ಬೆಂಗಳೂರು,ಜನವರಿ,14,2026: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳು, ನಿಯಮ ಉಲ್ಲಂಘನೆಗಳ ಕುರಿತು ಹಿಂದಿನ ಅಧ್ಯಕ್ಷ ರಾಜೀವ್ ಅವರನ್ನು ಲೋಕಾಯುಕ್ತ ಸಂಸ್ಥೆಯಿಂದ ವಿಚಾರಣೆಗೊಳಪಡಿಸುವ ಪ್ರಸ್ತಾವವಕ್ಕೆ ಕಾನೂನು ಇಲಾಖೆಯು ಸಹಮತಿಸಿದೆ. ಕಾನೂನು ಇಲಾಖೆಯು ನೀಡಿರುವ ಸಹಮತಿಯನ್ನು ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು ಅಳೆದು ತೂಗಿ ಕಡೆಗೂ ಅನುಮೋದಿಸಿದ್ದಾರೆ.
ಕಾನೂನು ಇಲಾಖೆ ಸಚಿವರಿಂದ ಅನುಮೋದಿತಗೊಂಡಿರುವ ಈ ಕಡತವು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಅಂಗಳಕ್ಕೆ ರವಾನೆಯಾಗಿದೆ.
ರಾಜೀವ್ ಅವರನ್ನು ವಿಚಾರಣೆಗೊಳಪಡಿಸಲು ಪೂರ್ವಾನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ಕಡತವು ಕಳೆದ ಒಂದು ವರ್ಷದಿಂದಲೂ ತೆವಳುತ್ತಲೇ ಇತ್ತು. ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರ ಲಾಗಿನ್ನಿಂದ ಮೇಲೆ ಎದ್ದಿರಲಿಲ್ಲ. 2025ರ ಮೇ ತಿಂಗಳಿನಿಂದಲೂ ಈ ಕಡತವು ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರ ಲಾಗಿನ್ನಲ್ಲೇ ಇತ್ತು.
ನಂತರ ಈ ಕಡತವು 2025ರ ನವೆಂಬರ್ 26ರವರೆಗೆ ಸಚಿವ ಹೆಚ್ ಕೆ ಪಾಟೀಲ್ ಅವರ ಆಪ್ತ ಕಾರ್ಯದರ್ಶಿ ಶಿವಪುತ್ರಪ್ಪ ಅವರ ಲಾಗಿನ್ನಲ್ಲಿತ್ತು.
ರಾಜೀವ್ ಅವರ ವಿರುದ್ಧ ತನಿಖೆ ನಡೆಸಲು ಪೂರ್ವಾನುಮತಿ ನೀಡಬೇಕೇ ಬೇಡವೇ ಎಂಬ ಬಗ್ಗೆ ಇನ್ನೂ ಪರಿಶೀಲನೆ ಹಂತದಲ್ಲೇ ಇತ್ತು. ಈ ಸಂಬಂಧ ಲೋಕಾಯುಕ್ತ ಸಂಸ್ಥೆಯು ಹಲವಾರು ಬಾರಿ ನಗರಾಭಿವೃದ್ಧಿ ಇಲಾಖೆಗೆ ಹಲವು ನೆನಪೋಲೆಗಳನ್ನು ಬರೆದಿತ್ತು.
ಇದು ನ್ಯಾಯಾಲಯದ ಪ್ರಕರಣವಾಗಿರುವ ಕಾರಣ ತೀರ್ಮಾನ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯು ಸರ್ಕಾರಕ್ಕಿತ್ತು. ಹೀಗಾಗಿ ಕಾನೂನು ಇಲಾಖೆಯು ಅಳೆದು ತೂಗಿ ರಾಜೀವ್ ಅವರ ವಿಚಾರಣೆ ನಡೆಸಲು ಸಹಮತಿ ವ್ಯಕ್ತಪಡಿಸಿದೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ (ತಿದ್ದುಪಡಿ ಕಾಯ್ದೆ 2018) 1988ರ ಕಲಂ 17ರ ಅನ್ವಯ ರಾಜೀವ್ ಅವರ ವಿರುದ್ಧ ವಿಚಾರಣೆ ನಡೆಸಲು ಅನುಮತಿ ನೀಡಿದೆ. ಇದನ್ನು ಕಾನೂನು ಇಲಾಖೆಯ ಉನ್ನತ ಅಧಿಕಾರಿ ಮತ್ತು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್ಗೆ ಖಚಿತಪಡಿಸಿದ್ದಾರೆ.
