ಜೆಎಸ್ಎಸ್ ಮಾಧ್ಯಮ ಸೇವಾ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಎ.ಸಿ. ಪ್ರಭಾಕರ್ ಆಯ್ಕೆ

ಮೈಸೂರು,ಜೂನ್,9,2025 (www.justkannada.in): ಜೆಎಸ್ಎಸ್ ಮಹಾವಿದ್ಯಾ ಪೀಠವು ಕೊಡ ಮಾಡುವ 2024ನೇ ಸಾಲಿನ ಜೆಎಸ್ಎಸ್ ಮಾಧ್ಯಮ ಪ್ರಶಸ್ತಿಗೆ ಹಿರಿಯ ಪತ್ರಕರ್ತ, ಮೈಸೂರು ಮಿತ್ರ ದಿನ ಪತ್ರಿಕೆಯ ಸುದ್ದಿ ಸಂಪಾದಕ ಎ.ಸಿ. ಪ್ರಭಾಕರ್ ಅವರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಆಯ್ಕೆ ಮಾಡಿದೆ.

ಇತ್ತೀಚೆಗೆ ನಡೆದ ಸಂಘದ ಕಾರ್ಯಕಾರಿಣಿ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಇದೇ ತಿಂಗಳು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸುಮಾರು 35 ವರ್ಷಗಳಿಂದ  ಪತ್ರಿಕಾ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಇವರು, ಸುದ್ದಿ ಸಮಾಚಾರ, ಸಂಜೆ ಸಮಾಚಾರ, ಮಹಾನಂದಿ, ಹಾಯ್ ಬೆಂಗಳೂರು, ಉದಯ ನ್ಯೂಸ್ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಮೈಸೂರು ಮಿತ್ರ ದಿನ ಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗಿದ್ದಾರೆ.

1990ರಿಂದ 2004ರವರಗೆ ಕಾಡುಗಳ್ಳ, ನರಹಂತಕ ವೀರಪ್ಪನ್ ಕಾರ್ಯಕ್ಷೇತ್ರಗಳಾದ ತಮಿಳುನಾಡು, ಕರ್ನಾಟಕ, ಕೇರಳ ಅರಣ್ಯಗಳಲ್ಲಿ ಸಂಚರಿಸಿ ವರದಿಗಳನ್ನು ಮಾಡಿದ್ದು ಇವರ ವೃತ್ತಿ ಬದುಕಿನ ಮಹತ್ವದ ಮೈಲಿಗಲ್ಲು. ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ  ಕರ್ನಾಟಕ ಮತ್ತು ತಮಿಳುನಾಡು ಪೊಲೀಸರಿಗೆ ಉಪಯುಕ್ತ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸರಕಾರದಿಂದ ನಗದು ಬಹುಮಾನ ಪಡೆದಿದ್ದಾರೆ.

ಕೊಳ್ಳೇಗಾಲ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕೊಳ್ಳೇಗಾಲ ವರದಿಗಾರರ ಕೂಟದ ಕಾರ್ಯದರ್ಶಿಯಾಗಿ, ಚಾಮರಾಜನಗರ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ, ಕೊಳ್ಳೇಗಾಲ ದೇವಾಂಗ ಮಹಾಜನ ಸಂಘದ ಅಜೀವ ಸದಸ್ಯರಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ 2016ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಇದೀಗ ಜೆಎಸ್ಎಸ್ ಮಾಧ್ಯಮ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿರುವ ಎ.ಸಿ. ಪ್ರಭಾಕರ್ ಅವರಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮತ್ತು ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಹಾಗೂ ಆಡಳಿತ ಮಂಡಳಿ  ಮಂಡಳಿ ಸದಸ್ಯರು ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ.vtu

Key words: Senior journalist,  A.C. Prabhakar, JSS Media Service Award