ಮೈಸೂರು,ಜೂನ್,30,2025 (www.justkannada.in): ಹಾಸನ ಜಿಲ್ಲೆಯಲ್ಲಿ ಸುಮಾರು 40 ದಿನಗಳಲ್ಲಿ 20ಕ್ಕೂ ಹೆಚ್ಚು ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದು ಈ ಹಿನ್ನೆಲೆಯಲ್ಲಿ ಹಾಸನ ರೋಗಿಗಳು ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಲಗ್ಗೆ ಇಡುತ್ತಿದ್ದಾರೆ.
ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಪ್ರತಿನಿತ್ಯ ಮುನ್ನೂರರಿಂದ ನಾಲ್ಕುನೂರು ಮಂದಿ ರೋಗಿಗಳು ಹಾಸನದಿಂದ ಮೈಸೂರಿಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎದೆನೋವು ಎಂದು ಚಿಕಿತ್ಸೆಗೆ ಬರುತ್ತಿದ್ದು ಒಪಿಡಿಗೆ ಹೆಚ್ಚಾಗಿ ಓಡೋಡಿ ಬರುತ್ತಿದ್ದಾರೆ.
ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ನೂರು ಮಂದಿ ಮೃತಪಡುತ್ತಾರೆ. ಏಪ್ರಿಲ್ ತಿಂಗಳಲ್ಲಿ 109 ಮಂದಿ ಸಾವನ್ನಪ್ಪಿದ್ದಾರೆ. ಮೇ ತಿಂಗಳಲ್ಲಿ 106 ಮಂದಿ ಮೃತರಾಗಿದ್ದಾರೆ. ತೀವ್ರ ಹೃದಯಾಘತಾದಿಂದ ಪ್ರತಿ ತಿಂಗಳು 70 ರಿಂದ 80 ಮಂದಿ ಸಾವನ್ನಪ್ಪುತ್ತಿದ್ದು, ಸಾವನ್ನಪ್ಪುವವರ ಪೈಕಿ ಬಹುತೇಕ ಯುವಕ ಸಮೂಹದವರೇ ಹೆಚ್ಚಾಗಿರುತ್ತಾರೆ.
20 ವರ್ಷದ ಹಾಸನದ ಯುವಕನಿಗೆ ತೀವ್ರ ಹೃದಯಾಘಾತ
ನೆನ್ನೆ ಸಂಜೆ ಹೊಳೆನರಸೀಪುರದಲ್ಲಿ 20 ವರ್ಷದ ಹಾಸನದ ಯುವಕ ಮಂಜುನಾಥ್ ಎಂಬುವವನಿಗೆ ತೀವ್ರ ಹೃದಯಾಘಾತವಾಗಿದ್ದು ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ದುರಭ್ಯಾಸ ಇಲ್ಲದಿದ್ದರೂ ಕೂಡ ಹೃದಯಾಘಾತ ಆಗಿದ್ದು ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಸ್ಟಂಟ್ ಹಾಕಿ ಚಿಕಿತ್ಸೆ ಕೊಡುತ್ತಿದ್ದಾರೆ. ರೋಗಿ ಮಂಜುನಾಥ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
key words: Hassan patients , Jayadeva Hospital , Mysore