ಕಾನೂನು ಸಚಿವರಿಂದ ಅನುಮೋದಿತಗೊಂಡಿರುವ ಕಡತವನ್ನು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ದೀಪಾ ಚೋಳನ್ ಅವರು ಪರಿಶೀಲಿಸಿದ್ದರು. ಅಲ್ಲದೇ ಈ ಕಡತವನ್ನು 2026ರ ಜನವರಿ 7ರಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಲಾಗಿನ್ಗೆ ರವಾನೆಯಾಗಿದೆ.
ಈ ಕುರಿತು ಸಚಿವ ಬೈರತಿ ಸುರೇಶ್ ಅವರು ಪರಿಶೀಲನೆ ನಡೆಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳಿಸಲಾಗುತ್ತದೆ. ಮುಖ್ಯಮಂತ್ರಿಗಳ ಪರಿಶೀಲನೆ ನಂತರ ಅಥವಾ ಅದಕ್ಕೂ ಮೊದಲು ಸಚಿವ ಸಂಪುಟದಲ್ಲಿ ಈ ಪ್ರಸ್ತಾವಿಸಲು ಕಡತ ಮಂಡಿಸಲಾಗುತ್ತದೆ ಎಂದು ವಿಶ್ವಸನೀಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಈ ಪ್ರಕರಣದ ಕುರಿತು ‘ದಿ ಫೈಲ್ ಸಹ ಆರ್ಟಿಐ ಅರ್ಜಿ ಸಲ್ಲಿಸಿತ್ತು. ಇದಕ್ಕೆ 2025ರ ನವೆಂಬರ್ 7ರಂದು ಉತ್ತರ ಒದಗಿಸಿರುವ ಕಾನೂನು ಇಲಾಖೆಯು ಈ ಕಡತವನ್ನು ಕಾನೂನು ಇಲಾಖೆ ಸಚಿವರಿಗೆ ಸಲ್ಲಿಸಿದೆ ಎಂಬ ಮಾಹಿತಿಯನ್ನು ಒದಗಿಸಿತ್ತು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಪಡಿಸಿದ್ದ ಬಡಾವಣೆಗಳಲ್ಲಿನ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಪ್ರಕರಣದಲ್ಲಿ ಈಗಾಗಲೇ ಮುಡಾ ಮಾಜಿ ಆಯುಕ್ತ ಜಿ ಟಿ ದಿನೇಶ್ ಕುಮಾರ್ ಅವರ ವಿರುದ್ಧ ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿತ್ತು.
‘ಕಡತ ಸಂಖ್ಯೆ ಲಾ-ಓಪಿಎನ್/317/2025ರಲ್ಲಿ ವ್ಯವಹರಿಸಲಾಗಿದೆ. ಈ ಕಡತವನ್ನು ಕಾನೂನು ಇಲಾಖೆ ಸಚಿವರಿಗೆ ಸಲ್ಲಿಸಲಾಗಿದ್ದು ಪರಿಶೀಲನೆಯಲ್ಲಿರುತ್ತದೆ. ಕಾರಣ ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಗೆ ಇದುವರೆಗೂ ಯಾವುದೇ ಅಭಿಪ್ರಾಯವನ್ನೂ ನೀಡಿರುವುದಿಲ್ಲ’ ಎಂದು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ಆರ್ಟಿಐ ಅಡಿಯಲಿ ಮಾಹಿತಿ ಒದಗಿಸಿತು.
