ಜೆಡಿಎಸ್ ವರಿಷ್ಠರಿಗೆ ಶಾಸಕ ಜಿ.ಟಿ. ದೇವೇಗೌಡ ಶಾಕ್: ಸದ್ಯದಲ್ಲೇ ಒಂದೇ ವೇದಿಕೆಯಲ್ಲಿ ಜಿಟಿಡಿ ಮತ್ತು ಸಿದ್ಧರಾಮಯ್ಯ ಸಮಾಗಮ.

ಮೈಸೂರು,ನವೆಂಬರ್,6,2021(www.justkannada.in):  ಈಗಾಗಲೇ ಜೆಡಿಎಸ್ ನಿಂದ ದೂರ ಉಳಿದು ಕಾಂಗ್ರೆಸ್ ಸೇರುವ ಕುರಿತು ಸುಳಿವು ನೀಡಿರುವ ಶಾಸಕ ಜಿ.ಟಿ ದೇವೇಗೌಡರು ಇದೀಗ ಮತ್ತೆ ಜೆಡಿಎಸ್ ವರಿಷ್ಠರಿಗೆ ಶಾಕ್ ನೀಡಿದ್ದಾರೆ.

ಹೌದು ಸದ್ಯದಲ್ಲೇ ಸಿದ್ದರಾಮಯ್ಯ ಜೊತೆ  ಚಾಮುಂಡೇಶ್ವರಿ ಕ್ಷೇತ್ರದಲ್ಲಿ  ಶಾಸಕ ಜಿ.ಟಿ ದೇವೇಗೌಡ ಸಂಚಾರ ಮಾಡಲಿದ್ದಾರೆ. ಕಾಂಗ್ರೆಸ್ ಸೇರುವ ಮುನ್ನವೇ ಸಿದ್ದರಾಮಯ್ಯ ಜತೆ ಜಿ.ಟಿ ದೇವೇಗೌಡರು ವೇದಿಕೆ ಹಂಚಿಕೊಳ್ಳಲಿದ್ದಾರೆ.

ಇತ್ತೀಚಿಗೆ ಎರಡು ಬಾರಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿದ್ದರು. ಕುಮಾರಸ್ವಾಮಿ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದು  ಸಿದ್ದರಾಮಯ್ಯರನ್ನು ಸ್ವಾಗತಿಸಲು ಶಾಸಕ ಜಿಟಿ ದೇವೇಗೌಡ ಸಜ್ಜಾಗಿದ್ದಾರೆ.

ನವೆಂಬರ್ 9ಕ್ಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತು ಜಿಟಿ ದೇವೇಗೌಡ ಸಮಾಗಮವಾಗಲಿದ್ದು, ಈ ಮೂಲಕ ಚಾಮುಂಡೇಶ್ವರಿ‌ ಕ್ಷೇತ್ರದಲ್ಲಿ ಸೋತ ಬಳಿಕ ಮೊದಲ ಬಾರಿಗೆ ಕ್ಷೇತ್ರಕ್ಕೆ‌ ಸಿದ್ದರಾಮಯ್ಯ ಕಾಲಿಡುತ್ತಿದ್ದಾರೆ.

ಇನ್ನು ಜಿ.ಟಿ ದೇವೇಗೌಡರು ಸಿದ್ದರಾಮಯ್ಯ ಜತೆ ಎರಡು ಕಡೆ ವೇದಿಕೆ‌ ಹಂಚಿಕೊಳ್ಳಲಿದ್ದಾರೆ. ಹಿನಕಲ್ ನಲ್ಲಿ ನಡೆಯುವ ಅಂಬೇಡ್ಕರ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಉಭಯ ನಾಯಕರು ನಂತರ ಕೇರ್ಗಳ್ಳಿಯಲ್ಲಿ ನಡೆಯುವ ಕೆಂಚಪ್ಪ ಸಮುದಾಯ ಭವನ ಉದ್ಘಾಟನೆಯಲ್ಲೂ  ಪಾಲ್ಗೊಳ್ಳಲಿದ್ದಾರೆ.

Key words: JDS -seniors -G.T Deve Gowda –former CM-Siddaramaiah -meet