ಕೊಡಗು,ಮೇ,29,2025 (www.justkannada.in): ರಾಜ್ಯದಲ್ಲಿ ಬಿರುಗಾಳಿ ಸಹಿತ ಪೂರ್ವ ಮುಂಗಾರು ಅಬ್ಬರಿಸುತ್ತಿದ್ದು, ಕೊಡಗಿನಲ್ಲಿ ಮಳೆಯ ಅರ್ಭಟ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಜಲಪ್ರವಾಹ ಭೂಕುಸಿತ ಆತಂಕ ಎದುರಾಗಿದೆ.
ಪೂರ್ವ ಮುಂಗಾರು ಜೋರಾಗಿರುವ ಹಿನ್ನೆಲೆಯಲ್ಲಿ ಮಳೆರಾಯನ ಅಬ್ಬರ ಹೆಚ್ಚಾಗಿದ್ದು ಕೊಡಗಿನಲ್ಲಿ 2018ರ ಕರಾಳ ನೆನಪು ಮಾಸುವ ಮುನ್ನವೇ ಮತ್ತೆ ಜಲಪ್ರವಾಹ ಭೂಕುಸಿತ ಆತಂಕ ಎದುರಾಗಿದೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು ಜಲ ಪ್ರವಾಹ, ಭೂ ಕುಸಿತ, ಇನ್ನಿತರ ಅನಾಹುತ ಆತಂಕ ಉಂಟಾಗಿದ್ದು ಹೀಗಾಗಿ ರಕ್ಷಣಾ ಕಾರ್ಯಾಚರಣೆಗಾಗಿ ಜಿಲ್ಲೆಯಲ್ಲಿ ಎನ್ ಡಿಆರ್ ಎಫ್ ತಂಡ ಬೀಡು ಬಿಟ್ಟಿದೆ.
80 ಯೋಧರ ತಂಡ ಬೆಂಗಳೂರಿನಿಂದ ಮಡಿಕೇರಿಗೆ ಆಗಮಿಸಿದ್ದು ಈ ಮೂಲಕ ಕೊಡಗು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ವಹಿಸಿದೆ. ಜನರ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ವಿಪತ್ತ ನಿರ್ವಹಣಾ ಪಡೆ ಜಿಲ್ಲೆಗೆ ಆಗಮಿಸಿದೆ. ಜಿಲ್ಲೆಯಲ್ಲಿ 25 ಇಂಚಿಗೂ ಅಧಿಕ ಮಳೆಯಾಗಿದ್ದು, ಗಾಳಿ ಮಳೆಯ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೂ ಅಪಾರ ಹಾನಿಯಾಗಿದೆ.
2018, 2019 ಮತ್ತು 2020 ರಲ್ಲಿ ಜಿಲ್ಲೆಯಲ್ಲಿ ಭೂಕುಸಿತ ಹಾಗೂ ಪ್ರವಾಹದ ಅನಾಹುತಗಳ ಸಂಭವಿಸಿತ್ತು. ಇದೀಗ ಎನ್ಡಿಆರ್ಎಫ್ ವೃತ್ತ ನಿರೀಕ್ಷಕ ಹರಿಶ್ಚಂದ್ರ ಪಾಂಡೆ ನೇತೃತ್ವದಲ್ಲಿ ಮಡಿಕೇರಿಯ ಮೈತ್ರಿ ಸಭಾಂಗಣದಲ್ಲಿ ಎನ್ ಡಿಆರ್ ಎಫ್ ಯೋಧರು ಬೀಡು ಬಿಟ್ಟಿದ್ದಾರೆ.
Key words: Heavy rain, floods, NDRF team, Kodagu