ಅತಿವೃಷ್ಠಿ, ಹುಲಿ ದಾಳಿಯಾದ ಕುಟುಂಬಕ್ಕೆ ಪರಿಹಾರ ನೀಡಲಿಲ್ಲ, ಅದೇ ಕೇರಳಕ್ಕೆ 10 ಕೋಟಿ ಪರಿಹಾರ-ನಿಖಿಲ್ ಕುಮಾರಸ್ವಾಮಿ ಕಿಡಿ

ಮೈಸೂರು,ಮಾರ್ಚ್,27,2026 (www.justkannada.in): ರಾಜ್ಯದಲ್ಲಿ ಅತಿವೃಷ್ಠಿಯಾದಾಗ ಪರಿಹಾರ ನೀಡಲಿಲ್ಲ,  ಹುಲಿ ದಾಳಿಯಾದ ಕುಟುಂಬಕ್ಕೆ ಪರಿಹಾರ ನೀಡಲಿಲ್ಲ ಅದೇ ಕೇರಳ ರಾಜ್ಯಕ್ಕೆ 10 ಕೋಟಿ ಪರಿಹಾರ ನೀಡುತ್ತೀರಿ‌. ನಮ್ಮ ರಾಜ್ಯದ ರೈತರು ಏನು ಅನ್ಯಾಯ ಮಾಡಿದ್ದಾರೆ? ಎಂದು ನಿಖಿಲ್ ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹೆಚ್.ಡಿ ಕೋಟೆಯಲ್ಲಿ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಹಾಗೂ ಬೃಹತ್ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ,  ರಾಜ್ಯದ ಅನ್ನದಾತರ ಸಂಕಷ್ಟ, ನೋವುಗಳಿಗೆ ಸ್ಪಂದಿಸುವ ಕೆಲಸ ಮಾಡಿ ಎಂದು ವಾಗ್ದಾಳಿ ನಡೆಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಾಗಿದ್ದ ವೇಳೆ ಅಲ್ಲಿನ ರೈತರಿಗೆ ಪರಿಹಾರ ನೀಡಲಿಲ್ಲ. ನಾನು ಆ ಭಾಗದಲ್ಲಿ ಪ್ರವಾಸ ಮಾಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದೇನೆ. ಅಲ್ಲಿನ ರೈತರಿಗೆ ಸ್ಪಂದಿಸದ ಮುಖ್ಯಮಂತ್ರಿಗಳು ಕೇರಳಕ್ಕೆ ಸ್ಪಂದಿಸಿದ್ದಾರೆ ಎಂದು ಸಿಎಂ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

ಒಂದು ದಶಕದಿಂದ ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿಗಳ ಸಂಘರ್ಷದಲ್ಲಿ ಸುಮಾರು 161 ಜನ ಸಾವನ್ನಪ್ಪಿದ್ದಾರೆ. ರಾಜ್ಯ ಸರ್ಕಾರ ಏನ್ ಮಾಡ್ತಿದೆ.? ಅರಣ್ಯ ಸಚಿವರು ಏನು ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ಕಣ್ಮಚ್ಚಿ ಕುಳಿತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ವನ್ಯಜೀವಿಗಳ ಸಂಘರ್ಷ ಸರಿಪಡಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಆನೆಗಳ ತಡೆಗೆ ರೈಲ್ವೆ ಪೆನ್ಸಿಂಗ್ ಮಾಡಬೇಕು. ಇದೆಲ್ಲವನ್ನೂ ಕೇಂದ್ರ ಸಚಿವರು ಕುಮಾರಣ್ಣನವರು ನೋಡಿ ಕೇಂದ್ರ ಸರ್ಕಾರದ ಅರಣ್ಯ ಸಚಿವರನ್ನು ಭೇಟಿ ಮಾಡಿ ನಮ್ಮ ರಾಜ್ಯದ ರೈತರಿಗೆ, ಜನತೆಗೆ ಆಗುತ್ತಿರುವ ಸಮಸ್ಯೆ ಅವರಿಗೆ ತಿಳಿಸಿ ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ರಾಜ್ಯಕ್ಕೆ ಕುಮಾರಣ್ಣ ಅವರ ಅನಿವಾರ್ಯತೆ ಹೆಚ್ಚಿದೆ

