ನವದೆಹಲಿ,ಜೂನ್,5,2025 (www.justkannada.in): ಡಿಕೆ ಶಿವಕುಮಾರ್ ವರ್ಚಸ್ಸು ವೃದ್ಧಿಸಿಕೊಳ್ಳಲು ಕ್ರಿಕೆಟ್ ಪ್ರೇಮಿಗಳನ್ನು ಬಲಿ ಕೊಟ್ಟಿದ್ದಾರೆ. ತಕ್ಷಣವೇ ಅವರನ್ನ ಸಚಿವ ಸಂಪುಟದಿಂದ ಹೊರಹಾಕಬೇಕು ಎಂದು ಕೇಂದ್ರ ಸಚಿವ ಹೆಚ್ .ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಕಾಲ್ತುಳಿತ ದುರಂತದ ಬಗ್ಗೆ ನವದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿಕೆ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಹನ್ನೊಂದು ಮಂದಿ ಕ್ರಿಕೆಟ್ ಪ್ರೇಮಿಗಳ ಸಾವಿಗೆ ಕಾರಣವಾದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ತಕ್ಷಣವೇ ಸಂಪುಟದಿಂದ ಹೊರ ಹಾಕಬೇಕು. ಡಿಸಿಎಂ ಮನುಷ್ಯತ್ವ ಇಲ್ಲದ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ. ಮುಖ್ಯಮಂತ್ರಿಗೆ ಧೈರ್ಯ ಎನ್ನುವುದು ಇದ್ದರೆ ತಕ್ಷಣವೇ ಅವರನ್ನು ಸಂಪುಟದಿಂದ ಆಚೆ ಹಾಕಬೇಕು ಎಂದು ಒತ್ತಾಯಿಸಿದರು.
ತನಗೆ ಪಿಆರ್ ಮಾಡುತ್ತಿರುವ ಕಂಪನಿಯೊಂದು ಬರೆದುಕೊಟ್ಟ ಸ್ಕ್ರಿಪ್ಟ್ ನಂತೆ ಅವರು ಬುಧವಾರ ಇಡೀ ದಿನದ ಡ್ರಾಮಾ ನಡೆಸಿದರು. ಇದು ಅಸೂಕ್ಷ್ಮತೆಯ ಪರಮಾವಧಿ. ವಿಮಾನ ನಿಲ್ದಾಣದಲ್ಲಿ, ವಿಧಾನಸೌಧದ ಮುಂದೆ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆ ವ್ಯಕ್ತಿ ವರ್ತಿಸಿದ ರೀತಿ ನೋಡಿದರೆ ಅವರಿಗೆ ಯಾವುದೇ ರೀತಿಯ ಮಾನವೀಯತೆಯ ಗುಣಗಳು ಇಲ್ಲ. ಸಾವಿನಲ್ಲಿಯೂ ಪ್ರಚಾರಕ್ಕೆ ಹಪಾಹಪಿಸಿದ ವ್ಯಕ್ತಿ ಎಂದು ಹೆಚ್ ಡಿಕೆ ಆರೋಪಿಸಿದರು.
