ಜನಸ್ಪಂದನ” ಅಲ್ಲ ‘ಜನ ಮರ್ದನ” ಎಂದು ಹೆಸರಿಡಬೇಕಾಗಿತ್ತು- ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ.

ಬೆಂಗಳೂರು,ಸೆಪ್ಟಂಬರ್,10,2022(www.justkannada.in): ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ವರ್ಷ ತುಂಬಿದ್ದಕ್ಕಾಗಿ ಜನಸ್ಪಂದನ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಕ್ಕೆ “ಜನಸ್ಪಂದನ” ಅಲ್ಲ ‘ಜನ ಮರ್ದನ” ಎಂದು ಹೆಸರಿಡಬೇಕಾಗಿತ್ತು. ಕಳೆದ ಮೂರು ವರ್ಷಗಳ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಮತ್ತು ಸುಳ್ಳು ಹೇಳಿಕೆಗಳಿಂದಾಗಿ ಜನ ನಲುಗಿಹೋಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಿಸಿದರು.

ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿ ಬಿಜೆಪಿ ಸರ್ಕಾರದ ವಿರುದ‍್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಿಷ್ಟು.

ಸ್ಪಂದನ ಮಾಡಲು ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ? ವಿರೋಧ ಪಕ್ಷಗಳು ಇವರನ್ನು ಪ್ರಶ್ನೆ ಮಾಡಿದರೆ ಸಿಬಿಐ, ಇಡಿ, ಐಟಿ ದಾಳಿ ನಡೆಸಿ ಬೆದರಿಸುತ್ತಾರೆ. ನಾಗರಿಕರು ಪ್ರಶ್ನೆ ಮಾಡಿದರೆ ಸುಳ್ಳು ಕೇಸ್ ಗಳನ್ನು ಹಾಕಿ ಜೈಲಿಗೆ ಹಾಕುತ್ತಾರೆ. ಜನ ಸ್ಪಂಧಿಸುವುದಾದರೂ  ಹೇಗೆ?

ಜನತೆಗೆ ಮುಕ್ತವಾಗಿ ಮಾತನಾಡಲು ಅವಕಾಶ ಕೊಟ್ಟರೆ ಜನಾಕ್ರೋಶದಲ್ಲಿ ಇವರ ಜನಸ್ಪಂದನ ಕೊಚ್ಚಿಹೋಗಬಹುದು. ಬಿಜೆಪಿಯ ಮೂರು ವರ್ಷಗಳ ಸಾಧನೆ ಎಂದರೆ ಸುಳ್ಳು, ಭ್ರಷ್ಟಾಚಾರ ಮತ್ತು ದುರಾಡಳಿತ.

ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ ಎಂದು ಅವರ ಪಕ್ಷದ ಸಚಿವರು ಮತ್ತು ಶಾಸಕರು ಹೇಳುತ್ತಿದ್ದಾರೆ. ಇನ್ನೊಂದೆಡೆ ಗುತ್ತಿಗೆದಾರರ ಸಂಘ, ಶಿಕ್ಷಣ ಸಂಸ್ಥೆಗಳ ಒಕ್ಕೂಟ ನೇರವಾಗಿ ಪ್ರಧಾನಿ ಮೋದಿಗೆ ಪತ್ರ ಬರೆಯುತ್ತಿದ್ದಾರೆ. ರಾಜ್ಯ ಹೈಕೋರ್ಟ್ ಒಂದಲ್ಲ ಎರಡಲ್ಲ ಹಲವು ಬಾರಿ ನೇರವಾಗಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಭ್ರಷ್ಟಾಚಾರ ನಿಗ್ರಹ ದಳಕ್ಕೆ ಭ್ರಷ್ಟಾಚಾರವೇ ದಂಧೆಯಾಗಿದೆ, ಸ್ವಯಂ ಸಿಸಿಬಿಯೇ ಅತೀ ದೊಡ್ಡ ಭ್ರಷ್ಟರ ಕೂಪವಾಗಿದೆ, ಅದರ ಮುಖ್ಯಸ್ಥ ಎಡಿಜಿಪಿಯೇ ಕಳಂಕಿತ ಅಧಿಕಾರಿ. ಎಸಿಬಿ ಕಚೇರಿಯೇ ಕಲೆಕ್ಷನ್ ಸೆಂಟರ್ ಗಾಗಿವೆ ಎಂದು ಹೇಳಿದ್ದು ನಾವಲ್ಲ ರಾಜ್ಯ ಹೈಕೋರ್ಟ್ ನ್ಯಾಯಾಧೀಶರು.

