜಯ್ ಕುಮಾರ್ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮವು ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2026ರ ಟೂರ್ನಿಯ ಅಧಿಕೃತ ಗೀತೆಯ ಅನಾವರಣದೊಂದಿಗೆ ಅತ್ಯಂತ ಅದ್ಧೂರಿಯಾಗಿ ಪ್ರಾರಂಭವಾಯಿತು. ಭಾರತದ ಪ್ರಸಿದ್ಧ ಮಾಜಿ ಕ್ರಿಕೆಟಿಗ ಹಾಗೂ ಕೆಎಸ್‌ಸಿಎ ಮಾಜಿ ಕಾರ್ಯದರ್ಶಿ ಜಾವಗಲ್ ಶ್ರೀನಾಥ್, ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಮತ್ತು ಮೈಸೂರು ವಲಯದ ಸಂಚಾಲಕ ಶ್ರೀನಿವಾಸ್ ಪ್ರಸಾದ್ ಅವರೊಂದಿಗೆ ಸೇರಿ ಈ ಗೀತೆಯನ್ನು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಜಾವಗಲ್ ಶ್ರೀನಾಥ್, “ಮಹಾರಾಜ ಟ್ರೋಫಿಯು ಪ್ರಾದೇಶಿಕ ಪ್ರತಿಭೆಗಳಿಗೆ ಸದಾ ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತಾ ಬಂದಿದೆ. ಈ ಹೊಸ ಅಧಿಕೃತ ಗೀತೆಯ ಹಿಂದಿರುವ ಉತ್ಸಾಹವನ್ನು ನೋಡಿದರೆ, 2026 ರ ಸೀಸನ್ ಕರ್ನಾಟಕದಾದ್ಯಂತ ಸ್ಪರ್ಧಾತ್ಮಕ ಕ್ರಿಕೆಟ್ ಮತ್ತು ಅಭಿಮಾನಿಗಳ ಮನರಂಜನೆಯಲ್ಲಿ ಒಂದು ಹೊಸ ಮೈಲಿಗಲ್ಲನ್ನು ಸೃಷ್ಟಿಸಲಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ,” ಎಂದರು.KSCA ಮಹಾರಾಜ ಟ್ರೋಫಿ ksca maharaja trophy.jpg1

ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಅವರು, “ಗ್ರಾಮೀಣ ಮಟ್ಟದ ಪ್ರತಿಭೆಗಳು ಮತ್ತು ವೃತ್ತಿಪರ ಕ್ರಿಕೆಟ್ ವೇದಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದು ಕೆಎಸ್‌ ಸಿಎನಲ್ಲಿ ನಮ್ಮ ಪ್ರಮುಖ ಗುರಿಯಾಗಿದೆ. ಈ ಗೀತೆಯು ಕರ್ನಾಟಕದ ಕ್ರಿಕೆಟ್ ಜಗತ್ತಿನ ಚೇತನ, ಹಸಿವು ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ, ಇದು ವರ್ಷದಿಂದ ವರ್ಷಕ್ಕೆ ಮತ್ತಷ್ಟು ಬಲಗೊಳ್ಳುತ್ತಿದೆ,” ಎಂದು ತಿಳಿಸಿದರು.

ಮೈಸೂರು ವಲಯದ ಸಂಚಾಲಕ ಶ್ರೀನಿವಾಸ್ ಪ್ರಸಾದ್ ಮಾತನಾಡಿ, “ಮೈಸೂರಿಗೆ ಕ್ರೀಡೆಯ ಬಗ್ಗೆ ಅಪಾರ ಪ್ರೀತಿಯಿದೆ. ಈ ಬಾರಿಯ ಆವೃತ್ತಿಯ ಮೊದಲ ಹಂತದ ಪಂದ್ಯಗಳಿಗೆ ನಮ್ಮ ನಗರ ಆತಿಥ್ಯ ವಹಿಸುತ್ತಿರುವುದು ನಮಗೆ ಸಿಕ್ಕ ಗೌರವವಾಗಿದೆ. ನಮ್ಮ ಸಾಂಸ್ಕೃತಿಕ ರಾಜಧಾನಿಯಲ್ಲಿಯೇ ಟೂರ್ನಿಯ ಅಧಿಕೃತ ಗೀತೆಯನ್ನು ಅನಾವರಣಗೊಳಿಸಿರುವುದು ಇಡೀ ಕ್ರಿಕೆಟ್ ಹಬ್ಬಕ್ಕೆ ಅತ್ಯಂತ ರೋಮಾಂಚಕ ಮುನ್ನುಡಿಯನ್ನು ಬರೆದಿದೆ,” ಎಂದರು.