ವಿಧಾನನೌಧ ಮೆಟ್ಟಿಲು ಮೇಲೆ ಇವರು ಕಾರ್ಯಕ್ರಮ ಮಾಡಿದ ಉದ್ದೇಶ ಏನು? ಇಡೀ ಸರ್ಕಾರ ಅದನ್ನು ಕುಟುಂಬ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿತ್ತು. ಅದು ಕೇವಲ ಡಿಸಿಎಂ ದಾದಾಗಿರಿಯ ಶೋ ಆಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಹಲವರ ಜೀವ ಹೋಗಿದೆ ಎಂಬ ವಿಷಯ ಗೊತ್ತಾದ ಮೇಲೆಯೂ ಇವರು ಅಲ್ಲಿ ಕಾರ್ಯಕ್ರಮ ನಡೆಸಿದರು ಎಂದು ಕೇಂದ್ರ ಸಚಿವ ಹೆಚ್ ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ಈ ವ್ಯಕ್ತಿ ತೆವಲಿಗೆ ಅನೇಕ ಅಮಾಯಕರ ಪ್ರಾಣಗಳು ಹೋದವು. ಈತ ಒಬ್ಬ ರೌಡಿಯಂತೆ ವರ್ತಿಸಿದ್ದಾರೆ. ತನ್ನ ಶೋಕಿಗೆ ಇಷ್ಟು ಜನರನ್ನು ಬಲಿ ಕೊಟ್ಟಿದ್ದಾರೆ. ಸರ್ಕಾರದ ಹೊಣೆಗೇಡಿತನ ಹಾಗೂ ಡಿಸಿಎಂ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಇಷ್ಟು ಜೀವಗಳನ್ನು ಬಲಿ ಕೊಟ್ಟರು. ಇದಕ್ಕೆ ಸರ್ಕಾರವೇ ಹೊಣೆ. ವಿಧಾನಸೌಧದ ಕಾರ್ಯಕ್ರಮವನ್ನು ಖಾಸಗಿ ಕಾರ್ಯಕ್ರಮದಂತೆ ಮಾಡಿಕೊಂಡಿದ್ದರು. ಈಗ ಕೇವಲ ತನಿಖೆಗೆ ಆದೇಶ ಕೊಟ್ಟು, ಮೃತರಿಗೆ ಪರಿಹಾರ ನೀಡಿ ತಪ್ಪಿಸಿಕೊಳ್ಳುವಂತಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಡಿಸಿಎಂ ಕರ್ನಾಟಕದ ಸೂಪರ್ ಚೀಫ್ ಮಿನಿಸ್ಟರ್ ರೀತಿ ವರ್ತಿಸಿದ್ದಾರೆ. ಅವರೇ ದುರಂತಕ್ಕೆ ನೇರ ಹೊಣೆ. ಆರ್ ಸಿಬಿ ಗೆಲುವಿನ ಕ್ರೆಡಿಟ್ ಪಡೆದುಕೊಳ್ಳಲು ಇಷ್ಟು ಮಾಡಿದ ಡಿಸಿಎಂ ಆಗಿರುವ ದುರಂತದ ಹೊಣೆಯನ್ನು ಹೊರಲೇಬೇಕು. ಅವರು ಇಡೀ ತಂಡವನ್ನೇ ಹೈಜಾಕ್ ಮಾಡಿದರು. ಪೊಲೀಸರನ್ನು ಹತ್ತಿರಕ್ಕೆ ಬರದಂತೆ ತಡೆದರು ಎಂದು ಸಚಿವರು ಆರೋಪಿಸಿದರು.
ವಿಧಾನಸೌಧದ ಮೆಟ್ಟಿಲು ಮೇಲೆ ನಡೆದ ಕಾರ್ಯಕ್ರಮದ ಮೇಲೆ ಬಂದಿದ್ದ ಜನರನ್ನು ವೇದಿಕೆಯ ಮೇಲೆ ಕತ್ತು ಹಿಡಿದು ತಳ್ಳುತ್ತಾರೆ. ಇಂಥ ವ್ಯಕ್ತಿಯನ್ನು ನಾವು ಮನುಷ್ಯ ಎಂದೂ ಕರೆಯಲು ಆಗುತ್ತದೆಯೇ? ಎಂದರು.
ಇವರೇ ಜನರಿಗೆ ಹೇಳಿಕೊಂಡು, ಇವರೆ ಜನರನ್ನು ಸೇರಿಸಿ, ಪೊಲೀಸರು ಎರಡು ಕಡೆ ಕಾರ್ಯಕ್ರಮ ಬೇಡ ಎಂದರೂ ಕೇಳದೆ ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ವಿಧಾನಸೌಧ ಮುಂದೆ ಇವರ ಮಕ್ಕಳು, ಮೊಮ್ಮಕ್ಕಳು, ಅಧಿಕಾರಿಗಳು, ಅವರ ಮಂದಿ ಮಾಗದರೂ ಸೇರಿದ್ದರು. ಇವರು ಶೋ ಮಾಡಲಿಕ್ಕೆ ಇವರು ಇಡೀ ಆರ್ ಸಿಬಿ ಗೆಲುವನ್ನು ಬಳಕೆ ಮಾಡಿಕೊಂಡರು. ಆಟಗಾರರನ್ನು ಪಕ್ಕಕ್ಕೆ ತಳ್ಳಿ ಇವರೇ ಮಿಂಚಿದ್ದಾರೆ ಎಂದು ಹೆಚ್ ಡಿಕೆ ದೂರಿದರು.