ರಾಜೀವ್ ಅವರನ್ನು ಭ್ರಷ್ಟಾಚಾರ ತಡೆ ಕಾಯ್ದೆ 1988ರ (ತಿದ್ದುಪಡಿ ಕಾಯ್ದೆ 2018) ಲೋಕಾಯುಕ್ತ ವಿಚಾರಣೆಗೊಳಪಡಿಸಲು ನಗರಾಭಿವೃದ್ಧಿ ಇಲಾಖೆಯು ಕಲಂ 17 (ಎ) ಅಡಿ ಪೂರ್ವಾನುಮತಿ ಕೋರಿತ್ತು. ಈ ಕುರಿತು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ತನ್ನ ಅಭಿಪ್ರಾಯವನ್ನು ತಿಳಿಸಿತ್ತು. ಆದರೆ ಈ ಪ್ರಸ್ತಾವವು ಸಚಿವ ಹೆಚ್ ಕೆ ಪಾಟೀಲ್ ಅವರು ಹಲವು ತಿಂಗಳುಗಳಿಂದಲೂ ಪರಿಶೀಲಿಸುತ್ತಲೇ ಇದ್ದದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿತ್ತು.
ಈ ಮಧ್ಯೆ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ (ಅಭಿಪ್ರಾಯ)ಯು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ (ಅಭಿವೃದ್ಧಿ ಪ್ರಾಧಿಕಾರ ಮತ್ತು ನಯೋಸೇ) ಗೆ 2025ರ 17ರಂದೇ ಅನಧಿಕೃತ ಟಿಪ್ಪಣಿ ಹೊರಡಿಸಿತ್ತು. ರಾಜೀವ್ ಅವರನ್ನು ವಿಚಾರಣೆಗೊಳಪಡಿಸಲು ನಗರಾಭಿವೃದ್ಧಿ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯ (UDD 172 MYAP 2025 (1752011) ಕೋರಿತ್ತು . ಅಲ್ಲದೆ ಈ ಸಂಬಂಧ 2025ರ ಆಗಸ್ಟ್ 28 ರಂದು ಅನಧಿಕೃತ ಟಿಪ್ಪಣಿಯನ್ನೂ ಕಾನೂನು ಇಲಾಖೆಗೆ ಬರೆದಿತ್ತು.
‘ಕಾನೂನು ಇಲಾಖೆಯ ಅಭಿಪ್ರಾಯವನ್ನು ಸಚಿವರ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಸದರಿ ಕಡತವು ಸಚಿವರ ಪರಿಶೀಲನೆಯಲ್ಲಿದೆಯೆಂದು ತಮಗೆ ಈ ಮೂಲಕ ತಿಳಿಸಿದೆ’ ಎಂದು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ಅನಧಿಕೃತ ಟಿಪ್ಪಣಿ ಹೊರಡಿಸಿತ್ತು.
ಕಾನೂನು ಇಲಾಖೆಯು ಒದಗಿಸಿದ್ದ ಕಡತದ ಸಂಖ್ಯೆಯನ್ನು ‘ದಿ ಫೈಲ್, ಇ-ಆಫೀಸ್ ತಂತ್ರಾಂಶದಲ್ಲಿಯೂ ಪರಿಶೀಲಿಸಿತ್ತು. ಈ ಕಡತವು 2025ರ ಮೇ 14ರಿಂದಲೂ ಸಚಿವ ಹೆಚ್ ಕೆ ಪಾಟೀಲ್ ಅವರ ಲಾಗಿನ್ನಲ್ಲಿಯೇ ಇತ್ತು.
ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುಡಾ ಮಾಜಿ ಆಯುಕ್ತ ಜಿ ಟಿ ದಿನೇಶ್ ಕುಮಾರ್ ಅವರನ್ನು ಒಂಬತ್ತು ದಿನಗಳ ಕಾಲ ಇಡಿ ವಶಕ್ಕೆ ನೀಡಲಾಗಿತ್ತು. ಇದಕ್ಕೂ ಮುನ್ನ ಹಣ ವರ್ಗಾವಣೆ ಮತ್ತು ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಆರೋಪ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದ ದಿನೇಶ್ ಕುಮಾರ್ ಅವರನ್ನು ಬಂಧನಕ್ಕೊಳಪಡಿಸಿತ್ತು. ಈ ಸಂಬಂಧ ದಿನೇಶ್ ಕುಮಾರ್ ವಿರುದ್ಧ ಚಾರ್ಜ್ ಶೀಟ್ ಕೂಡ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿತ್ತು.
