ವಿಶ್ವ ಆನೆಗಳ ದಿನಾಚರಣೆ: ಮೈಸೂರು ವಿವಿಯಿಂದ ವೆಬಿನಾರ್

ಮೈಸೂರು, ಆಗಸ್ಟ್ 12, 2020 (www.justkannada.in): ವಿಶ್ವ ಆನೆಗಳ ದಿನದ ಅಂಗವಾಗಿ ಇಂದು ಅರಣ್ಯ ಇಲಾಖೆ ಸಹಯೋಗದೊಂದಿಗೆ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ವೆಬಿನಾರ್ ಆಯೋಜಿಸಲಾಗಿತ್ತು.

ವಿಜ್ಞಾನ ಭವನದಲ್ಲಿ ನಡೆದ ವೆಬಿನಾರ್ ನಲ್ಲಿ ಪಾಲ್ಗೊಂಡ ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್, ಆನೆಗಳ ಮಹತ್ವ, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಮಾನವ-ಆನೆಗಳ ನಡುವಿನ ಸಂಘರ್ಷ, ಆನೆಗಳ ರಕ್ಷಣೆಗೆ ಅರಣ್ಯ ರಕ್ಷಿಸಬೇಕಾದ ಅನಿವಾರ್ಯತೆ ಕುರಿತು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಪಡಿಸುತ್ತಿರುವುದು ಮಾನವ-ಕಾಡಾನೆಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಆನೆಗಳ ಪ್ರದೇಶಕ್ಕೆ ಮಾನವ ಕಾಲಿಡುತ್ತಿರುವುದರಿಂದಲೇ ಅವು ನಾಡು ಪ್ರವೇಶಿಸುತ್ತಿವೆ. ಇದರಿಂದ ಬೆಳೆ ಹಾನಿ, ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡುತ್ತಿದೆ. ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಆನೆಗಳ ಮಹತ್ವವನ್ನು ಅರಿಯಬೇಕಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ಕಾಡನ್ನು ಸಂರಕ್ಷಿಸಬೇಕಿದೆ ಎಂದು ಹೇಳಿದರು.

ಆನೆಗಳ ವೈರುದ್ಯ, ಭಾರತದಲ್ಲಿ ಆನೆಗಳಿಗಿರುವ ಗೌರವಯುತ ಸ್ಥಾನ ಮತ್ತಿತರ ವಿಷಯಗಳ ಕುರಿತು ಮಾತನಾಡಿದ ಕುಲಪತಿಗಳು, ಬುದ್ಧಿವಂತ ಪ್ರಾಣಿ ಆನೆಗಳ ಸಂತತಿಯನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ ಕುರಿತು ಮಾತನಾಡಿದರು. ಇದೇ ವೇಳೆ ಕ್ವಿಜ್ ಸ್ಪರ್ಧೆಗೂ ಚಾಲನೆ ನೀಡಲಾಯಿತು. ಐಎಫ್ ಎಸ್ ಅಧಿಕಾರಿ ಬಾಲಚಂದ್ರ, ಪ್ರೊ.ರಾಮಚಂದ್ರ, ಪ್ರೊ.ಮಾಲಿನಿ ಇತರರು ಪಾಲ್ಗೊಂಡಿದ್ದರು.