ಹೈಕಮಾಂಡ್ ಗೆ 2000 ಕೋಟಿ ರೂಪಾಯಿ ಕೊಟ್ಟರೆ ಮುಖ್ಯಮಂತ್ರಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಮಗ ಲಂಚ ಹೊಡೆಯುತ್ತಿದ್ದಾರೆ ಎಂದು ಹೇಳುತ್ತಿರುವುದು ಅವರದ್ದೇ ಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 2 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಮೊದಲ ಬಾರಿಗೆ ಇಡಿ ರಾಜ್ಯಕ್ಕೆ  ಹೇಳಿದವರು  ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್. ಮುಖ್ಯಮಂತ್ರಿ ಯಡಿಯೂರಪ್ಪನವರು ಮತ್ತು ಮತ್ತವರ ಮಕ್ಕಳು ನನ್ನ ಖಾತೆಯಲ್ಲಿ ಕೈ ಆಡಿಸುತ್ತಿದ್ದಾರೆ ಎಂದು 2021ರ ಮಾರ್ಚ್ ನಲ್ಲಿ ರಾಜ್ಯಪಾಲರಿಗೆ ದೂರು ನೀಡಿದ್ದು ನಾವಲ್ಲ, ಅವರದ್ದೇ ಸರ್ಕಾರದಲ್ಲಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು.

ಪಿಎಸ್ ಐ ನೇಮಕಾತಿ ಹಗರಣದಲ್ಲಿ ವಸೂಲಿ ಮಾಡಿದ ಲಂಚವನ್ನು ಸರ್ಕಾರಕ್ಕೆ ನೀಡಿದ್ದೇನೆ ಎಂದು ಹೇಳಿರುವುದು ಕನಕಗಿರಿ ಶಾಸಕ ಬಸವರಾಜ ದಡೆಸುಗೂರ್. ಸರ್ಕಾರಿ ಕಾಮಗಾರಿಗಳಲ್ಲಿ 40% ಕಮಿಷನ್ ನೀಡಬೇಕಾಗುತ್ತದೆ ಇಲ್ಲದೆ ಇದ್ದರೆ ಬಿಲ್ ಪಾಸ್ ಮಾಡುತ್ತಿಲ್ಲ ಎಂದು ಪ್ರಧಾನಿಗೆ ಪತ್ರ ಬರೆದಿರುವುದು ನಾವಲ್ಲ, ಗುತ್ತಿಗೆದಾರರ ಸಂಘದ ಅಧ್ಯಕ್ಷರು.

ಶಿಕ್ಷಣ ಇಲಾಖೆಯಲ್ಲಿ ನ ಭ್ರಷ್ಟಾಚಾರದ ಬಗ್ಗೆಯೂ ಪ್ರಧಾನಿಗೆ ಪತ್ರ ಬರೆದಿರುವುದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ರುಪ್ಸಾ) ಬರೆದಿರುವುದು ನಾವು ಅಲ್ಲ. ಮೂಲ ಸೌಕರ್ಯ ಇಲ್ಲದಿದ್ದರೂ ಹಣ ಪಡೆದು ಈ ಹಿಂದೆಯೇ ಖಾಸಗಿ ಶಾಲೆಗಳ ಆರಂಭಕ್ಕೆ ಬೇಕಾಬಿಟ್ಟಿ ಅನುಮತಿ ನೀಡಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈಗ ಕಟ್ಟಡ ಸುರಕ್ಷತೆ, ಅಗ್ನಿ ಅವಘಡಗಳ ಸುರಕ್ಷತೆಯ ಖಾತರಿ ನಿಯಮಗಳ ಪಾಲನೆ ಹೆಸರಿನಲ್ಲಿ ಅಡ್ಡ ವ್ಯವಹಾರ ನಡೆಸುತ್ತಿದ್ದಾರೆ ಎಂದು ರುಪ್ಸಾ ದೂರಿನಲ್ಲಿ ಉಲ್ಲೇಖಿಸಿದೆ.  ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಅವರ ಪಕ್ಷದ ಶಾಸಕರು, ಸಚಿವರೇ ಸಾಕ್ಷಿ ನೀಡುತ್ತಿದ್ದಾರೆ. ಇವರನ್ನು ಸಾಲಾಗಿ ವೇದಿಕೆಯಲ್ಲಿ ನಿಲ್ಲಿಸಿ ಜನಸ್ಪಂದನ ಮಾಡಿದರೆ ಕಾರ್ಯಕ್ರಮ ಯಶಸ್ವಿಯಾಗಬಹುದು ಎಂದು ಸಿದ್ಧರಾಮಯ್ಯ ವ್ಯಂಗ್ಯವಾಡಿದರು.

