‘ಕರ್ನಾಟಕ ದರ್ಶನ’ : ಶ್ರೀರಂಗಪಟ್ಟಣ ವೈಭವಕ್ಕೆ ಮನಸೋತ ಬಾಗೇವಾಡಿ ಪ್ರತಿಭೆಗಳು

ಮಂಡ್ಯ,ಮಾರ್ಚ್,5,2026 (www.justkannada.in): ರಾಜ್ಯದ ಐತಿಹಾಸಿಕ ತಾಣಗಳ ಪರಿಚಯ ಮಾಡಿಸುವ ‘ಕರ್ನಾಟಕ ದರ್ಶನ’ ಕಾರ್ಯಕ್ರಮದ ಅಂಗವಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ್ದ ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಅವರು ಆಪ್ತವಾಗಿ ಸಂವಾದ ನಡೆಸಿದರು.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಬಸವೇಶ್ವರ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳು ಈ ಐತಿಹಾಸಿಕ ಪ್ರವಾಸದಲ್ಲಿ ಪಾಲ್ಗೊಂಡಿದ್ದರು. ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆ, ದರಿಯಾ ದೌಲತ್, ಗುಮ್ಮಟ ಮತ್ತು ಜೀವನದಿ ಕಾವೇರಿಯ ಸೊಬಗನ್ನು ವೀಕ್ಷಿಸಿದ ವಿದ್ಯಾರ್ಥಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ಮಾತುಕತೆ ನಡೆಸಿದರು. ಈ ವೇಳೆ ಮಕ್ಕಳ ಕಲಿಕೆಯ ಉತ್ಸಾಹವನ್ನು ಕಂಡು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

“ಪಠ್ಯಪುಸ್ತಕದ ಪುಟಗಳಲ್ಲಿ ಕೇವಲ ಚಿತ್ರಗಳಾಗಿ ಮತ್ತು ಅಕ್ಷರಗಳಾಗಿ ಕಂಡಿದ್ದ ಇತಿಹಾಸವು, ಇಂದು ನಮ್ಮ ಕಣ್ಣೆದುರು ಜೀವಂತವಾಗಿ ತೆರೆದುಕೊಂಡಿದೆ” ಎಂದು ವಿದ್ಯಾರ್ಥಿಗಳು ತಮ್ಮ ರೋಮಾಂಚನಕಾರಿ ಅನುಭವಗಳನ್ನು ಸಚಿವ ಮಧು ಬಂಗಾರಪ್ಪ ಮುಂದೆ ಹಂಚಿಕೊಂಡರು.

ಉತ್ತರ ಕರ್ನಾಟಕದ ಬಸವನ ಬಾಗೇವಾಡಿಯಂತಹ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಹಳೇ ಮೈಸೂರು ಭಾಗದ ಶ್ರೀಮಂತ ಪರಂಪರೆಯನ್ನು ಪರಿಚಯಿಸುವಲ್ಲಿ “ಕರ್ನಾಟಕ ದರ್ಶನ” ಯೋಜನೆ ಒಂದು ಭದ್ರ ಸೇತುವೆಯಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಮಕ್ಕಳ ಭವಿಷ್ಯವು ಈ ಜ್ಞಾನದ ಬೆಳಕಿನಲ್ಲಿ ಉಜ್ವಲವಾಗಿರಲಿ ಎಂದು ಸಚಿವ ಮಧು ಬಂಗಾರಪ್ಪ ಇದೇ ಸಂದರ್ಭದಲ್ಲಿ ಶುಭ ಹಾರೈಸಿದರು.

ಈ ಕುರಿತು ಮಾತನಾಡಿದ ಸಚಿವ ಮಧು ಬಂಗಾರಪ್ಪ, “ಪುಸ್ತಕದ ಜ್ಞಾನದ ಜೊತೆಗೆ ಪ್ರಾಯೋಗಿಕವಾಗಿ ಇತಿಹಾಸವನ್ನು ನೋಡಿ ಕಲಿಯುವುದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ಇಂತಹ ಪ್ರವಾಸಗಳು ವಿದ್ಯಾರ್ಥಿಗಳಲ್ಲಿ ನಾಡಿನ ಬಗ್ಗೆ ಹೆಮ್ಮೆ ಮೂಡಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Key words: ‘Karnataka Darshan, Minister,Madhu Bangarappa, students, Srirangapatna