ನಾಳೆಯೇ ವಿಶ್ವಾಸ ಮತಯಾಚನೆಗೆ ಸೂಚನೆ ಹಿನ್ನೆಲೆ: ಸುಪ್ರೀಂಕೋರ್ಟ್ ಮೊರೆಹೋದ ಉದ್ಧವ್ ಠಾಕ್ರೆ.

ಮುಂಬೈ,ಜೂನ್,29,2022(www.justkannada.in):  ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಹೊಸ ತಿರುವು ಪಡೆದುಕೊಂಡಿದ್ದು ಈ ಮಧ್ಯೆ ನಾಳೆಯೇ ವಿಶ್ವಾಸಮತಯಾಚನೆ ಮಾಡುವಂತೆ ರಾಜ್ಯಪಾಲರ ಸೂಚನೆ ಹಿನ್ನೆಲೆ ಸಿಎಂ ಉದ್ಧವ್ ಠಾಕ್ರೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ನಾಳೆಯೇ ಬಹುಮತ ಸಾಬೀತು ಪಡಿಸುವಂತೆ ಸಿಎಂ ಉದ್ಧವ್​ ಠಾಕ್ರೆಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್​ ಸಿಂಗ್​ ಕೋಶ್ಯಾರಿ ಸೂಚನೆ ನೀಡಿದ್ದಾರೆ. ಶಿವಸೇನಾ ಪ್ರಭಾವಿ ನಾಯಕ ಏಕನಾಥ್​ ಶಿಂಧೆ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಶಿವಸೇನಾ ಶಾಸಕರು, ಸಿಎಂ ಉದ್ಧವ್​ ಠಾಕ್ರೆ ನೇತೃತ್ವದ ಮಹಾ ವಿಕಾಸ್​ ಅಘಾಡಿ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು ಅಸ್ಸಾಂನಲ್ಲಿ ಬೀಡುಬಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಸರ್ಕಾರಕ್ಕೆ ಸಂಕಷ್ಟ ಉಂಟಾಗಿದ್ದು ನಾಳೆ ವಿಶ್ವಾಸಮತಯಾಚನೆ ಮಾಡಬೇಕಿದೆ. ಆದರೆ ಇದಕ್ಕೆ ನಿರಾಕರಿಸಿರುವ ಸಿಎಂ ಉದ್ಧವ್ ಠಾಕ್ರೆ ರಾಜ್ಯಪಾಲರ ಸೂಚನೆಗೆ ತಡೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಸಲ್ಲಿಸಿರುವ ಸರ್ಕಾರದ ಪರ ವಕೀಲರು, ಕೆಲ ಶಾಸಕರಿಗೆ ಕೊರೋನಾ ತಗುಲಿದೆ.  ಶಾಸಕರಿಲ್ಲದೇ ವಿಶ್ವಾಸ ಮತಯಾಚನೆ ಸಾಧ್ಯವಿಲ್ಲ. ರಾಜ್ಯಪಾಲರ ಸೂಚನೆಗೆ ತಡೆನೀಡುವಂತೆ ಕೋರಿದ್ದಾರೆ.

Key words: tomorrow- confidence vote- Uddhav Thackeray- Supreme court