ಪಿಎಸ್ ಐ ನೇಮಕಾತಿಯ ಹಗರಣ ಈಗ ರಾಷ್ಟ್ರೀಯ ಸುದ್ದಿಯಾಗಿದೆ. ಈ ಹಗರಣದಲ್ಲಿ ಸಚಿವರು, ಮಾಜಿ ಸಚಿವರು ಮತ್ತು ಅವರ ಮಕ್ಕಳು ಸೇರಿದ ಹಾಗೆ ಎಲ್ಲರೂ ಭಾಗಿಯಾಗಿದ್ದಾರೆ ಎಂದು ತನಿಖಾ ವರದಿಗಳು ಹೇಳುತ್ತಿವೆ. ದುರಾಸೆಗೆ ಬಿದ್ದ ಯುವಕರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಲಾಗಿದೆ. ಎಡಿಜಿಪಿ ಮಟ್ಟದ ಅಧಿಕಾರಿಯನ್ನು ಬಂಧಿಸಲಾಗಿದೆ. 54,000 ಯುವಕರ ಭವಿಷ್ಯ ಈಗ ಕತ್ತಲಲ್ಲಿದೆ. ಇಷ್ಟು ಮಾತ್ರವಲ್ಲ .ಕೆಪಿಎಸ್ಸಿಯಿಂದ ಈ ಹಿಂದೆ ನಡೆದ ಎಫ್ಡಿಎ, ಎಸ್ಡಿಎ, ಪಿಡಬ್ಯ್ಲುಡಿ ಮತ್ತು ಜೆಇ ಹಾಗೂ ಪೊಲೀಸ್ ಕಾನ್ಸ್ಟೆಬಲ್ ನೇಮಕಕ್ಕಾಗಿ ನಡೆದ ಲಿಖಿತ ಪರೀಕ್ಷೆಯಲ್ಲೂ ಅಕ್ರಮಗಳು ನಡೆದಿರುವ ಸಂಗತಿಯನ್ನು ಸಿಐಡಿ ತನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.

ಎಸ್.ಐ ಕರ್ಮಕಾಂಡ ರೀತಿಯೇ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ನಡೆದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆಪಿಟಿಸಿಎಲ್ ಕಿರಿಯ ಅಭಿಯಂತರರ ನೇಮಕಾತಿಗಾಗಿ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದೆ.

ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ (ಎನ್ಸಿಆರ್ಬಿ) ಇತ್ತೀಚಿಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲೂ ರಾಜ್ಯ ಭ್ರಷ್ಟಾಚಾರದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ, ಲಂಚ ಸ್ವೀಕಾರದಲ್ಲಿ ರಾಜ್ಯದಲ್ಲಿ ದಾಖಲಾಗಿರುವ ಪ್ರಕರಣಗಳ ಆಧಾರದಲ್ಲಿ ರಾಜ್ಯ ನಾಲ್ಕನೇ ಸ್ಥಾನಕ್ಕೆ ಬಂದಿದೆ ಎಂದು ಹೇಳಿದೆ.

