ಮೈಸೂರು.ಮೇ,2,2026 (www.justkannada.in): ಮದ್ಯ ತರಲು ಬಾರ್ ಗೆ ಹೋದ ವೇಳೆ ಮಫ್ತಿಯಲ್ಲಿದ್ದ ಮುಖ್ಯಪೇದೆ ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಕಣ್ಣಿನ ದೃಷ್ಠಿ ಕಳೆದುಕೊಂಡ ಘಟನೆ ಇತ್ತೀಚೆಗೆ ಮೈಸೂರು ಜಿಲ್ಲೆ ಕೆ.ಆರ್ ನಗರದಲ್ಲಿ ನಡೆದಿದ್ದು ಆದರೆ ಪೊಲೀಸರು ಪ್ರಕರಣ ದಾಖಲಿಸಲು ವಿಳಂಬ ಧೋರಣೆ ತಾಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮೈಸೂರು ತಾಲೂಕಿನ ಬೆಳವಾಡಿ ಸಮೀಪದ ಬಸವನಹಳ್ಳಿ ಗ್ರಾಮದ ಸ್ವಾಮಿ, ಆರ್. ಎಂಬವವರೇ ಕಣ್ಣಿನ ದೃಷ್ಠಿ ಕಳೆದುಕೊಂಡವರು. ಪರಶುರಾಮ್ ಎಂಬುವವರು ಹಲ್ಲೆ ನಡೆಸಿರುವ ಮುಖ್ಯಪೇದೆ.
ಸ್ವಾಮಿ ಪಟ್ಟಣದ ಮೈಸೂರು- ಹಾಸನ ರಸ್ತೆಯಲ್ಲಿರುವ ಹರ್ಷಬಾರ್ ನಲ್ಲಿ ಸ್ನೇಹಿತನ ಮನೆಯ ಹಬ್ಬಕ್ಕೆ ಡ್ರಿಂಕ್ಸ್ ಖರೀದಿಸುವ ವೇಳೆ ಮಾತಿನ ಚಕಮಕಿ ನಡೆದು ಸಣ್ಣಪುಟ್ಟ ಗಲಾಟೆಯಾಗಿತ್ತು. ಈ ವೇಳೆ ಹಲ್ಲೆಯಾಗಿದೆ ಎನ್ನಲಾಗಿದೆ.
ಬಾರ್ ನಿಂದ ಹೊರ ಬಂದ ವೇಳೆ ಬುಲೆಟ್ ಬೈಕ್ ನಲ್ಲಿ ಬಂದ ಪೊಲೀಸ್ ಮುಖ್ಯಪೇದೆ ಪರಶುರಾಮ್ ಗಲಾಟೆ ಬಗ್ಗೆ ತಿಳಿಯದೇ ಏಕಾಏಕಿ ನನಗೆ ಕಾಲಿನಿಂದ ಒದ್ದರು, ಕಣ್ಣಿನ ಚಿಕಿತ್ಸೆ ಆಗಿದ್ದರೂ ಹೊಡೆಯ ಬೇಡಿ ಎಂದು ಎಷ್ಟೇ ಬೇಡಿ ಕೊಂಡರೂ ಬಿಡದೇ ಬಲವಾಗಿ ಕಣ್ಣಿನ ಭಾಗಕ್ಕೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಬಿದ್ದೆ ಪ್ರಜ್ಞೆ ಬಂದಾಗ ಮೈಸೂರಿನ ಡಿ.ಆರ್.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದರು. ವೈದ್ಯರು ಚಿಕಿತ್ಸೆ ನೀಡಿ ನೇತ್ರಧಾಮ ಕಣ್ಣಿನ ಆಸ್ಪತ್ರೆಗೆ ಸೇರಿಸಲಾಯಿತು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಎಡ ಭಾಗದ ಕಣ್ಣು ಸಂಪೂರ್ಣವಾಗಿ ದೃಷ್ಟಿ ದೋಷವಾಗಿದೆ ಎಂದು ತಿಳಿಸಿದ ಕೂಡಲೇ ನನಗೆ ಸರ್ವಸ್ವವನ್ನೂ ಕಳೆದು ಕೊಂಡಂತೆ ಆಗಿದೆ. ನನಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಅವರ ಭವಿಷ್ಯ ರೂಪಿಸುವುದರೂ ಹೇಗೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅವಲತ್ತುಕೊಂಡು ನನಗೆ ನ್ಯಾಯ ದೊರಕಿಸಿ ಎಂದು ಸ್ವಾಮಿ ಮನವಿ ಮಾಡಿದ್ದಾರೆ.
ಘಟನೆ ನಡೆದು ವಾರ ಕಳೆದರೂ ಮುಖ್ಯಪೇದೆ ಪರಶುರಾಮ್ ವಿರುದ್ದ ದೂರು ದಾಖಲಿಸಿಲ್ಲ. ದೂರು ವಾಪಸ್ ಪಡೆಯುವಂತೆ ಮುಖ್ಯಪೇದೆ ನನಗೆ ಧಮ್ಕಿ ಹಾಕುಸುತ್ತಿದ್ದಾರೆ ಎಂದು ಸ್ವಾಮಿ.ಆರ್. ತಮ್ಮ ಆಳಲನ್ನು ತಿಳಿಸಿದರು.
ಈ ಕುರಿತು ಸ್ಪಷ್ಟನೆ ನೀಡಿರುವ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಮುಖ್ಯಪೇದೆ ಪರಶುರಾಮ್ ಅವರ ಮೇಲೆ ಎಫ್.ಐ.ಆರ್ ದಾಖಲಿಸಲು ನ್ಯಾಯಾಲದ ಅನುಮತಿ ಪಡೆಯಬೇಕಾಗಿದೆ. ಹಾಗಾಗಿ ವಿಳಂಬವಾಗಿದೆ. ತಕ್ಷಣವೇ ಎಫ್.ಐಆರ್ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಸ್ವಾಮಿ ಮನೆಗಳಿಗೆ ಟೈಲ್ಸ್ ಹಾಕುವ ಮೇಸ್ತ್ರಿ ಕಾರ್ಮಿಕನಾಗಿದ್ದು ಕೆ.ಆರ್.ನಗರ ಪಟ್ಟಣ ಸೇರಿದಂತೆ ಅಕ್ಕಪಕ್ಕದ ಗ್ರಾಮದ ಮನೆಗಳಿಗೆ ಟೈಲ್ಸ್ ಹಾಕುವ ಗುತ್ತಿಗೆ ಪಡೆದಿದ್ದರು ಎನ್ನಲಾಗಿದೆ.
Key words: Head constable, assaulted, man, loses , eye







