Friday, July 31, 2026

BDA Apartments

Home Front Page ಮೈಸೂರಿಗೆ ವಿಶೇಷ ಪ್ಯಾಕ್ ಘೋಷಿಸಿ: ಪ್ರಧಾನಿ ಮೋದಿಗೆ ಕೆ.ವಿ. ಮಲ್ಲೇಶ್ ಆಗ್ರಹ

ಮೈಸೂರಿಗೆ ವಿಶೇಷ ಪ್ಯಾಕ್ ಘೋಷಿಸಿ: ಪ್ರಧಾನಿ ಮೋದಿಗೆ ಕೆ.ವಿ. ಮಲ್ಲೇಶ್ ಆಗ್ರಹ

ಮೈಸೂರು,ಜುಲೈ,31,2026 (www.justkannada.in):  ಮೈಸೂರನ್ನು ಪ್ಯಾರಿಸ್ ಮಾಡುತ್ತೇನೆ, ಸ್ಮಾರ್ಟ್ ಸಿಟಿ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದ ಪ್ರಧಾನಿ ಮೋದಿ ಅವರು ತಮ್ಮ ಆಡಳಿತಾವಧಿಯ ಅಂತ್ಯಕಾಲದಲ್ಲಾದರೂ ಮೈಸೂರು ನಗರವನ್ನು ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ತರಲಿ, ಮೈಸೂರಿನ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕ್ ಘೋಷಿಸಲಿ ಎಂದು ಮೈಸೂರು ಕಾಂಗ್ರೆಸ್ ನಗರ ಉಪಾಧ್ಯಕ್ಷ ಹಾಗೂ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ ಮಲ್ಲೇಶ್ ಆಗ್ರಹಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಕೆ.ವಿ ಮಲ್ಲೇಶ್, 2014ರಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ನಗರಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು ಮೈಸೂರು ನಗರವನ್ನು ಪ್ಯಾರಿಸ್ ನಗರಕ್ಕೆ ಹೋಲಿಕೆ ಮಾಡಿ, ಪ್ಯಾರಿಸ್ ಮಾದರಿಯಲ್ಲಿ ಹೆರಿಟೇಜ್ ನಗರವಾಗಿ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದರು. ಅಲ್ಲದೆ, ನಗರವನ್ನು ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ಸೇರಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಪ್ಯಾರಿಸ್ ಸಿಟಿ ಇರಲಿ, ಮೈಸೂರು ಮೈಸೂರಾಗಿ ಉಳಿಯುವಂತೆ ಮಾಡಲು ಸಹ ಮನಸ್ಸು ಮಾಡದೆ ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿ ಎಂದು ಟೀಕಿಸಿದರು.

ಕಳೆದ ಮೂರು ಅವಧಿಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳೇ ಸಂಸದರಾಗಿ ಆಯ್ಕೆಯಾಗುತ್ತಿದ್ದರೂ ಮೈಸೂರು ನಗರದ ಅಭಿವೃದ್ಧಿ ಮಾತ್ರ ನಿಂತ ನೀರಾಗಿದೆ. ಕೇಂದ್ರ ಸರಕಾರದ ಪ್ರತಿ ಬಜೆಟ್‌ ನಲ್ಲಿಯೂ ಸಾಕಷ್ಟು ಘೋಷಣೆಗಳನ್ನು ಮಾಡಿದರೂ ಅವು ಕೇವಲ ಮೂಗಿಗೆ ತುಪ್ಪ ಸವರಿದಂತಾಗಿವೆ.