ರಾಜ್ಯಕ್ಕೆ ಕುಮಾರಣ್ಣ ಅವರ ಅನಿವಾರ್ಯತೆ ಹೆಚ್ಚಿದೆ. ಕುಮಾರಣ್ಣ ಅವರು ಮತ್ತೆ ರಾಜ್ಯಕ್ಕೆ ಪ್ರವೇಶ ಮಾಡಬೇಕು. ಇದು ನಿಖಿಲ್ ಕುಮಾರಸ್ವಾಮಿ ಭಾವನೆಯಲ್ಲ. ರಾಜ್ಯದ ಜನತೆಯ ಭಾವನೆ, ಕಾಂಗ್ರೆಸ್ ಆಡಳಿತದ ವಿರುದ್ಧ ಜನ ರೋಸಿ ಹೋಗಿದ್ದಾರೆ. ಕುಮಾರಣ್ಣ ಅವರ ಆಡಳಿತ ಸ್ಮರಿಸುತ್ತಾರೆ. ಅವರು 20 ತಿಂಗಳು ಮತ್ತು14 ತಿಂಗಳ ಕೊಟ್ಟ ಆಡಳಿತ ಒಂದು ಸುವರ್ಣಯುಗ ಅಂತ ಜನ ಹೇಳುತ್ತಿದ್ದಾರೆ ಎಂದು ಸ್ಮರಿಸಿದರು.

H D ಕೋಟೆಗೂ, ದೇವೇಗೌಡರ ಕುಟುಂಬಕ್ಕೂ ಒಂದು ಭಾವನಾತ್ಮಕ ಸಂಬಂಧವಿದೆ

ಎಚ್.ಡಿ ಕೋಟೆಗೂ ದೇವೇಗೌಡರ ಕುಟುಂಬಕ್ಕೂ ಒಂದು ಭಾವನಾತ್ಮಕ ಸಂಬಂದ ಇದೆ. 1989ರ ಚುನಾವಣೆ ಫಲಿತಾಂಶದಲ್ಲಿ ಜನತದಳ ಪಕ್ಷಕ್ಕೆ ಕೇವಲ ಎರಡೇ ಸ್ಥಾನ ಸಿಕ್ಕಿದ್ದು. ವೇನ್ಗಲ್ ಮತ್ತು ಎಚ್.ಡಿ ಕೋಟೆಯ ಗೆದ್ದಿದ್ದು ವಿಶೇಷ. ಹಾಗಾಗಿ ಎಚ್.ಡಿ ಕೋಟೆ ಕ್ಷೇತ್ರ ನಮಗೆ ಬಹಳ ವಿಶೇಷ ಎಂದು ಹೇಳಿದರು.

ಗಂಗಾ ಕಲ್ಯಾಣ ಯೋಜನೆ ಸರಿಯಾಗಿ ಫಲಾನುಭವಿಗಳಿಗೆ ತಲುಪುತಿಲ್ಲ. ಅತಿವೃಷ್ಠಿ,ಅನಾವೃಷ್ಠಿಯಿಂದ ಬೆಳೆನಾಶ ಸೇರಿದಂತೆ ಯಾವುದೇ ರೈತರ ಸಮಸ್ಯೆಗಳಿಗೆ ಸರಿಯಾಗಿ ರಾಜ್ಯ ಸರ್ಕಾರ‌ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ತಿಂಗಳುಗಳಿಂದ ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಎಲ್ಲಾ ಕಡೆ ಆಡಳಿತರೂಢ ಸರ್ಕಾರದ ವಿರುದ್ಧ ಜನ ವಿರೋಧಿ ಅಲೆ ಎದ್ದಿದೆ. ಕಾಂಗ್ರೆಸ್ ಸರ್ಕಾರದ ಬಗ್ಗೆ ಬೇಸತ್ತಿದ್ದಾರೆ.

