ಹೆಚ್.ಡಿ.ಕೋಟೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಪ.ಪಂಗಡ ರಾಷ್ಟೀಯ ಆಯೋಗದ ಸದಸ್ಯರು

ಮೈಸೂರು, ಮಾರ್ಚ್,24,2026 (www.justkannada.in):ಪರಿಶಿಷ್ಟ ಪಂಗಡದ ರಾಷ್ಟೀಯ ಆಯೋಗದ ಸದಸ್ಯೆ ಡಾ. ಆಶಾ ಲಕ್ರಾ ಅವರು ಇಂದು ಹೆಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್ ಬಳಿ ಜೇನು ಕುರುಬ ಮಹಿಳೆಯರು ನಡೆಸುತ್ತಿರುವ ಸಿರಿಧಾನ್ಯ ಸ್ಟೋರ್ ಗೆ ಭೇಟಿ ನೀಡಿ ಮಹಿಳೆಯರೊಂದಿಗೆ ಸಂವಾದ ನಡೆಸಿದರು.

ಸಿರಿಧಾನ್ಯ ಸ್ಟೋರ್ ಅನ್ನು 11 ಮಹಿಳೆಯರು ನಡೆಸುತ್ತಿದ್ದು, ರತ್ನಮ್ಮ ಎಂಬುವರು ಈ ಹಿಂದೆ ಜೀವನ ಕಷ್ಟಕರವಾಗಿತ್ತು‌ ಕೆಲಸಕ್ಕಾಗಿ ಕೊಡಗು ಕೇರಳಕ್ಕೆ ವಲಸೆ ಹೋಗುತ್ತಿದ್ದೆ, ಪ್ರತಿ ದಿನ ಬೆಳಗಿನಿಂದ ರಾತ್ರಿಯವರೆಗೆ ಕೂಲಿ ಕೆಲಸ ಮಾಡಬೇಕಿತ್ತು. ಈಗ ಆರ್ಥಿಕವಾಗಿ ಸದೃಢ ಜೀವನ ನಡೆಸುತ್ತಿರುವುದಾಗಿ ತಿಳಿಸಿದರು.

ವಿವಿಧ ಹಾಡಿಗಳಲ್ಲಿ ವಾಸಿಸುವ ಪರಿಶಿಷ್ಟ ಪಂಗಡದ ಜನರಿಗೆ ರಕ್ಷಣೆ ನೀಡಿ ಗೌರವಯುತ ಜೀವನ ನಡೆಸಲು ಸಹಕಾರ ನೀಡುವುದು ಆಯೋಗದ ಉದ್ದೇಶವಾಗಿದೆ. ಯಾವುದೇ ರೀತಿಯ ದೌರ್ಜನ್ಯ ಉಂಟಾದಲ್ಲಿ ಆಯೋಗಕ್ಕೆ ದೂರು ಸಲ್ಲಿಸಿ ಎಂದು ಸದಸ್ಯೆ ಆಶಾ ಲಕ್ರಾ ಅವರು ತಿಳಿಸಿದರು.

ಇವರು ಬೆಳೆಯುವ ಆಹಾರ ಪದಾರ್ಥಗಳನ್ನು ಸಂಸ್ಕರಿಸಿ ಮಾರಾಟ ಮಾಡಲು ಹೊಸ ಹೊಸ ತರಬೇತಿಗಳನ್ನು ನೀಡಿ. ಎಲ್ಲಾ ಉತ್ಪನ್ನಗಳನ್ನು ಜಿಯೋ ಟ್ಯಾಗಿಂಗ್ ಮಾಡಿ. ಸಹಕಾರ ಭಾರತಿ ಸಹಕಾರ ಸಂಸ್ಥೆಯೊಂದಿಗೆ ಮಾರಾಟಕ್ಕೆ ಆನ್ ಲೈನ್ ವೇದಿಕೆ ಮಾಡಿಕೊಡುವಂತೆ ತಿಳಿಸಿದರು.

