ಹಿಂದೂ ಧರ್ಮದ ಕಾರಣದಿಂದಲೇ ಭಾರತರಲ್ಲಿ ಯುದ್ಧಗಳು ನಡೆದಿಲ್ಲ: ಮೋಹನ್ ಭಾಗವತ್

ಬೆಂಗಳೂರು, ಅಕ್ಟೋಬರ್ 22, 2023 (www.justkannada.in): ಹಿಂದೂ ಧರ್ಮವು ಎಲ್ಲ ಧರ್ಮ, ಪಂಗಡಗಳನ್ನು ಗೌರವಿಸುತ್ತದೆ. ಹೀಗಾಗಿ ಭಾರತದಲ್ಲಿ ಎಂದಿಗೂ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ನಾಗ್ಪುರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವರ್ಷಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮವು ಎಲ್ಲ ಧರ್ಮ, ಪಂಗಡಗಳನ್ನು ಗೌರವಿಸುತ್ತದೆ. ಹೀಗಾಗಿಯೇ ಇಸ್ರೇಲ್‌-ಹಮಾಸ್‌ನಂತಹ ಯುದ್ಧದ ಪರಿಸ್ಥಿತಿ ಭಾರತದಲ್ಲಿ ಎಂದಿಗೂ ನಿರ್ಮಾಣವಾಗಿಲ್ಲ ಎಂದು ಹೇಳಿದ್ದಾರೆ.

ಈ ದೇಶದಲ್ಲಿ ಒಂದು ಧರ್ಮವಿದ್ದು, ಅದು ಇತರ ಎಲ್ಲ ಧರ್ಮಗಳ ನಂಬಿಕೆಗಳನ್ನು ಗೌರವಿಸುತ್ತಿದೆ. ಆ ಧರ್ಮವೇ ಹಿಂದೂ ಧರ್ಮ. ಇದು ಹಿಂದೂಗಳ ದೇಶ. ಅದರರ್ಥ ನಾವು ಇತರ ಧರ್ಮಗಳನ್ನು ತಿರಸ್ಕರಿಸುತ್ತೇವೆ ಎಂದಲ್ಲ. ಒಮ್ಮೆ ಹಿಂದೂ ಎಂದು ಹೇಳಿದರೆ ಮುಸಲ್ಮಾನರಿಗೂ ಇಲ್ಲಿ ರಕ್ಷಣೆ ಇದೆ ಎಂದು ಹೇಳುವ ಅಗತ್ಯವಿಲ್ಲ. ಹಿಂದೂಗಳಿಂದ ಮಾತ್ರ ಹೀಗಿರಲು ಸಾಧ್ಯ. ಭಾರತದಲ್ಲಿ ಮಾತ್ರ ಇದು ಸಾಧ್ಯ ಎಂದು ತಿಳಿಸಿದ್ದಾರೆ.

ಉಕ್ರೇನ್-ರಷ್ಯಾ , ಹಮಾಸ್-ಇಸ್ರೇಲ್ ಯುದ್ಧದ ಬಗ್ಗೆ ನಾವು ಕೇಳುತ್ತಿದ್ದೇವೆ. ಅಂತಹ ವಿಷಯಗಳಿಗೆ ನಮ್ಮ ದೇಶದಲ್ಲಿ ಎಂದೂ ಜಗಳವಾಗಿಲ್ಲ. ಶಿವಾಜಿ ಮಹಾರಾಜರ ಕಾಲದಲ್ಲಿ ಅಂತಹ ದಾಳಿಗಳು ನಡೆದಿದ್ದವು. ಆದರೆ ಅದಾದ ಮೇಲೆ ಯಾರೊಂದಿಗೂ ನಾವು (ಹಿಂದೂಗಳು) ಜಗಳವಾಡಿಲ್ಲ ಎಂದು ಹೇಳಿದ್ದಾರೆ.