ಚಿನ್ನಸ್ವಾಮಿ ಕ್ರೀಡಾಂಗಣದ ಬಾಗಿಲು ಮುಚ್ಚಿಸಿದ್ದರು. ಮೊದಲೇ ಅಭಿಮಾನಿಗಳನ್ನು ಮೈದಾನದೊಳಕ್ಕೆ ಬಿಟ್ಟಿದ್ದರೆ ಈ ಸಮಸ್ಯೆ ಸೃಷ್ಟಿ ಆಗುತ್ತಿರಲಿಲ್ಲ. ಅವರೇ ಮೈದಾನದ ಬಾಗಿಲು ಬಂದ್ ಮಾಡಲು ಹೇಳಿದ್ದರು. ಡಿಸಿಎಂ ತಮ್ಮ ವರ್ಚಸ್ಸು ವೃದ್ದಿ ಮಾಡಿಕೊಳ್ಳಲು ಇವರು ಇಷ್ಟೆಲ್ಲಾ ಮಾಡಿದ್ದಾರೆ. ಬೇರೆ ಮಂತ್ರಿಗಳು ಇರಲಿಲ್ಲವೇ? ಕ್ರೀಡಾಮಂತ್ರಿ ಎಲ್ಲಿ ಹೋದರು? ಅವರಿಗೆ ಜವಾಬ್ದಾರಿ ಇರಲಿಲ್ಲವೇ? ಎಂದು ಹೆಚ್ ಡಿಕೆ ಪ್ರಶ್ನಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಿರುವ ಲೋಪಗಳ ಬಗ್ಗೆ ಸಂಪೂರ್ಣವಾಗಿ ತನಿಖೆ ಆಗಿದೆ. ಅತ್ಯಂತ ಧಾರುಣವಾದ ಸಂಗತಿ ಎಂದರೆ, ಕ್ರೀಡಾಂಗಣದ ಹೊರಗೆ ಮೃತದೇಹಗಳು ಬಿದ್ದಿದ್ದರೂ ಇವರು ಮೆರವಣಿಗೆಯಲ್ಲಿ ಮೈದಾನಕ್ಕೆ ತೆರಳಿ ಇವರೇ ಕಪ್ ಗೆದ್ದಂತೆ, ಇವರೇ ಆರ್ ಸಿಬಿ ಕ್ಯಾಪ್ಟನ್ ಎನ್ನುವಂತೆ ಆಟಗಾರರ ಮುಂದೆ ಕಪ್ ಗೆ ಮುತ್ತಿಡುತ್ತಾರೆ ಎಂದು ಕೇಂದ್ರ ಸಚಿವ ಹೆಚ್ ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ಇವತ್ತು ಇವರಿಗೆ ಕಣ್ಣಲ್ಲಿ ನೀರು ಬಂದಿದೆ. ಘಟನೆ ನಡೆದ ಹದಿನಾರು ಗಂಟೆಗಳ ನಂತರ ಇವರಿಗೆ ಕಣ್ಣೀರು ಬಂದಿದೆ. ಇವರು ಎಂತಹ ಕಟುಕರು ಎನ್ನುವುದು ಇದರಿಂದ ಅರ್ಥವಾಗುತ್ತದೆ. ತನಿಖೆ ಎನ್ನುವುದು ಕೇವಲ ಜನರ ಕಣ್ಣೊರೆಸುವ ತಂತ್ರ ಅಷ್ಟೇ. ರಾಜಕೀಯದ ಪ್ರಶ್ನೆ ಇಲ್ಲ. ಈ ಮುಖ್ಯಮಂತ್ರಿಗೆ ನಾಡಿನ ಜನರ ಬಗ್ಗೆ ಗೌರವ ಇದ್ದರೆ, ಮೊದಲು ಈ ವ್ಯಕ್ತಿಯನ್ನು ಮಂತ್ರಿ ಮಂಡಲದಿಂದ ಹೊರಕ್ಕೆ ಹಾಕಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ಡ್ರಿಲ್ ಮಾಡುವ ಹೊಮ್ ಮಿನಿಸ್ಟರ್ ರಾಜ್ಯದಲ್ಲಿ ಇದ್ದಾರೆ
