ಸರ್ಕಾರದ ಸಾಧನೆ ಬಿಚ್ಚಿಟ್ಟ ರಾಜ್ಯಪಾಲರು; ಜನಪರ ಸರ್ಕಾರ ಎಂಬುದು ಸಾಬೀತು-ಎಂಎಲ್ ಸಿ ದಿನೇಶ್‌ ಗೂಳಿಗೌಡ.

ಬೆಂಗಳೂರು,ಫೆಬ್ರವರಿ,12,2024(www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಸರ್ಕಾರ ಎಂಬುದನ್ನು ರಾಜ್ಯದ  ಸಂವಿಧಾನಿಕ  ಮುಖ್ಯಸ್ಥರಾದ ರಾಜ್ಯಪಾಲರು ತಮ್ಮ ಭಾಷಣದ ಮೂಲಕ ಪ್ರತಿಪಾದಿಸಿದ್ದಾರೆ. ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಯಿಂದ ಯಾವೆಲ್ಲ ಅನುಕೂಲವಾಗಿದೆ ಎಂಬ ಸತ್ಯ ಸಂಗತಿಯನ್ನು ಜನತೆ ಎದುರು ರಾಜ್ಯಪಾಲರು ತೆರೆದಿಟ್ಟಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದರು.

ಈ ಕುರಿತು ಮಾತನಾಡಿದ ದಿನೇಶ್ ಗೂಳಿಗೌಡ, ಕರ್ನಾಟಕ ರಾಜ್ಯದಲ್ಲಿ ಸುಮಾರು 7  ಕೋಟಿ ಜನಸಂಖ್ಯೆ ಇದೆ. ನಮ್ಮ ಗ್ಯಾರಂಟಿ ಯೋಜನೆಗಳಿಂದಾಗಿ 1.27 ಕೋಟಿ ಕುಟುಂಬದವರು ಬಡತನ ರೇಖೆಯಿಂದ ಹೊರಗೆ ಬಂದಿವೆ. ಸರಿಸುಮಾರು 5 ಕೋಟಿಗೂ ಹೆಚ್ಚು ಮಂದಿ ಮಧ್ಯಮ ವರ್ಗದ ಜೀವನ ಮಟ್ಟದ ಜೀವನ ಮಟ್ಟವನ್ನು ನಿರ್ವಹಣೆ ಮಾಡಲು ಸಹಾಯಕವಾಗಿದೆ. ಹೀಗಾಗಿ ನಮ್ಮ ಸರ್ಕಾರದ ಯೋಜನೆಗಳು ರಾಜ್ಯದ ಜನರಿಗೆ ಅನುಕೂಲಕರವಾಗಿದೆ ಎಂದರು.

ಮಹಿಳೆಯರಿಗೆ “ಶಕ್ತಿ”  ತುಂಬುವ ಉಚಿತ ಪ್ರಯಾಣ ಯೋಜನೆ, “ಭಾಗ್ಯ ಲಕ್ಷ್ಮಿ”,   ಬಡವರಿಗೆ “ಅನ್ನಭಾಗ್ಯ” , “ಯುವನಿಧಿ” ,ಎಲ್ಲರಿಗೂ ಪ್ರಕಾಶಮಾನವಾಗಿ ಬೆಳಕು ನೀಡುವ “ಗೃಹಜ್ಯೋತಿ” ಹೀಗೆ ಜನರ ಆರ್ಥಿಕ ಶಕ್ತಿ ತುಂಬುವ ಮಹತ್ವದ ಯೋಜನೆ ಜಾರಿಗೊಳಿಸಿದ ರಾಜ್ಯ ಸರ್ಕಾರ ತನ್ನ  ಜನಪರ ನಿಲುವಿನಿಂದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂಬುದನ್ನು ರಾಜ್ಯಪಾಲರು ಇಂದು ಜಂಟಿ ಸದನವನ್ನು ಉದ್ದೇಶಿಸಿ ಹೇಳಿದ್ದಾರೆ.

ಅಲ್ಲದೆ, 8.50  ಲಕ್ಷ ಹಾಲು ಉತ್ಪಾದಕರಿಗೆ 757 ಕೋಟಿ ರೂಪಾಯಿಗಳ ಪ್ರೋತ್ಸಾಹಧನವನ್ನು ನೀಡಲಾಗಿದೆ. ಕಳೆದ ಎಂಟು ತಿಂಗಳಿಂದ ಕರ್ನಾಟಕ ರಾಜ್ಯಕ್ಕೆ 77 ಸಾವಿರ ಕೋಟಿ ರೂಪಾಯಿ ಬಂಡವಾಳ ಹರಿದುಬಂದಿದೆ. ಇದರಿಂದ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಲಿದೆ. ಒಟ್ಟಾರೆಯಾಗಿ ರೈತರ ಬದುಕನ್ನು ಹಸನ ಮಾಡಲು ನಮ್ಮ ಸರ್ಕಾರ ಶ್ರಮಿಸುತ್ತಿದ್ದು, ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ 32.50ಲಕ್ಷ ರೈತರಿಗೆ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ರೈತರ, ಮಹಿಳೆಯರ, ಜನಸಾಮಾನ್ಯರ ಬದುಕಿಗೆ 5 ಗ್ಯಾರಂಟಿ ಯೋಜನೆಗಳು ಸಹಾಯಕವಾಗಿವೆ ಎಂಬುದು ಪದೇ ಪದೆ ಸಾಬೀತಾಗುತ್ತಲೇ ಬರುತ್ತಿದೆ ಇದಕ್ಕಾಗಿ ನಾನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಯನ್ನು ಹೇಳಬಯುಸುತ್ತೇನೆ. ಜತೆಗೆ ರಾಜ್ಯಪಾಲರಿಗೂ ಧನ್ಯವಾದ ಅರ್ಪಿಸುವುದಾಗಿ ದಿನೇಶ್ ಗೂಳಿಗೌಡ ತಿಳಿಸಿದರು.

Key words:  governor -revealed – government- achievements- MLC Dinesh Gooligowda.