ದಸರಾದಲ್ಲಿ ಕಂಬಳ ಆಯೋಜನೆ ಶ್ಲಾಘನೀಯ: ಮೈಸೂರು ರಕ್ಷಣಾ ವೇದಿಕೆಯಿಂದ ಬೆಂಬಲ

ಮೈಸೂರು, ಜುಲೈ,16,2026 (www.justkannada.in):  ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ಆಯೋಜಿಸಲು ಸರ್ಕಾರ ಮುಂದಾಗಿರುವುದು ಶ್ಲಾಘನೀಯ ಕ್ರಮವಾಗಿದ್ದು, ಇದನ್ನು ವಿರೋಧಿಸುವವರು ಅಭಿವೃದ್ಧಿ ಕಿರಾತಕರು ಎಂದು ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈಕಾ ಪ್ರೇಮ್ ಕುಮಾರ್ ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಕಂಬಳವು ದಕ್ಷಿಣ ಕರ್ನಾಟಕದ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ರೈತರ ಸಾಹಸ ಮತ್ತು ಸಂಸ್ಕೃತಿಯ ಪ್ರತೀಕವಾದ ಕ್ರೀಡೆಯಾಗಿದೆ. ರೈತರು ಹಾಗೂ ಗ್ರಾಮೀಣ ಯುವಕರ ಶಕ್ತಿ, ಸಾಮರ್ಥ್ಯ ಮತ್ತು ಪರಂಪರೆಯನ್ನು ಅನಾವರಣಗೊಳಿಸುವ ಈ ಕ್ರೀಡೆಯನ್ನು ದಸರಾ ಉತ್ಸವದಲ್ಲಿ ಪರಿಚಯಿಸುತ್ತಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿದರು.

ಕಂಬಳ ಆಯೋಜನೆಗೆ ಪರಿಸರದ ಹೆಸರಿನಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವ ಕೆಲ ನಿವೃತ್ತ ಪರಿಸರವಾದಿಗಳು ಹಾಗೂ ರೈತ ಸಂಘದ ಕೆಲವು ಮುಖಂಡರ ನಡೆ ಖಂಡನೀಯ ಎಂದು ಅವರು ಹೇಳಿದರು. ಕಂಬಳಕ್ಕೆ ಮೀಸಲಾದ ಜಾಗದಲ್ಲಿ ಮರಗಳ ತೆರವು ವಿಚಾರವಾಗಿ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಿರುವುದು ಬಾಲಿಶ ಕ್ರಮ ಎಂದು ಟೀಕಿಸಿದರು.

ಮೈಸೂರು ಸದಾ ಹೊಸ ಸಂಸ್ಕೃತಿ ಮತ್ತು ಕ್ರೀಡೆಗಳನ್ನು ಸ್ವಾಗತಿಸುವ ನಗರವಾಗಿದ್ದು, ಉತ್ತರ-ದಕ್ಷಿಣ ಎಂಬ ಭೇದಭಾವ ಇಲ್ಲ ಎಂದು ಹೇಳಿದ ಅವರು, ಕಂಬಳ ಆಯೋಜನೆಗೆ ಮುಂದಾದ ಸರ್ಕಾರ, ಜಿಲ್ಲಾಡಳಿತ ಹಾಗೂ ಪುತ್ತೂರಿನ ಅಶೋಕ್ ರೈ ಮತ್ತು ಅವರ ತಂಡವನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮೈಸೂರು ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಕುಮಾರ್ ಗೌಡ ಉಪಸ್ಥಿತರಿದ್ದರು.

Key words: Kambala organization, Dasara, Mysore Rakshana Vedike