ಮೈಸೂರು ವಿಶ್ವವಿದ್ಯಾಲಯ ಲೇಔಟ್ ಸೇರಿ ಸುತ್ತಮುತ್ತಲ ಬಡಾವಣೆಗೆ ಕಬಿನಿ ನೀರು: ಯೋಜನೆಗೆ ಶಾಸಕ ಜಿಟಿಡಿ ಚಾಲನೆ

ಮೈಸೂರು, ಮಾರ್ಚ್ 23, 2023 (www.justkannada.in): ಕಬಿನಿಯಿಂದ ನಗರದ ಮೈಸೂರು ವಿಶ್ವವಿದ್ಯಾಲಯ ಲೇಔಟ್ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳಿಗೆ ನೀರು ಪೂರೈಸುವ ಯೋಜನೆಗೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಈ ಕುರಿತು ಸತತ ಐದು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರಲಾಗಿತ್ತು. ಇದೀಗ ಯೋಜನೆಗೆ ಚಾಲನೆ ನೀಡಿರುವುದರಿಂದ ಮೈಸೂರು ವಿಶ್ವವಿದ್ಯಾಲಯ ಲೇಔಟ್, ಲಿಂಗಾಂಬುಧಿ ಪಾಳ್ಯ, ಕಾರ್ಲೆ ಲೇಔಟ್,  ಮಹಾಲಕ್ಷ್ಮಿ ಲೇಔಟ್ ಗಳಿಗೆ ಕಬಿನಿಯಿಂದ ನೀರು ಪೂರೈಕೆಯಾಗಲಿದೆ.

ಮೈಸೂರು ವಿಶ್ವವಿದ್ಯಾಲಯ ಲೇಔಟ್ ನ ಸಿ ಬ್ಲಾಕ್ ನಲ್ಲಿರುವ ಟ್ಯಾಂಕ್ ಬಳಿ ನೀರು ಪೂರೈಕೆಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.

ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್, ಮೈಸೂರು ವಿಶ್ವವಿದ್ಯಾಲಯ ಲೇಔಟ್ ಎಂಪ್ಲಾಯೀಸ್ ಹೌಸಿಂಗ್ ಸೊಸೈಟಿ ಅಧ್ಯಕ್ಷ ಕೃಷ್ಣಮಾಲೇಗೌಡ, ಮೈಸೂರು ವಿಶ್ವವಿದ್ಯಾಲಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎ.ನಾಣಯ್ಯ ಇತರರು ಇದ್ದರು.