ಮೈಸೂರು ವಾರಿಯರ್ಸ್ ತಂಡದ ಪರಿಚಯ ಮತ್ತು ನಾಯಕತ್ವದ ಘೋಷಣೆ

ಈ ಸಂದರ್ಭದಲ್ಲಿ ಸೈಕಲ್ ಪ್ಯೂರ್ ಅಗರಬತ್ತಿ ಪ್ರಾಯೋಜಕತ್ವದ ಹಾಗೂ ಎನ್.ಆರ್. ಗ್ರೂಪ್ ಒಡೆತನದ ಮೈಸೂರು ವಾರಿಯರ್ಸ್ ತಂಡವು ಮುಂಬರುವ ಸೀಸನ್‌ ಗಾಗಿ ತನ್ನ ಬಹುನಿರೀಕ್ಷಿತ ತಂಡವನ್ನು ಅಧಿಕೃತವಾಗಿ ಘೋಷಿಸಿತು.ಮೈಸೂರು ವಾರಿಯರ್ಸ್ ತಂಡದ ನಾಯಕನಾಗಿ ವೈಶಾಖ್ ವಿಜಯ್ ಕುಮಾರ್ ipl

ಕರ್ನಾಟಕ ಮತ್ತು ಐಪಿಎಲ್‌ ನ ಪ್ರಸಿದ್ಧ ವೇಗದ ಬೌಲರ್ ವೈಶಾಖ್ ವಿಜಯ್ ಕುಮಾರ್ ಅವರಿಗೆ ಈ ಸೀಸನ್‌ ನಲ್ಲಿ ತಂಡವನ್ನು ಮುನ್ನಡೆಸುವ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಫ್ರಾಂಚೈಸಿ ಘೋಷಿಸಿತು. ವೈಶಾಖ್ ಅವರು ತಮ್ಮ ದೇಶಿ ಮತ್ತು ಐಪಿಎಲ್ ಕ್ರಿಕೆಟ್‌ ನ ಅಪಾರ ಅನುಭವವನ್ನು ತಂಡಕ್ಕೆ ಧಾರೆ ಎರೆಯಲಿದ್ದು, ತಂಡದ ಯುವ ಆಟಗಾರರಿಗೆ ಮಾರ್ಗದರ್ಶಕರಾಗಿಯೂ ದ್ವಿಪಾತ್ರ ನಿರ್ವಹಿಸಲಿದ್ದಾರೆ.

ಹೊಸ ತಂಡವು ಅನುಭವಿ ದೈತ್ಯರು ಮತ್ತು ಉದಯೋನ್ಮುಖ ಪ್ರತಿಭೆಗಳ ಪ್ರಬಲ ಮಿಶ್ರಣವನ್ನು ಹೊಂದಿದೆ:

ಪ್ರಮುಖ ಆಟಗಾರರು: ಅಂತರರಾಷ್ಟ್ರೀಯ ತಾರೆ ದೇವದತ್ ಪಡಿಕ್ಕಲ್, ಆಕ್ರಮಣಕಾರಿ ಆಲ್ ರೌಂಡರ್ ಮನೋಜ್ ಭಾಂಡಗೆ, ಚೇತನ್ ಎಲ್.ಆರ್. ಮತ್ತು ರಿತೇಶ್ ಭಟ್ಕಲ್. ಈ ಸೀಸನ್‌ ನಲ್ಲಿ ಗ್ರಾಮೀಣ ಮತ್ತು ತಳಮಟ್ಟದ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಫ್ರಾಂಚೈಸಿ ವಿಶೇಷ ಒತ್ತು ನೀಡಿದೆ.

ಹೊಸ ತಂಡದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮೈಸೂರು ವಾರಿಯರ್ಸ್ ತಂಡದ ಮಾಲೀಕ ಅರ್ಜುನ್ ರಂಗ, “ಈ ವರ್ಷದ ತಂಡವು ಕರ್ನಾಟಕ ಕ್ರಿಕೆಟ್‌ನ ಉಜ್ವಲ ಭವಿಷ್ಯವನ್ನು ಪ್ರತಿಬಿಂಬಿಸುತ್ತದೆ. ಯುವ ಆಟಗಾರರಲ್ಲಿ ಗೆಲ್ಲುವ ಹಸಿವು ಎದ್ದು ಕಾಣುತ್ತಿದೆ. ಗ್ರಾಮೀಣ ಮಟ್ಟದಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಪ್ರತಿಭೆಗಳಿಗೆ ಇಂತಹ ಪ್ರಮುಖ ವೇದಿಕೆಯನ್ನು ಕಲ್ಪಿಸಿಕೊಡಲು ನಾವು ಹೆಮ್ಮೆಪಡುತ್ತೇವೆ,” ಎಂದು ಹೇಳಿದರು.