ರಾಜೀವ್ ವಿರುದ್ಧದ ಆರೋಪಗಳೇನು?
ಹೆಚ್ ವಿ ರಾಜೀವ್ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಇವರು ಮುಡಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿಧಿ ನಿರ್ವಹಣೆ ಸಂಬಂಧ ತೆರೆದಿದ್ದ ಒಟ್ಟು 23 ಬ್ಯಾಂಕ್ ಖಾತೆಗಳ ನಗದು ಪುಸ್ತಕಗಳಲ್ಲಿನ ಹಲವು ನ್ಯೂನತೆಗಳನ್ನು ರಾಜ್ಯ ಲೆಕ್ಕಪತ್ರ ಮತ್ತ ಲೆಕ್ಕ ಪರಿಶೋಧನೆ ಇಲಾಖೆಯು ಪತ್ತೆ ಹಚ್ಚಿತ್ತು.
ಹಾಗೆಯೇ ಮುಡಾದಲ್ಲಿ ಚಾಲ್ತಿಯಲ್ಲಿದ್ದ 23 ಖಾತೆಗಳಲ್ಲಿ 15 ಖಾತೆಗಳಲ್ಲಿನ ಮೊತ್ತವನ್ನು ಸಕ್ಷಮ ಪ್ರಾಧಿಕಾರದ ಅನುಮೋದನೆಯಿಲ್ಲದೆಯೇ ಆಂತರಿಕ ವರ್ಗಾವಣೆ ಮಾಡಲಾಗಿತ್ತು ಎಂಬುದನ್ನೂ ಸಹ ಲೆಕ್ಕ ಪರಿಶೋಧಕರು ಬಯಲು ಮಾಡಿದ್ದರು.
ವಿಶೇಷವೆಂದರೇ ಮುಡಾದಲ್ಲಿನ ಬದಲಿ ನಿವೇಶನ ಅಕ್ರಮಗಳ ರೂವಾರಿ ಎಂದು ಜಾರಿ ನಿರ್ದೇಶನಾಲಯವು ಈಗಾಗಲೇ ವಶಕ್ಕೆ ಪಡೆದುಕೊಂಡಿರುವ ಜಿ ಟಿ ದಿನೇಶ್ ಕುಮಾರ್, ಡಾ ಡಿ ಬಿ ನಟೇಶ್, ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಇದೇ ಅವಧಿಯಲ್ಲಿ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.
2021-22ನೇ ಸಾಲಿನ ಲೆಕ್ಕ ಪರಿಶೋಧನೆಯ ವರದಿಯು ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಲವು ಗಂಭೀರ ಅಕ್ರಮಗಳ ಮತ್ತೊಂದು ಮುಖವನ್ನು ತೆರೆದಿಟ್ಟಿತ್ತು.
ನಗದು ಪುಸ್ತಕ ನಿರ್ವಹಣೆಯಲ್ಲಿರುವ ಲೋಪಗಳೇನು?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಪ್ರಾಧಿಕಾರದ ನಿಧಿ ನಿರ್ವಹಣೆಗಾಗಿ ಒಟ್ಟು 23 ಬ್ಯಾಂಕ್ ಖಾತೆಗಳನ್ನು ನಿರ್ವಹಿಸಿತ್ತು. ಆದರೆ ನಗದು ಪುಸ್ತಕಗಳನ್ನು ನಿರ್ವಹಣೆಯಲ್ಲಿ ಹಲವು ಲೋಪಗಳಿದ್ದವು ಎಂದು ಲೆಕ್ಕ ಪರಿಶೋಧಕರ ವರದಿಯಲ್ಲಿ ವಿವರಿಸಲಾಗಿದೆ.
ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಚೇಧ 328 ಮತ್ತು 329(1)ರಿಂದ (8)ರ ಅನ್ವಯ ಪ್ರಾರಂಭಿಕ ಶಿಲ್ಕು ಬ್ಯಾಂಕ್ ಖಾತೆವಾರು ಪ್ರತ್ಯೇಕ ನಗದು ಪುಸ್ತಕವನ್ನು ನಿರ್ವಹಿಸಬೇಕಿತ್ತು. ಪ್ರತಿ ದಿನದ ವ್ಯವಹಾರದ ಸ್ವೀಕೃತಿ ಮತ್ತು ವೆಚ್ಚದ ವಿವರಗಳನ್ನು ದಾಖಲಿಸಬೇಕಿತ್ತು. ನಗದು ವಹಿ ಶಿಲ್ಕು ಮತ್ತು ಬ್ಯಾಂಕ್ ಶಿಲ್ಕಿಗೂ ಆಸಿಕವಾಗಿ ಸಮನ್ವಯ ಮಾಡಿಕೊಂಡು ದೃಢೀಕರಿಸಬೇಕಿತ್ತು. ಆದರೆ ಮುಡಾ ಅಧಿಕಾರಿಗಳು ಈ ಯಾವ ಪ್ರಕ್ರಿಯೆಗಳನ್ನೂ ಮಾಡಿರಲಿಲ್ಲ.
‘ನಗದು ಪುಸ್ತಕವನ್ನು ನಿಗದಿತ ನಮೂನೆಯಲ್ಲಿ ನಿರ್ವಹಿಸಿರುವುದಿಲ್ಲ. ಟ್ಯಾಲಿ ತಂತ್ರಾಂಶದಲ್ಲಿ ನಿರ್ವಹಿಸಿರುವ ನಗದು ಪುಸ್ತಕದ ಪ್ರತಿಯನ್ನು ಮಾತ್ರ ಪರಿಶೀಲನೆಗೆ ಹಾಜರುಪಡಿಸಿದ್ದಾರೆ. ನಗದು ಪುಸ್ತಕವನ್ನು ಸಕ್ಷಮ ಅಧಿಕಾರಿಯು ಸಹಿ ಮಾಡಿ ದೃಢೀಕರಿಸಿಲ್ಲ. ಮತ್ತು ಪ್ರತಿ ಮಾಹೆಯ ಅಂತ್ಯಕ್ಕೆ ನಗದಾಗದೇ ಉಳಿದಿರುವ ಧನಾದೇಶಗಳ ವಿವರಗಳನ್ನು ಮಾಹೆವಾರು ಸಮನ್ವಯ ಮಾಡಿ ನಗದು ಪುಸ್ತಕದಲ್ಲಿ ದಾಖಲಿಸಿ ದೃಢೀಕರಿಸಿರುವುದಿಲ್ಲ’ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ವಿವರಿಸಿತ್ತು.
ಹಾಗೆಯೇ ನೆಫ್ಟ್ ಮತ್ತು ಆರ್ಟಿಜಿಎಸ್ ಮೂಲಕ ಪ್ರಾಧಿಕಾರಕ್ಕೆ ಜಮೆಯಾದ ಮೊತ್ತಗಳು ಯಾವ ಯಾವ ಬಾಬು ಜಮೆಯಾಗಿದೆ ಎಂಬುದೂ ಸಹ ನಗದು ಪುಸ್ತಕದಲ್ಲಿ ನಮೂದಿಸಿರಲಿಲ್ಲ.
ಹೊಸದಾಗಿ ಪ್ರಾರಂಭಿಸಲಾದ ಖಾತೆಗಳ ಉದ್ದೇಶ ಮತ್ತು ಈಗಾಗಲೇ ತೆರೆಯಲಾಗಿರುವ ಖಾತೆಗಳಲ್ಲಿ ಉದ್ದೇಶಿತ ಪ್ರಕಾರ್ಯಗಳನ್ನು ಕೈಗೊಳ್ಳುವಲ್ಲಿ ವಿಫಲವಾದಲ್ಲಿ ಮಾತ್ರ ಹೊಸ ಖಾತೆ ತೆರೆಯಬಹುದು. ಮತ್ತು ಹಳೆಯ ಖಾತೆಗಳನ್ನು ಮುಕ್ತಾಯಗೊಳಿಬಹುದು. ಹಳೆ ಖಾತೆಗಳು ಇದ್ದರೂ ಸಹ ಅದೇ ಸ್ವರೂಪದ ಪ್ರಕಾರ್ಯಗಳಿಗೆ ಹೊಸ ಬ್ಯಾಂಕ್ ಖಾತೆಗಳನ್ನು ಪ್ರಾರಂಭಿಸಿರುವ ಮತ್ತು ಹಳೆಯ ಖಾತೆಗಳನ್ನು ಮುಕ್ತಾಯಗೊಳಿಸದೇ ಮುಂದುವರೆಸಿರುವ ಸಂಬಂಧ ಮಾಹಿತಿಯನ್ನು ಹಾಜರುಪಡಿಸಲು ಲೆಕ್ಕ ಪರಿಶೋಧಕರು ಸೂಚಿಸಿದ್ದರು.