ಗೃಹ ಸಚಿವರು ಎನ್ನುವವರು ರಾಜ್ಯದಲ್ಲಿ ಇಲ್ಲವೇ ಇಲ್ಲ. ಕೂರು ಎಂದರೆ ಕೂರು, ಏಳು ಎಂದರೆ ಏಳುತ್ತಾರೆ. ಕೇವಲ ಡ್ರಿಲ್ ಮಾಡುವ ಹೊಮ್ ಮಿನಿಸ್ಟರ್ ರಾಜ್ಯದಲ್ಲಿ ಇದ್ದಾರೆ. ಅವರಿಗೆ ಧೈರ್ಯ ಇಲ್ಲ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅಧಿಕಾರಿಗಳು, ಪೊಲೀಸ್ ಇಲಾಖೆಯ ಸಲಹೆ ಧಿಕ್ಕರಿಸಿ ಸರ್ಕಾರ ನಡೆದುಕೊಂಡಿದೆ ಎಂದು ಹೆಚ್ ಡಿಕೆ ಕಿಡಿಕಾರಿದರು.
ಒಬ್ಬ ಜಿಲ್ಲಾಧಿಕಾರಿ ಏನು ತನಿಖೆ ಮಾಡಲು ಸಾಧ್ಯ? ಅದರಿಂದ ಏನು ಉಪಯೋಗ? ಸರ್ಕಾರ ಹೇಳಿದಂತೆ ಅವರು ಬರೆದುಕೊಡುತ್ತಾರೆ. ಇವರಿಗೆ ಪರ್ಮನೆಂಟ್ ಆಗಿ ಒಬ್ಬರು ಇದ್ದಾರಲ್ಲ, ಅವರ ನೇತೃತ್ವದಲ್ಲಿಯೇ ಒಂದು ಆಯೋಗ ಮಾಡಬೇಕಿತ್ತು. ಏಕೆ ಮಾಡಲಿಲ್ಲವೋ ಗೊತ್ತಿಲ್ಲ ಎಂದ ಹೆಚ್ ಡಿಕೆ, ವಿಧಾನಸೌಧ ಬಳಿಯೇ ಇವರ ಬಂಧು ಬಳಗ ಹಾವಳಿ ಹೆಚ್ಚಾದಾಗ ಕ್ರಿಕೆಟ್ ಪ್ರೇಮಿಗಳ ಸಹನೆ ಕಟ್ಟೆಯೊಡೆದಿದೆ. ಅಲ್ಲಿಯೇ ಜನ ಕಲ್ಲು ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ನಾಲ್ಕು ಜನ ಸತ್ತ ಮೇಲೆಯೂ ಡಿಸಿಎಂ ಎನ್ನುವ ಈ ವ್ಯಕ್ತಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ಕಪ್ ಗೆ ಮುತ್ತಿಟ್ಟರು. ಅದು ಈ ವ್ಯಕ್ತಿಯ ನಡವಳಿಕೆ ತೋರಿಸುತ್ತದೆ ಎಂದು ಹೆಚ್ ಡಿಕೆ ಬೇಸರ ವ್ಯಕ್ತಪಡಿಸಿದರು.
Key words: RCB, Fan, DCM, DK shivakumar, Central Minister, H.D Kumaraswamy