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಲಂಚಾವತಾರದ ಕೂಪವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ಬಿಡಿಎ ಯಿಂದ ನಾಲ್ಕು ಮಂದಿಗೆ ದುಬಾರಿ ಬೆಲೆಯ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಅಭಿವೃದ್ಧಿ ಹೊಂದಿದ ಬಡಾವಣೆಗಳು, ಅತಿಕ್ರಮಣದಾರರಿಂದ ವಶಕ್ಕೆ ಪಡೆದ ನಿವೇಶನಗಳನ್ನು ಹರಾಜಿನ ಮೂಲಕವೇ ಮಾರಾಟ ಮಾಡಬೇಕು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿರುವ ಬಿಡಿಎ ಹಾಲಿ, ಸಚಿವರು, ಮಾಜಿ ಸಂಸದರು ಸೇರಿದಂತೆ ನಾಲ್ವರಿಗೆ ರಹಸ್ಯವಾಗಿ ದುಬಾರಿ ಮೌಲ್ಯದ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದೆ. ಇದಕ್ಕೆ ಸಂಬಂಧಪಟ್ಟಂತೆ ಬಿಡಿಎ ಆಯುಕ್ತ ರಾಜೇಶ್ ಗೌಡ ಎಂ.ಬಿ.ರಾಜೇಶ್ ಗೌಡ ಅವರನ್ನು ಸುಪ್ರೀಂಕೋರ್ಟ್ ಸೂಚನೆ ಬಳಿಕ ಸರ್ಕಾರ ಎತ್ತಂಗಡಿ ಮಾಡಿತು.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಅನುಕೂಲವಾಗುವ ಹಾಗೂ ಫಲಾನುಭವಿಗಳೇ ಇಲ್ಲದ ಕಾಮಗಾರಿಗಳನ್ನು ನಿರ್ವಹಿಸುವ ಮೂಲಕ ಕುಷ್ಟಗಿ ಉಪವಿಭಾಗ, ಕೃಷ್ನ ಭಾಗ್ಯ ಜಲ ನಿಗಮದ 1136.63 ಕೋಟಿ ರೂ.ಭ್ರಷ್ಟಾಚಾರ ಮೇಲುನೋಟಕ್ಕೆ ನಿಜವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿರುವ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಪ್ರಭಾಖರ್ ಎಂ.ಚಿಣಿ ಅವರ ವಿರುದ್ಧದ ಆರೋಪಗಳು ಮತ್ತು ಪ್ರಕರಣದ ಸತ್ಯಾಸತ್ಯತೆಯ ತನಿಖೆ ನಡೆಸಲು ವಿಚಕ್ಷಣಾ ದಳಕ್ಕೆ ವಹಿಸಿ 2022ರ ಫೆ.16 ರಂದು ಆದೇಶ ಹೊರಡಿಸಲಾಗಿದೆ.

2021ರ ಡಿಸೆಂಬರ್ 13 ರಂದು ನಡೆದಿದ್ದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ನೇಮಕಾತಿ ಪರೀಕ್ಷೆಗಳಲ್ಲೂ ಅಕ್ರಮ ನಡೆದಿರುವ ವಿಡಿಯೊ ಬಹಿರಂಗಗೊಂಡಿದೆ. ಕೆಪಿಎಸ್ಸಿ ಈ ಪರೀಕ್ಷೆಗಳನ್ನು ನಡೆಸಿತ್ತು. ಲಾಡ್ಜ್ ನಲ್ಲಿ ಕುಳಿತು ಬ್ಲೂಟೂತ್ ಮೂಲಕ ಪರೀಕ್ಷಾರ್ಥಿಗಳಿಗೆ ಸರಿ ಉತ್ತರಗಳನ್ನು ಒದಗಿಸುತ್ತಿರುವ ವಿಡಿಯೊ ಬಹಿರಂಗಗೊಂಡಿದೆ.