2028ಕ್ಕೆ NDA ಸರ್ಕಾರ ಬರುತ್ತೆ -ನಿಖಿಲ್ ಕುಮಾರಸ್ವಾಮಿ

ಕಳೆದ ವರ್ಷ ಎಸ್ ಸಿ ಎಸ್ ಪಿ/ ಟಿಎಸ್ ಪಿ ಹಣವನ್ನು ಈ ಸರ್ಕಾರ ಸಂಪೂರ್ಣ ದುರ್ಬಳಕೆ ಮಾಡಿಕೊಂಡಿದೆ. ಮಾತೆತ್ತಿದರೆ ಅಹಿಂದ ನಾಯಕ ಅಂತ ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಮುಂದೆ 2028 ಚುನಾವಣೆ ಬಹಳ ದೂರ ಇಲ್ಲ. ಅದಕ್ಕಿಂತ ಮುಂಚೆ ಜಿ.ಪಂ,ತಾ.ಪಂ,ಗ್ರಾ.ಪಂ ಚುನಾವಣೆ ಬರುತ್ತವೆ. ಸ್ಥಳೀಯ ಚುನಾವಣೆಯಲಿ ಮೈತ್ರಿ ಪಕ್ಷಕ್ಕೆ ಗೆಲುವು ಖಚಿತ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.

ಕುಮಾರಣ್ಙನವರ ಕಾರ್ಯ ವೈಖರಿಯನ್ನು ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದಾರೆ. ರಾಜ್ಯಕ್ಕೆ ಕೈಗಾರಿಕೆಗಳನ್ನು ತರಲು ಮುಂದಾದರೆ ರಾಜ್ಯ ಸರ್ಕಾರ‌ ಅದಕ್ಕೆ ಅಡ್ಡಿ ಮಾಡುವ ಕೆಲಸ ಮಾಡುತ್ತಿದೆ. ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ, ಅವರ ನಾಯಕತ್ವ ಈ ರಾಜ್ಯಕ್ಕೆ ಅನಿವಾರ್ಯ ಇದೆ ಎನ್ನುವುದನ್ನು ಜನರೇ ಹೇಳುತ್ತಾರೆ. ಈ ನಿಟ್ಟಿನಲ್ಲಿ ಪಕ್ಷವನ್ನು ಮತ್ತಷ್ಟು ಬಲ ಪಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು.

ಹೆಚ್.ಡಿ ಕೋಟೆಗೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ

ಹೆಚ್.ಡಿ ಕೋಟೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಜನರೊಂದಿಗೆ ಜನತಾದಳ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಹ್ಯಾಂಡ್ ಪೋಸ್ಟ್ ನಲ್ಲಿ  ಕ್ರೇನ್ ಮೂಲಕ ಬೃಹತ್ ಗಾತ್ರದ ಬೆಲ್ಲ ಮತ್ತು ಕೊಬ್ಬರಿ ಹಾರವನ್ನು ಹಾಕುವ ಮೂಲಕ ಸ್ವಾಗತಿಸಿ ನಂತರ ಸಹಸ್ರಾರು ಸಂಖ್ಯೆಯಲ್ಲಿ ಯುವಕರು ಮೆರವಣಿಗೆ ಮೂಲಕ ಪಟ್ಟಣಕ್ಕೆ ಆಗಮಿಸಿದ ಯುವ ನಾಯಕರಿಗೆ ದಾರಿಯುದ್ದಕ್ಕೂ ಸಾರ್ವಜನಿಕರು ಪಟಾಕಿ ಸಿಡಿಸಿ ಹೂವಿನ ಹಾರ ಹಾಕುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು..

ಇದೇ ವೇಳೆ ನೂರಾರು ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕಾರ್ಯಕರ್ತರಿಗೆ ಜೆಡಿಎಸ್ ಶಾಲು ಹೊದಿಸಿ ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾದರು.

ಇದೇ ಸಂದರ್ಭದಲ್ಲಿ ಹುಣಸೂರು ಶಾಸಕ ಜಿ.ಡಿ ಹರೀಶ್ ಗೌಡ, ಸಾರಾ ಮಹೇಶ್ ಅವರು, ಎಂಎಲ್ಸಿ ಮಂಜೇಗೌಡ, ಜಿಲ್ಲಾ ಅಧ್ಯಕ್ಷ ಅಶ್ವಿನ್ ಕುಮಾರ್, ಮಾಜಿ ಶಾಸಕ ಕೆ.ಮಹದೇವ್, ಪ್ರಸನ್ನ, ಮಂಜೇಗೌಡ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮುಖಂಡರು ಸೇರಿದಂತೆ ಸಾವಿರಾರು ಜನ ಭಾಗಿಯಾಗಿದ್ದರು.

Key words: Mysore HD Kote, JDS, Nikhil Kumaraswamy