ಮುಖ್ಯ ಕೋಚ್ ಆರ್.ಎಕ್ಸ್ ಮುರಳೀಧರ್ ಅವರು ತಂಡದ ಕಾರ್ಯತಂತ್ರದ ಬಗ್ಗೆ ಇದೇ ರೀತಿಯ ಆಶಾವಾದವನ್ನು ವ್ಯಕ್ತಪಡಿಸಿ, “ನಮ್ಮ ತಂಡವು ಅನುಭವ ಮತ್ತು ಯುವ ಶಕ್ತಿಯ ಪರಿಪೂರ್ಣ ಸಮತೋಲನವನ್ನು ಹೊಂದಿದೆ. ವೈಶಾಖ್ ಅವರಂತಹ ನಾಯಕನ ನೇತೃತ್ವದಲ್ಲಿ ನಮ್ಮ ತಂಡವು ಈ ಸೀಸನ್‌ನಲ್ಲಿ ಅತ್ಯಂತ ಸಕಾರಾತ್ಮಕ ಮತ್ತು ನಿರ್ಭೀತ ಕ್ರಿಕೆಟ್ ಆಡಲಿದ್ದು, ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲಿದೆ,” ಎಂದರು.

ನಾಯಕತ್ವದ ಜವಾಬ್ದಾರಿಯನ್ನು ಸ್ವೀಕರಿಸಿದ ನಾಯಕ ವೈಶಾಖ್ ವಿಜಯ್ ಕುಮಾರ್ ಅವರು ತಮ್ಮ ತಂಡದ ಮೇಲೆ ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದು, ಮೈಸೂರು ನಗರವು ಹೆಮ್ಮೆಪಡುವಂತಹ ಕ್ರಿಕೆಟ್ ಪ್ರದರ್ಶನವನ್ನು ನೀಡುವುದಾಗಿ ಭರವಸೆ ನೀಡಿದರು.

ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಭಿನ್ನ ಸಾಮರ್ಥ್ಯದ ಕ್ರೀಡಾಪಟುಗಳನ್ನು ಬೆಂಬಲಿಸಲು ಹಾಗೂ ಸಬಲೀಕರಣಗೊಳಿಸಲು ಫ್ರಾಂಚೈಸಿಯು ‘ಉಷಾ ಕಿರಣ್ ಕಣ್ಣಿನ ಆಸ್ಪತ್ರೆ’ ಮತ್ತು ‘ಎಎಸ್‌ಎಲ್ ಟಿ20 ಕ್ರಿಕೆಟ್ ಅಸೋಸಿಯೇಷನ್’ ಜೊತೆ ಕೈಜೋಡಿಸುತ್ತಿದೆ.2026 www justkannada jk02_new jk02 new

ಟೂರ್ನಿಯು ಮೈಸೂರಿನಲ್ಲಿ ಪ್ರಾರಂಭವಾಗಿ ನಂತರ ಹುಬ್ಬಳ್ಳಿ ಮತ್ತು ಬೆಂಗಳೂರಿಗೆ ಸ್ಥಳಾಂತರಗೊಳ್ಳಲಿದ್ದು, ಕರ್ನಾಟಕದಾದ್ಯಂತ ಇರುವ ಅಭಿಮಾನಿಗಳಿಗೆ ಉನ್ನತ ಗುಣಮಟ್ಟದ ಕ್ರಿಕೆಟ್ ರಸದೌತಣವನ್ನು ಉಣಬಡಿಸಲಿದೆ. ಕ್ರಿಕೆಟ್ ಪ್ರೇಮಿಗಳು ಜೂನ್ 20 ರಿಂದ ಜುಲೈ 12, 2026 ರವರೆಗೆ ನಡೆಯುವ ಎಲ್ಲಾ ಪಂದ್ಯಗಳನ್ನು ಕಣ್ಣುಂಬಿಕೊಳ್ಳಬಹುದು. ಪಂದ್ಯಗಳ ಟಿಕೆಟ್‌ಗಳು ಡಿಸ್ಟ್ರಿಕ್ಟ್ ಬೈ ಜೊಮ್ಯಾಟೋ ಆಪ್‌ನಲ್ಲಿ ಲಭ್ಯವಿರುತ್ತವೆ.

Key words: KSCA Maharaja Trophy, Vaishakh Vijay Kumar, captain, Mysore Warriors