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆಗಳ ಸೋರಿಕೆ ಪ್ರಕರಣ ಸಂಬಂಧ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ.ಎಚ್.ನಾಗರಾಜ್ ಅವರನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲವು ಪ್ರಾಧ್ಯಾಪಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ರಾಗಿ, ಭತ್ತ ಮತ್ತು ಮೆಕ್ಕೆಜೋಳ ರೈತರಿಗೆ ಉಚಿತವಾಗಿ ಗೋಣಿಚೀಲ (ಗನ್ನಿ ಬ್ಯಾಗ್) ವಿತರಣೆ ಹೆಸರಿನಲ್ಲಿ ಅಕ್ರಮ ನಡೆದಿದೆ. ರೈತರಿಗೆ ಚೀಲವನ್ನೂ ಕೊಡದೆ, ಹಣವನ್ನೂ ಕೊಡದೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಕೋಟಿಗಟ್ಟಲೆ ದುಡ್ಡನ್ನು ರೈತರ ಹೆಸರು ಹೇಳಿಕೊಂಡು ನಿಗಮದ ಅಧಿಕಾರಿಗಳೇ ಜೇಬಿಗಿಳಿಸಿದ್ದಾರೆ.

ಭೂ ವ್ಯಾಜ್ಯ ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ಆದೇಶ ನೀಡಲು 5 ಲಕ್ಷ ರೂ ಲಂಚ ಪಡೆದ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದರು

ಬೆಂಗಳೂರು ಉಪನೋಂದಣಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಮಧ್ಯವರ್ತಿಗಳ  ಹಾವಳಿ, ಅಕ್ರಮವಾಗಿ ದಾಖಲೆಗಳ ನೋಂದಣಿ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ವಿಚಾರಣೆ ಆರಂಭಿಸಿದ್ದಾರೆ.

ಬಿಜೆಪಿಯ 40% ಸಾಧನೆ ಬಿಬಿಎಂಪಿಯಲ್ಲೂ ರಾರಾಜಿಸುತ್ತಿದೆ. ಕಾಮಗಾರಿ ವಿಭಾಗದಲ್ಲಿ 566.51 ಕೋಟಿ ರೂ. ಬಿಲ್ ಪಾವತಿಗೆ ಆಡಿಟ್ ವರದಿಯಲ್ಲಿ ಆಕ್ಷೇಪಣೆ ಮಾಡಿದ್ದಾರೆ. ರಾಜಕಾಲುವೆ, ರಸ್ತೆ, ಮೂಲಭೂತ ಸೌಕರ್ಯ, ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎನ್ನುವುದನ್ನು 2018-19 ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಕಾಮಗಾರಿ ನಿರ್ವಹಿಸದೇ ಬಿಲ್ ಪಾವತಿ, ಒಂದೇ ಕಾಮಗಾರಿಗೆ ಎರೆಡೆರಡು ಬಾರಿ ಹಣ ಬಿಡುಗಡೆ, ಎಸ್.ಆರ್.ದರಕ್ಕಿಂತ ಹೆಚ್ಚು ಹಣ ಪಾವತಿಸಲಾಗಿದೆ. ಈ ಹಣವನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ವಸೂಲು ಮಾಡುವಂತೆ ಲೆಕ್ಕ ಪರಿಶೋಧಕರು ಸೂಚಿಸಿದ್ದಾರೆ.

ಕೋವಿಡ್ ನಿಯಂತ್ರಣ ಸಂಬಂಧ ಮಾಡಿದ ಎಲ್ಲ ಖರೀದಿಗಳ ಬಗೆಗಿನ ದಾಖಲೆಗಳನ್ನು 24 ಗಂಟೆಗಳಲ್ಲಿ ಸಾರ್ವಜನಿಕಗೊಳಿಸುತ್ತೇನೆ ಎಂದು ಜುಲೈ 21 ರಂದು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದರು. ಆದರೆ ಇದುವರೆಗೂ ಒದಗಿಸಿಲ್ಲ.

