ಮೈತ್ರಿ ಸರ್ಕಾರ ಬೀಳಲು ಇಬ್ಬರು ಕಾರಣ: ನಾವು ಕಟ್ಟಿದ ಕಾಂಗ್ರೆಸ್ ಮನೆಯಲ್ಲಿ ಸಿದ್ಧರಾಮಯ್ಯ ವಾಸ: ಅನರ್ಹ ಶಾಸಕ ಎಂಟಿಬಿ ನಾಗರಾಜ್ ಟಾಂಗ್

ಕೋಲಾರ,ಆ,29,2019(www.justkannada.in): ನಾವು ಕಟ್ಟಿ ಬೆಳೆಸಿದ ಕಾಂಗ್ರೆಸ್ ಮನೆಯಲ್ಲಿ ಸಿದ್ದರಾಮಯ್ಯ ವಾಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಟಾಂಗ್ ನೀಡಿದ್ದಾರೆ.

ಕೋಲಾರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್, ಮೈತ್ರಿ ಸರ್ಕಾರ ಬೀಳಲು ಸಿದ್ಧರಾಮಯ್ಯ ಮತ್ತು ಹೆಚ್.ಡಿ ದೇವೇಗೌಡರೇ ಕಾರಣ. ವಸತಿ ಇಲಾಖೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ ರೇವಣ್ಣ ಮೂಗು ತೋರಿಸುತ್ತಿದ್ದರು. ಸರಿಯಾಗಿ ಕೆಲಸಗಳು ಆಗುತ್ತಿರಲಿಲ್ಲ. ಹೀಗಾಗಿ ರಾಜೀನಾಮೆ ನೀಡುವುದಾಗಿ ಸಿದ್ದರಾಮಯ್ಯ ಬಳಿ ಮೂರು ಬಾರಿ ಹೇಳಿದ್ದೆ. ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಎಂದು ಟೀಕಿಸಿದರು.

ಇದೇ ವೇಳೆ ಸಿದ್ದರಾಮಯ್ಯ ವಿರುದ್ದವೇ ಹರಿ ಹಾಯ್ದ  ಎಂ.ಟಿಬಿ ನಾಗರಾಜ್, ಜೆಡಿಎಸ್ ನಲ್ಲಿ ಅಧಿಕಾರ ಸಿಗಲಿಲ್ಲ ಎಂದು ನೀವು ಕಾಂಗ್ರೆಸ್ ಗೆ ಬಂದಿದ್ದೀರಿ, ನಾವು ಮೂಲ ಕಾಂಗ್ರೆಸ್ಸಿಗರು.  ನಾವು ಕಟ್ಟಿದ ಕಾಂಗ್ರೆಸ್ ಮನೆಗೆ ಬಂದು ಇವರು ಸಂಸಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೇಳುತ್ತೇನೆ ಎಂದು ತಿಳಿಸಿದರು.

ಹಾಗೆಯೇ ಡಿ.ಕೆ ಶಿವಕುಮಾರ್ ವಿರುದ್ದವೂ ಕಿಡಿಕಾರಿದ ಎಂಟಿಬಿ ನಾಗರಾಜ್, ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ್  ನನ್ನ ಕ್ಷೇತ್ರದಲ್ಲಿ ತೊಡೆ ತಟ್ಟಲಿ. ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ಕಾಂಗ್ರೆಸ್ ನವರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.

Key words: Two leader-fall – alliance government-  Siddaramaiah – Congress house disqualified MLA-MTB Nagaraj