ಹಿರಿಯರ ಮಾತು ಕೇಳಿ ತಪ್ಪು ಮಾಡಿದೆ: ಸೋಲಿನ ಆತ್ಮಾವಲೋಕನ ಮಾಡಿದ ವಿ.ಸೋಮಣ್ಣ

ಬೆಂಗಳೂರು, ಆಗಸ್ಟ್ 13, 2023 (www.justkannada.in): ನನ್ನ ಕಾಲಿನ ಮೇಲೆ ನಾನೇ ಕಲ್ಲು ಹಾಕಿಕೊಂಡಿದ್ದೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳುವ ಮೂಲಕ ಸೋಲಿನ ಆತ್ಮಾವಲೋಕನ ಮಾಡಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಸ್ವಯಂಕೃತ ಅಪರಾಧದಿಂದಾಗಿ ಸೋಲನುಭವಿಸಿ ಗೋವಿಂದರಾಜನಗರ ಕ್ಷೇತ್ರದ ಜನತೆಗೆ ಅಪಚಾರ ಮಾಡಿದ್ದೇನೆ. ಈ ಮೂಲಕ ನನ್ನ ಕಾಲಿನ ಮೇಲೆ ನಾನೇ ಕಲ್ಲು ಹಾಕಿಕೊಂಡಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚುನಾವಣೆಯಲ್ಲಿ ನಮ್ಮವರೇ ನನಗೆ ಮೋಸ ಮಾಡಿದ್ದು, ಎಲ್ಲರಿಗೂ ಗೊತ್ತು. ಪಕ್ಷದ ನಾಯಕರ ಒತ್ತಾಯಕ್ಕೆ ಮಣಿದು ಎರಡು ಕಡೆ ಸ್ಪರ್ಧಿಸಿದ್ದು, ಹೈಕಮಾಂಡ್‌ ನೀಡಿದ ಟಾಸ್ಕ್‌ ಅನ್ನು ನಾನೊಬ್ಬನೇ ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡಿದೆ. ಆದರೂ ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು ಎಂದಿದ್ದಾರೆ.

ಹಿರಿಯರ ಮಾತು ಕೇಳಿ ತಪ್ಪು ಮಾಡಿದೆ. ನನ್ನ ಗೆಲುವು ಖಚಿತವಾಗಿದ್ದ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆಗೆ ತೆರಳಿದೆ ಎಂದಿದ್ದಾರೆ.