ಸಿಎಂ, ಡಿಸಿಎಂ ವಿರುದ್ದ ಸ್ವಾಮೀಜಿಗಳಿಂದ ದೂರು: ಇದು ಸಲ್ಲದ ಬೆಳವಣಿಗೆ- ಹೆಚ್.ಎ ವೆಂಕಟೇಶ್

ಮೈಸೂರು,ಜೂನ್,9,2025 (www.justkannada.in):  ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಕೆಲ ಸ್ವಾಮೀಜಿಗಳು ಸಿಎಂ,  ಡಿಸಿಎಂ ಹಾಗೂ ಗೃಹ ಸಚಿವರ ವಿರುದ್ಧ ಪೊಲೀಸ್ ದೂರು ನೀಡಿರುವುದು ಸಲ್ಲದ ಬೆಳವಣಿಗೆಯಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಸ್ವಾಮೀಜಿಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಎಚ್.ಎ ವೆಂಕಟೇಶ್, ಸಮಾಜದ ನೈತಿಕ ಮತ್ತು ಧಾರ್ಮಿಕ ಉನ್ನತಿಗೆ ಶ್ರಮಿಸಬೇಕಾದ ಸ್ವಾಮೀಜಿಗಳು, ಕ್ಷುಲ್ಲಕ ರಾಜಕೀಯದ ದಾಳವಾಗುವ ಅಗತ್ಯವಿರಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿರ್ಲಕ್ಷ ಹಿನ್ನೆಲೆಯಲ್ಲಿ ಅಮಾನತ್ತಾಗಿದ್ದಾರೆ, ನ್ಯಾಯಾಂಗ ತನಿಖೆ, ಸಿಐಡಿ ತನಿಖೆ ಜಾರಿಯಲ್ಲಿದೆ. ಮೃತರ ಕುಟುಂಬಗಳಿಗೆ  ಪರಿಹಾರ ನೀಡಲಾಗುತ್ತಿದೆ, ಒಟ್ಟು ಘಟನೆಯಲ್ಲಿ ತನ್ನಿಂದಾಗಬೇಕಾದ ಕ್ರಮಗಳನ್ನೆಲ್ಲಾ ಸರ್ಕಾರ ತ್ವರಿತವಾಗಿ ತೆಗೆದುಕೊಂಡಿದೆ, ಇಷ್ಟಿದ್ದರೂ ಕೆಲ ಸ್ವಾಮೀಜಿಗಳು ಸರ್ಕಾರದ ವಿರುದ್ಧ ಏಕೆ ಮುಗಿಬಿದ್ದಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ ಸಮಯ ಕಾಲ್ತುಳಿತದಿಂದ ಬಹುದೊಡ್ಡ ದುರಂತ ಸಂಭವಿಸಿತ್ತು. ಹಲವು ತಿಂಗಳು ಕಳೆದರೂ ಈ ದುರಂತದಲ್ಲಿ  ಮೃತಪಟ್ಟವರ ಅಧಿಕೃತ ಅಂಕಿ ಅಂಶಗಳನ್ನು ಒಬ್ಬ ಸ್ವಾಮೀಜಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಅಲ್ಲಿನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿಲ್ಲ. ಕಾಲ್ತುಳಿತ ಘಟನೆಗೆ ಒಬ್ಬ ಅಧಿಕಾರಿಯನ್ನೂ ಸಹ ಹೊಣೆಯಾಗಿಸಿ ಅಮಾನತು ಮಾಡಿಲ್ಲ.  ಆದರೆ ಕರ್ನಾಟಕ ಸರ್ಕಾರ ಎಡಿಜಿಪಿ ಮಟ್ಟದ ಅಧಿಕಾರಿಯನ್ನೇ ಅಮಾನತು ಮಾಡಿದೆ. ಈಗ ಸಿಎಂ ಡಿಸಿಎಂ, ಗೃಹ ಸಚಿವರ ವಿರುದ್ಧ ದೂರು ನೀಡಿರುವ ನಮ್ಮ ರಾಜ್ಯದ ಈ ಸ್ವಾಮೀಜಿಗಳು ಪ್ರಯಾಗ್ ರಾಜ್ ಭಕ್ತರ ಸಾವಿಗೆ ಮಿಡಿದು, ಬಿಜೆಪಿಯ ಯೋಗಿ ಆದಿತ್ಯನಾಥ್ ವಿರುದ್ಧ ಆಗ ಏಕೆ ದೂರು ನೀಡಲಿಲ್ಲ ಎನ್ನುವ ಪ್ರಶ್ನೆಯೂ ಇಲ್ಲಿ ಮೂಡುತ್ತದೆ.

ಆಧ್ಯಾತ್ಮಿಕತೆಯ ಮೂಲಕ ನೈತಿಕ ಮತ್ತು ಸಾಮಾಜಿಕ ಜಾಗೃತಿ ಮೂಡಿಸಬೇಕಾದವರು ರಾಜಕೀಯದ ರಾಡಿಯಲ್ಲಿ ಬಿದ್ದು ಮನಸ್ಸು ಮತ್ತು ಮೈಯನ್ನು ಕೊಳಕು ಮಾಡಿಕೊಳ್ಳುವುದು ಹಾಗೂ ಕಾವಿಯ ಪ್ರಖರತೆಗೆ ಧಕ್ಕೆ ತಂದುಕೊಳ್ಳುವುದು ಸರಿಯಲ್ಲ ಎಂದು ಹೆಚ್ ಎ ವೆಂಕಟೇಶ್ ಕಿಡಿಕಾರಿದ್ದಾರೆ.

ದೂರು ನೀಡಿರುವ  ಸ್ವಾಮೀಜಿಗಳಲ್ಲಿ ಒಬ್ಬರು, ಈ ಹಿಂದೆ ಕೋಮು ಸೌಹಾರ್ದ ಹದಗೆಡಿಸುವ ಹೇಳಿಕೆಗಳಿಗೆ ಹೆಸರಾಗಿದ್ದರು. ಹೀಗಾಗಿ ಈ ಸ್ವಾಮೀಜಿಗಳ ತಂಡದ ಹಿಂದೆ ಯಾರ ಕುಮ್ಮಕ್ಕಿದೆ ಎನ್ನುವುದನ್ನು ಸಮಾಜ ಬಹಳ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಎಲ್ಲವನ್ನೂ  ತ್ಯಜಿಸಿದ ಸನ್ಯಾಸಿಗಳು ಎಲ್ಲರೊಳಿತಿಗಾಗಿ ನಡೆಯಬೇಕು ಮತ್ತು ದುಡಿಯಬೇಕು. ಅದು ಬಿಟ್ಟು ಸಮಾಜಘಾತಕರ ವಿಭಜನಕಾರಿ ಹುನ್ನಾರಕ್ಕೆ ಆಯುಧದಂತೆ ವರ್ತಿಸುವುದು ಸರಿಯಲ್ಲ ಎಂದು ಎಚ್.ಎ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.vtu

Key words: Complaints, Swamiji, CM, DCM, H.A. Venkatesh