2021-22ನೇ ಸಾಲಿನಲ್ಲಿ ಪ್ರಾಧಿಕಾರದಲ್ಲಿ ಚಾಲ್ತಿಯಲ್ಲಿರುವ ಒಟ್ಟು 23 ಖಾತೆಗಳಲ್ಲಿ 15 ಖಾತೆಗಳಲ್ಲಿ ಆಂತರಿಕ ವರ್ಗಾವಣೆ ಮಾಡಲಾಗಿದ್ದನ್ನು ಲೆಕ್ಕ ಪರಿಶೋಧಕರು ತಪಾಸಣೆ ಮೂಲಕ ಬಯಲು ಮಾಡಿದ್ದರು.
‘ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಮೊಬಲಗನ್ನು ವರ್ಗಾವಣೆ ಮಾಡಿರುವ ಸಂಬಂಧವಾಗಿ ವಿವರಗಳನ್ನು ಹಾಗೂ ವರ್ಗಾವಣೆ ಸಂಬಂಧವಾಗಿ ಸಕ್ಷಮ ಪ್ರಾಧಿಕಾರದಿಂದ ಪಡೆಯಲಾದ ಅನುಮೋದನೆಯ ಕಡತವನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿರುವುದಿಲ್ಲ. ಆದರೆ ವರ್ಗಾವಣೆ ಮತ್ತು ಸ್ವೀಪ್ ಖಾತೆಗಳನ್ನು ಪ್ರತ್ಯೇಕಿಸಿ ಮಾಹಿತಿಯನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿದ್ದಾರೆ’ ಎಂದು ವರದಿಯಲ್ಲಿ ವಿವರಿಸಿತ್ತು.
ಇದರ ಪ್ರಕಾರ ನಿವ್ವಳ ಆಂತರಿಕ ವರ್ಗಾವಣೆ ಸ್ವೀಕೃತಿಯು 223,65,52,671 ರು. ಮತ್ತು ಅಂತರಿಕ ವರ್ಗಾವಣೆ ಪಾವತಿಯು 223,65,52,671 ರು.ಗಳಿದೆ. ಒಟ್ಟು ವರ್ಗಾವಣೆ ಮೊತ್ತ ಸ್ವೀಕೃತಿ ಮತ್ತು ಪಾವತಿಯು 447.31,05,342 ರೂ ಗಳಾಗಿವೆ. ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಮಾಡುವಾಗ ಒಂದು ನಿರ್ದಿಷ್ಟ ಉದ್ದೇಶ ಮತ್ತು ದಿನಾಂಕದಂದು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ ಹಣ ವರ್ಗಾಯಿಸಲಾಗಿದೆ. ಮುಡಾದ ಈ ಲೋಪವನ್ನು ಲೆಕ್ಕ ಪರಿಶೋಧಕರು ಗಂಭೀರವಾಗಿ ಪರಿಗಣಿಸಿತ್ತು.
ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಲವು ಅಕ್ರಮಗಳ ಕುರಿತು ಲೆಕ್ಕ ಪರಿಶೋಧಕರು ಸಲ್ಲಿಸಿದ್ದ ವರದಿಯತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲೀ, ಸಚಿವ ಬೈರತಿ ಸುರೇಶ್ ಅವರಾಗಲೀ ಕಣ್ಣಾಡಿಸಿರಲಿಲ್ಲ. ವರದಿ ಆಧರಿಸಿ. ಇದುವರೆಗೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಕೃಪೆ: ದಿ ಫೈಲ್
Key words: Investigation, against, Former Muda President, Rajiv, Law Department