ಬೆಂಗಳೂರು ನಗರದ 12 ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎನ್ನುವುದನ್ನು ಬಿಜೆಪಿ ಸಂಸದರೇ ಪತ್ತೆ ಹಚ್ಚಿದರು. ಇದರಲ್ಲಿ ಬಿಜೆಪಿ ಶಾಸಕರೇ ಭಾಗಿ ಆಗಿದ್ದಾರೆ ಎಂದು ಎಲ್ಲಾ ಪತ್ರಿಕೆಗಳೂ ವರದಿ ಮಾಡಿದವು. ಅದರೂ ದಂಧೆಯ ಕೊನೆ ಹಂತದಲ್ಲಿದ್ದ ಕೆಲವರನ್ನು ಪೊಲೀಸರು ಬಂಧಿಸಿದ್ದು ಬಿಟ್ಟರೆ ದಂಧೆ ಹಿಂದಿರುವ ದೊಡ್ಡ ತಲೆಗಳನ್ನು ಕಾಪಾಡಿದರು.

ಕಲ್ಯಾಣ ಕರ್ನಾಟಕ ಭಾಗದ ಅಂಗನವಾಡಿ ಮಕ್ಕಳ ಪಾಲಿನ ಮೊಟ್ಟೆಯ ಹಣದಲ್ಲೂ ಭ್ರಷ್ಟಾಚಾರ ಎಸಗಿದ ಆರೋಪ ಮಹಿಳಾ ಮತ್ತು ಮಕ್ಕಳ ಕಲ್ಯಣ ಸಚಿವೆ ಆಗಿದ್ದ ಸಚಿವೆ ಶಶಿಕಲಾ ಜೊಲ್ಲೆ ಅವರ ಮೇಲೆ ಕೇಳಿ ಬಂತು. ಯಾವುದೇ ಕ್ರಮ ಜರುಗಿಸಲಿಲ್ಲ. ಬದಲಿಗೆ ಮಕ್ಕಳಿಗೆ ಕೊಡುವ ಮೊಟ್ಟೆಯನ್ನೇ ನಿಲ್ಲಿಸಲು ಹುನ್ನಾರ ನಡೆಸಲಾಗುತ್ತಿದೆ.

ಕಂದಾಯ ಸಚಿವ ಆರ್.ಅಶೋಕ್  ಅವರ ಆಪ್ತ ಸಹಾಯಕ ಗಂಗಾಧರ್ ಎಂಬುವರು ಅಕ್ರಮ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಶೃಂಗೇರಿ ಉಪನೋಂದಣಾಧಿಕಾರಿ ಎಚ್.ಎಸ್.ಚಲುವರಾಜು ಅವರು ಶೃಂಗೇರಿ ಠಾಣೆಗೆ ದೂರು ನೀಡಿದ್ದಾರೆ.  ದೂರು ದಾಖಲಾದರೂ ಎಫ್ ಐಆರ್ ದಾಖಲಿಸುವುದಕ್ಕೇ ಮೀನಾಮೇಷ ಎಣಿಸಿದರು. ಕೊನೆಗೂ ಆರೋಪಿಯ ಬಂಧನ ಆಗಲಿಲ್ಲ.

ಮತ್ತೋರ್ವ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ ಮತ್ತು ಬಿಜೆಪಿ ಮುಖಂಡ ರಾಜಣ್ಣ ಎಂಬಾತನ ವಿರುದ್ಧ ವಂಚನೆ ಆರೋಪ ಕೇಳಿ ಬಂತು. ನಿಮ್ಮ ಸರ್ಕಾರದ ಪೊಲೀಸರೇ ಸಚಿವರ ಮನೆಗೆ ನುಗ್ಗಿ ಆರೋಪಿಯನ್ನು ಬಂಧಿಸಿದರು. ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಹಲವರಿಗೆ ವಂಚಿಸಿ ಹಣ ವಸೂಲಿ ಮಾಡಿದ್ದ ಆರೋಪ ಆತನ ಮೇಲೆ ಇತ್ತು. ಆದರೆ ಹಣ ಕೊಟ್ಟು ವಂಚನೆಗೆ ಒಳಗಾದವರಿಗೆ ಇವತ್ತಿಗೂ ನ್ಯಾಯ ಸಿಕ್ಕಿಲ್ಲ.

