ಉದ್ಯಾನ ನಗರಿಯ ಅತೀ ಎತ್ತರದ ರಾಷ್ಟ್ರಧ್ವಜ ಸ್ತಂಭದಲ್ಲಿ ಜ. 26 ರಿಂದ ಹಾರಾಡಲಿದೆ ತ್ರಿವರ್ಣ ಧ್ವಜ !

ಬೆಂಗಳೂರು, ಜನವರಿ 24 ,2024(www.justkannada.in):  ಉದ್ಯಾನ ನಗರಿ ಬೆಂಗಳೂರಿನ ವಿಜಯನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಚಂದ್ರಾ ಬಡಾವಣೆಯಲ್ಲಿ ಇದೇ ಜನವರಿ 26 ರ ಗಣರಾಜ್ಯೋತ್ಸವ ದಿನದಿಂದು ಅತೀ ಎತ್ತರದ ರಾಷ್ಟ್ ಧ್ವಜ ಸ್ತಂಭದಲ್ಲಿ ತ್ರಿವರ್ಣ ಧ್ವಜ ಹಾರಾಡಲಿದೆ.

ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಅಂದು ಬೆಳಿಗ್ಗೆ 8.30 ಗಂಟೆಗೆ ಚಂದ್ರಾ ಬಡಾವಣೆಯ ಉದ್ಯಾನದಲ್ಲಿ ಈ ಬಾನೆತ್ತರದ ರಾಷ್ಟ್ರಧ್ವಜ ಸ್ತಂಭವನ್ನು ಲೋಕಾರ್ಪಣೆ ಮಾಡಿ, ಪ್ರಪ್ರಥಮ ಬಾರಿಗೆ ರಾಷ್ಟ್ರದ ತ್ರಿವರ್ಣ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.

ಸಂವಿಧಾನದ ಆಶಯಗಳಾದ ದೇಶ ಪ್ರೇಮ, ದೇಶ ಭಕ್ತಿ, ಸೋದರತೆ ಮತ್ತು ಸಾಮರಸ್ಯವನ್ನು ಉಳಿಸಿ ಬೆಳೆಸಲು ಪ್ರೇರಣೆ ಮತ್ತು ಸ್ಫೂರ್ತಿ ನೀಡುವ ಈ ಸಮಾರಂಭದಲ್ಲಿ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಅವರೂ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಮಾರಂಭದ ಪ್ರಾರಂಭಕ್ಕೆ ಮುನ್ನ, ಬೆಳಿಗ್ಗೆ 7-30 ಗಂಟೆಗೆ, ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಾದ್ಯಗೋಷ್ಠಿ-ಸಹಿತವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಲಿವೆ.

ಸಮಾರಂಭದ ನಂತರ, ಬೆಳಿಗ್ಗೆ 10-00 ಗಂಟೆಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ನಾಡಫ್ರಭು ವಾಣಿಜ್ಯ ಸಂಕೀರ್ಣ ಆವರಣದಲ್ಲಿ ರಕ್ತದಾನ ಶಿಬಿರ ಹಾಗೂ ಅರ್ಬುದ ರೋಗ ( ಕ್ಯಾನ್ಸರ್ ) ಉಚಿತ ತಪಾಸಣಾ ಶಿಬರವನ್ನೂ ಆಯೋಜಿಸಲಾಗಿದೆ.

ಸಂಜೆ 6.30 ಗಂಟೆಗೆ ಸುಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ನೇತೃತ್ವದಲ್ಲಿ ಹೆಸರಾಂತ ಗಾಯಕಿ ಶಮಿತಾ ಮಲ್ನಾಡ್ ತಂಡದವರು ರಾಷ್ಟ್ರ ನಮನ ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ, ಲೇಸರ್ ಷೋ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

 ಧ್ವಜ ಸ್ತಂಭದ ವೈಶಿಷ್ಠ್ಯಗಳು !

ಸ್ಥಳೀಯ ಶಾಸಕ ಎಂ.ಕೃಷ್ಣಪ್ಪ ಅವರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಒಂದು ಕೋಟಿ ರೂ ವೆಚ್ಚದಲ್ಲಿ ಗಣರಾಜ್ಯೋತ್ಸವ ಅಮೃತ ಮಹೋತ್ಸವದ ಸಂಸ್ಮರಣೆಯಲ್ಲಿ ನಿರ್ಮಿಸಿರುವ 215 ಅಡಿ ಎತ್ತರದ ಈ ರಾಷ್ಟ್ರಧ್ವಜಸ್ಥಂಭವು ಪ್ರಸ್ತುತ ರಾಜಭವನದ ಹಿಂಬದಿ ರಸ್ತೆಯ ರಾಷ್ಟ್ರೀಯ ಸೇನಾ ವಸ್ತು ಸಂಗ್ರಹಾಲಯ ಆವರಣದಲ್ಲಿರುವ 213 ಅಡಿ ಧ್ವಜಸ್ತಂಭಕ್ಕಿತಲೂ ಎರಡು ಅಡಿ ಹೆಚ್ಚು ಎತ್ತರದ್ದಾಗಿದೆ. ಹತ್ತೊಂಬತ್ತು ಟನ್ ತೂಕವಿರುವ ಕಂಬದ ಮೇಲ್ಭಾಗದಲ್ಲಿ ಐದು ಅಡಿಯ ಅಶೋಕ ಲಾಂಛನವಿದೆ. ಈ ಲಾಂಛನದಲ್ಲಿನ ನಾಲ್ಕು ಸಿಂಹಗಳು ಕೇವಲ ವಿಜಯನಗರ ವಿಧಾನಸಭಾ ಕ್ಷೇತ್ರದ ನಿವಾಸಿಗಳಿಗೆ ಮಾತ್ರವಲ್ಲ, ನೆರೆಯ ವಿಧಾನಸಭಾ ಕ್ಷೇತ್ರಗಳ ನಿವಾಸಿಗಳಿಗೂ ಕಾಣುವುದು ಈ ಧ್ವಜಸ್ತಂಭದ ಮತ್ತೊಂದು ವಿಶೇಷ ಆಕರ್ಷಣೆಯಾಗಿದೆ. ಈ ಧ್ವಜಸ್ತಭದಲ್ಲಿ ರಾಷ್ಟ್ರಧ್ವಜವನ್ನು ಕೈಯಿಂದಲೂ ಹಾಗೂ ಯಾಂತ್ರಿಕವಾಗಿಯೂ ಏರಿಸಲು ಹಾಗೂ ಇಳಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಧ್ವಜಸ್ತಂಭದ ಸುತ್ತ ನಿರ್ಮಿಸಿರುವ ಹುಲ್ಲು ಹಾಸು ಹಾಗೂ ವೈಭವೋಪೇತ ಕಲ್ಲು ಮೆಟ್ಟಿಲುಗಳು ಈ ಧ್ವಜಸ್ತಂಭಕ್ಕೆ ವಿಶಿಷ್ಠ ಮೆರುಗು ನೀಡಲಿದೆ ಎಂದು ವಿಜಯನಗರದ ಯುವ ಮುಖಂಡ ಪ್ರದೀಪ್ ಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: highest -national flag -pole –bangalore-Jan 26