ಬೆಂಗಳೂರು,ಏಪ್ರಿಲ್,29,2026 (www.justkannada.in): ಬಿಸಿಲಿನ ತಾಪದಿಂದ ಬಸವಳಿದಿದ್ದ ರಾಜ್ಯ ರಾಜಧಾನಿ ಬೆಂಗಳೂರಿನ ಜನತೆಗೆ ವರುಣ ತನ್ನ ಕೃಪೆ ತೋರಿದ್ದಾನೆ. ನಗರದಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಪ್ರಮುಖ ರಸ್ತೆಗಳು ನದಿಗಳಂತಾಗಿ ಮಾರ್ಪಟ್ಟಿವೆ. ನಗರದ ವಿಧಾನಸೌಧ, ಮೆಜೆಸ್ಟಿಕ್ ಶಾಂತಿನಗರ, ಕೋರಮಂಗಲ ರಾಜಾಜಿನಗರ, ಜೆಪಿ ನಗರ,ಮಲ್ಲೇಶ್ವರಂ, ಜಯನಗರ ಸೇರಿ ಹಲವು ಕಡೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ.
ಭಾರಿ ಮಳೆಯಿಂದಾಗಿ ಮರಬಿದ್ದು ಶೇಷಾದ್ರಿಪುರಂನ ನಾಗಪ್ಪ ರಸ್ತೆ ಬಂದ್ ಆಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಂದಾಗಿ ವಿಧಾನಸೌಧದ ಆವರಣಕ್ಕೂ ನೀರು ನುಗ್ಗಿದೆ. ಆಲಿಕಲ್ಲುಗಳು ಸಹ ವಿಧಾನಸೌಧದ ಗೋಡೆಗಳಿಗೆ ಅಪ್ಪಳಿಸಿದೆ. ಭದ್ರತಾ ಸಿಬ್ಬಂದಿ ಹಾಗೂ ಅಲ್ಲಿಗೆ ಆಗಮಿಸುವ ಜನಪ್ರತಿನಿಧಿಗಳು, ಅಧಿಕಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ವೈಟ್ ಫೀಲ್ಡ್, ಸಿಲ್ಕ್ ಬೋರ್ಡ್, ಟಿನ್ ಫ್ಯಾಕ್ಟರಿ, ಕೋರಮಂಗಲ, ಇಂದಿರಾನಗರ, ಮೆಜೆಸ್ಟಿಕ್, ಶಾಂತಿ ನಗರ ಮತ್ತು ಕೆ.ಆರ್. ವೃತ್ತದಂತಹ ಪ್ರದೇಶಗಳಲ್ಲಿ ಮಳೆ ನೀರು ರಸ್ತೆಯಲ್ಲೇ ನಿಂತು ವಾಹನ ಸವಾರರು ಪರದಾಡುವಂತಾಗಿದೆ.
Key words: Heavy rains, Bengaluru, traffic







