Saturday, August 8, 2026

BDA Apartments

Home Front Page ಸಚಿವ ಸಂಪುಟ ಸಭೆ ಚರ್ಚೆಯ ಬಳಿಕ ಜಾತಿ ಗಣತಿ ವರದಿ ಜಾರಿ ಬಗ್ಗೆ ತೀರ್ಮಾನ :...

ಸಚಿವ ಸಂಪುಟ ಸಭೆ ಚರ್ಚೆಯ ಬಳಿಕ ಜಾತಿ ಗಣತಿ ವರದಿ ಜಾರಿ ಬಗ್ಗೆ ತೀರ್ಮಾನ : ಸಿಎಂ ಸಿದ್ದರಾಮಯ್ಯ

ಕೊಪ್ಪಳ, ಅಕ್ಟೋಬರ್ 4,2024 (www.justkannada.in):  ಜಾತಿ ಗಣತಿ ವರದಿಯನ್ನು ಸ್ವೀಕರಿಸಿದ್ದು , ವರದಿಯನ್ನು ಇಲಾಖೆ ಸಚಿವರೊಂದಿಗೆ ಮತ್ತು ಸಂಪುಟ ಸಭೆಯಲ್ಲಿರಿಸಿ ಚರ್ಚೆ ನಡೆಸಿದ ನಂತರ ಅದರ ಜಾರಿ ಮಾಡುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಗಿಣಿಗೇರ ಏರ್ ಸ್ಟ್ರಿಪ್ ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಜಾತಿ ಗಣತಿ ಜಾರಿ ಮಾಡುವ ಬಗ್ಗೆ ಶಾಸಕ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಯರೆಡ್ಡಿಯವರು ತಮ್ಮ ಅಭಿಪ್ರಾಯವನ್ನು  ತಿಳಿಸಿದ್ದಾರೆ. ಮುಂದಿನ ವಾರ ಹಿಂದುಳಿದ ವರ್ಗಗಳ ಇಲಾಖಾ ಸಚಿವರ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ಒಳಮೀಸಲಾತಿ ಜಾರಿ ಬಗ್ಗೆ ಪರಿಶೀಲನೆ

ಒಳಮೀಸಲಾತಿ ಜಾರಿ ತರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ , ಒಳಮೀಸಲಾತಿ ಜಾರಿಯ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿದೆ. ಈ ಸಂಬಂಧ  ಸಚಿವ ಸಂಪುಟದಲ್ಲಿ ಹಾಗೂ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ಬಿಜೆಪಿ ಜೆಡಿಎಸ್ ಪಕ್ಷ ದುರ್ಬಲವಾಗುವ ಭಯ ಕಾಡುತ್ತಿದೆ

ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಸಿದ್ದರಾಮಯ್ಯನವರ ಪರವಾಗಿ ಬ್ಯಾಟಿಂಗ್ ಮಾಡಿದ ಬಗ್ಗೆ  ಕುಮಾರಸ್ವಾಮಿಯವರು ಟೀಕೆ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಜಿ.ಟಿ.ದೇವೇಗೌಡರು ಅವರು ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾಗಿದ್ದು, ಹೇಳಿಕೆ ಸರಿಯಾಗಿಯೇ ಇರುತ್ತದೆ. ಭಾಜಪ ಮತ್ತು ಜೆಡಿಎಸ್ ನವರಿಗೆ ನಾನು ಅಧಿಕಾರದಲ್ಲಿದ್ದರೆ , ಅವರ ಪಕ್ಷಗಳು ದುರ್ಬಲವಾಗುವ ಭಯ ಅವರನ್ನು ಕಾಡುತ್ತಿದೆ ಎಂದರು.

ಊಹಾಪೋಹಗಳು ಬೇಡ

ಸಚಿವ ಸತೀಶ್ ಜಾರಕಿಹೊಳಿಯವರು ಪಕ್ಷದ ವರಿಷ್ಠರನ್ನು ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ,  ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆಯವರನ್ನು ಪಕ್ಷದಲ್ಲಿ ಸಚಿವರಾಗಿರುವ ಸತೀಶ್ ಜಾರಕಿಹೊಳಿಯವರು ಭೇಟಿಯಾಗುವುದು ತಪ್ಪೇನಲ್ಲ. ಇಲ್ಲಸಲ್ಲದ ಊಹಾಪೋಹಗಳಿಗೆ ಅವಕಾಶ ನೀಡಬಾರದು ಎಂದರು.

Key words: implementation, caste census, report, CM Siddaramaiah