ಕಡಕೊಳದಲ್ಲಿ ಲಾಜಿಸ್ಟಿಕ್ ಪಾರ್ಕ್ ಘೋಷಣೆ ಮಾಡಿದಿರಿ. ಆದರೆ, ಇದುವರೆಗೂ ಅದು ಟೇಕಾಫ್ ಆಗಲೇ ಇಲ್ಲ. ಮೈಸೂರನ್ನು ಹೆರಿಟೇಜ್ ನಗರವಾಗಿ ಅಭಿವೃದ್ಧಿ ಪಡಿಸುವ ಭರವಸೆ ನೀಡಿದ್ದಿರಿ. ಆದರೆ, ಇದುವರೆಗೂ ಮೈಸೂರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಮೈಸೂರು ವಿಮಾನ ನಿಲ್ದಾಣವನ್ನು ವಿಸ್ತರಿಸುವ ಯೋಜನೆ ಇದೆ. ಮೈಸೂರಿನಿಂದ ನೇರವಾಗಿ ಹೊಸದಿಲ್ಲಿ, ಮುಂಬೈಗೆ ವಿಮಾನ ಸೇವೆ ಬೇಡಿಕೆ ಇದೆ. ಆದರೆ, ಈ ಬಗ್ಗೆ ಸರಕಾರ ಮಾತ್ರ ಗಮನಹರಿಸುತ್ತಿಲ್ಲ. ಇರುವ ವಿಮಾನಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಗಮನಿಸಿದರೆ ವಿಮಾನಯಾನ ಸೌಕರ್ಯ ಅತ್ಯಂತ ಮುಖ್ಯ. ಅದನ್ನು ಮೋದಿ ಅವರು ಗಮನದಲ್ಲಿಟ್ಟುಕೊಂಡು ವಿಮಾನಯಾನ ಸೌಲಭ್ಯವನ್ನು ವಿಸ್ತರಿಸಬೇಕು. ಈ ಬಗ್ಗೆ ಸಂಸದರು, ಬಿಜೆಪಿ ಪಕ್ಷದ ಮುಖಂಡರು ಪ್ರಧಾನಿಗಳ ಮೇಲೆ ಒತ್ತಡ ಹಾಕಬೇಕು. ಅಲ್ಲದೆ, ಬರಗಾಲದಂತಹ ಈಸನ್ನಿವೇಶದಲ್ಲಿ ರಾಜ್ಯಕ್ಕೆ ನೀಡಬೇಕಾದ ಅನುದಾನವನ್ನು ಹಂಚಿಕೆ ಮಾಡಿ ಕನ್ನಡ ನಾಡಿನ ಜನತೆಗೆ ನೆರವಾಗಬೇಕು ಎಂದು ಕೆ.ವಿ ಮಲ್ಲೇಶ್ ಆಗ್ರಹಿಸಿದ್ದಾರೆ.

ಮೋದಿ ಅವರು ಮೈಸೂರಿಗೆ ಬಂದಾಗಲೆಲ್ಲ ಅದು ಕೇವಲ ಫೋಟೋ ಸೆಷನ್‌ ಗೆ ಮಾತ್ರ ಸೀಮಿತವಾಗುತ್ತಿದೆ. ಈ ಬಾರಿಯಾದರೂ ಮೋದಿ ಅವರು ತಮ್ಮ ಫೋಟೋ ಸೆಷನ್ ಬಿಟ್ಟು ಮೈಸೂರಿನ ಸಮಗ್ರ ಅಭಿವೃದ್ಧಿಗೆ ಕೊಡುಗೆಗಳನ್ನು, ವಿಶೇಷ ಪ್ಯಾಕೇಜ್‌ ಅನ್ನು ಘೋಷಿಸಬೇಕು. ಆ ಮೂಲಕ ಬಿಜೆಪಿಯನ್ನು ನಂಬಿ ಮತಹಾಕಿದರವರಿಗೆ ಸಾರ್ಥಕವಾಗುವಂತೆ ಮಾಡಬೇಕು. ಅವರ ಅಭಿಮಾನಿಗಳು, ಬೆಂಬಲಿಗರು ನಿಟ್ಟುಸಿರು ಬಿಡುವಂತೆ ಮಾಡಬೇಕು ಎಂದು ಕೆ.ವಿ ಮಲ್ಲೇಶ್ ಒತ್ತಾಯಿಸಿದ್ದಾರೆ.

Key words Announce, special pack, Mysore, K.V. Mallesh, PM, Modi