ಜಾಗನಕೋಟೆ ಹಾಡಿಯಲ್ಲಿ  ಪ್ರಕೃತಿ ಫುಡ್ ಪ್ರಾಡೆಕ್ಟ್ ರಾಗಿಯಿಂದ ವಿವಿಧ ಬಗೆ ಆಹಾರ ತಯಾರಿಸುವ ಕೇಂದ್ರಕ್ಕೆ ಭೇಟಿ ನೀಡಿ ಮಹಿಳೆಯರೊಂದಿಗೆ ಚರ್ಚೆ ನಡೆಸಿದರು. ಮಹಿಳೆಯರು ಸದಸ್ಯರೊಂದಿಗೆ ಮಾತನಾಡಿ, ರಾಗಿಯಿಂದ ಸುಮಾರು 11 ವಿಧದ ಆಹಾರ ಪದಾರ್ಥ ತಯಾರಿಸಿ ಸುಮಾರು 1.50 ಲಕ್ಷ ರೂ ಗಳ ಆಹಾರ ಪದಾರ್ಥ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.

ತಮ್ಮ ಹಳ್ಳಿಯ ಸುತ್ತಮುತ್ತಲು ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಮನೆಯಲ್ಲಿ ಗಂಡಸರು ಹಾಗೂ ಕಾಲೇಜು ವಿದ್ಯಾರ್ಥಿಗಳು ಕುಡಿತಕ್ಕೆ ಬಲಿಯಾಗುತ್ತಿದ್ದಾರೆ ಎಂದು ಮಹಿಳೆಯರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಸದಸ್ಯೆ ಡಾ. ಆಶಾ ಲಕ್ರಾ,  ತಕ್ಷಣ ಅಬಕಾರಿ ಅಧಿಕಾರಿಗಳೊಂದಿಗೆ ಮಾತನಾಡಿ ಅನಿರೀಕ್ಷಿತ ದಾಳಿಗಳನ್ನು ನಡೆಸಿ ಅಕ್ರಮ ಮದ್ಯ ಮಾರಾಟ ತಡೆಯುವಂತೆ ನಿರ್ದೇಶನ ನೀಡಿದರು.

ಹೊಸಹಳ್ಳಿ ವಿವೇಕ ಸ್ಕೂಲ್ ಆಫ್ ಲರ್ನಿಂಗ್ ಸಂಸ್ಥೆ ಗೆ ಭೇಟಿ ನೀಡಿ ಶಾಲೆಯ ವಾತಾವರಣ ಸೇರಿದಂತೆ ಸೌಲಭ್ಯಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿದರು. ಹೆಣ್ಣು ಮಕ್ಕಳಿಗೂ ಮ್ಯಾಕನಿಕಲ್ ಟೂಲ್ ತರಬೇತಿ ನೀಡುವಂತೆ ತಿಳಿಸಿದರು. ಟಿ.ಎಸ್.ಪಿ ಅನುದಾನದಲ್ಲಿ ಟೈಲರಿಂಗ್ ವೃತ್ತಿಯಲ್ಲಿ ವಿಶೇಷ ಕೌಶಲ್ಯ ತರಬೇತಿ ನೀಡುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಆಯೋಗದ ಸದಸ್ಯರ ಆಪ್ತ ಕಾರ್ಯದರ್ಶಿ  ಕುಶೇಸ್ವರ್, ಕಾನೂನು ಸಲಹೆಗಾರ ರಾಹುಲ್ ಯಾದವ್, ತನಿಖಾಧಿಕಾರಿ ರಿಯಾ, ರಹುಲ್ , ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಯೋಜನಾ ಸಮನ್ವಯಾಧಿಕಾರಿ ಮಲ್ಲೇಶ್, ಹೆಚ್.ಡಿ.ಕೋಟೆ ನೋಡಲ್ ಅಧಿಕಾರಿ ಮಹೇಶ್, ಹುಣಸೂರು ನೋಡಲ್ ಅಧಿಕಾರಿ ಗಂಗಾಧರ್, ಸ್ವಾಮಿ ವಿವೇಕನಂದ ಯುಥ್ ಮುವಮೆಂಟ್ ನ ನಿರ್ದೇಶಕ ಡಾ: ಚೌಹಣ್, ಸಿ.ಇ.ಒ ಸವಿತಾ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Key words: National Commission for Tribal Affairs, Members, visited, H.D. Kote