ಕೊರೊನಾ ಕಾಲದಿಂದಲೇ ಇವರ 40% ಕಮಿಷನ್ ನ  ಭ್ರಷ್ಟಾಚಾರ ಶುರುವಾಗಿದೆ, ಗ್ರಾಮೀಣ ಅಭಿವೃದ್ದಿ, ಲೋಕೋಪಯೋಗಿ, ನೀರಾವರಿ ಇಲಾಖೆಗಳಲ್ಲಿ ಕಾಮಗಾರಿಗಳೇ ಸ್ಥಗಿತಗೊಂಡಿವೆ. ಸಚಿವರು ಲಂಚಕ್ಕಾಗಿ ಪೀಡಿಸುವುದರಿಂದ ಬೇಸತ್ತ ಗುತ್ತಿಗೆದಾರರು ಕಾಮಗಾರಿಗಳನ್ನು ನಿಲ್ಲಿಸಿದ್ದಾರೆ. ರಸ್ತೆ,ಸೇತುವೆ,ವಸತಿ,ಶಾಲೆ,ಆಸ್ಪತ್ರೆ ಕಟ್ಟಡಗಳು ಅರ್ಧಕ್ಕೆ ನಿಂತಿವೆ. ಅತಿವೃಷ್ಟಿ ಪರಿಹಾರ ಕಾಮಗಾರಿಗಳೂ ನಡೆಯುತ್ತಿಲ್ಲ. ಅಲ್ಲಿಯೂ ಈ ಸಚಿವರು ಶಾಸಕರು ಕಮಿಷನ್ ಹೊಡೆಯುತ್ತಿದ್ದಾರೆ.

ಇದರ ಜೊತೆ  ಕ್ರಿಪ್ಟೋ ಕರೆನ್ಸಿಯ ಹಗರಣ, ಪಿಎಸ್ ಐ ನೇಮಕದಲ್ಲಿ ಲಂಚಾವತಾರ, ಶಿಕ್ಷಣ ಮತ್ತು ವಿದ್ಯುತ್ ಇಲಾಖೆಯಲ್ಲಿನ ಭ್ರಷ್ಟಾಚಾರ. ಕಮಿಷನ್ ಸಂಗ್ರಹಿಸಲು ಅಧಿಕಾರಿಗಳನ್ನೇ ಪೀಡಿಸಿದರೆ ಅವರಿಗಾದರೂ ಸಚಿವರ ಮೇಲೆ ಏನು ಗೌರವ ಉಳಿದೀತು? ಸಚಿವರ ಮಾತಿಗೆ ಅಧಿಕಾರಿಗಳು ಏನು ಬೆಲೆ ಕೊಡಬಹುದು. ಒಟ್ಟಾರೆಯಾಗಿ ಇಡೀ ಆಡಳಿತ ಯಂತ್ರವೇ ಕುಸಿದು ಹೋಗಿದೆ.

ಆದಷ್ಟು ಬೇಗ ಚುನಾವಣೆ ನಡೆದು ಈ ಸರ್ಕಾರ ತೊಲಗಿ ಹೋದರೆ ಸಾಕು ಎಂದು ಜನ ಕಾಯುತ್ತಿದ್ದಾರೆ. ನಮ್ಮ ಕಾಲದ ಹಗರಣಗಳನ್ನು ಬಯಲುಗೊಳಿಸುತ್ತಾರೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇವರ ಹುಸಿ ಬೆದರಿಕೆಗೆ ನಾವು ಹೆದರುವುದಿಲ್ಲ. ಕಳೆದ ಹದಿನಾರು ವರ್ಷಗಳಲ್ಲಿ ಹನ್ನೊಂದು ವರ್ಷ ಇವರೇ ಅಧಿಕಾರದಲ್ಲಿದದ್ದು. ಧೈರ್ಯ ಇದ್ದರೆ ಅದನ್ನೂ ಸೇರಿಸಿ ತನಿಖೆ ಮಾಡಲಿ. ನಾವು ತನಿಖೆ ಎದುರಿಸಲು ಸಿದ್ದ ಇದ್ದೇವೆ ಎಂದು ಸಿದ್ಧರಾಮಯ್ಯ ಸವಾಲು ಹಾಕಿದರು.

Key words: jana spandana-Jana Mardana-Former CM -Siddaramaiah