ವಿಂಡೀಸ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡಕ್ಕೆ ಉಗ್ರರ ದಾಳಿ ಆತಂಕ

ದುಬೈ, ಆಗಸ್ಟ್20, 2019 (www.justkannada.in): ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್‌ ತಂಡ ಆಟಗಾರರ ಮೇಲೆ ಉಗ್ರರು ದಾಳಿ ನಡೆಸುವ ಕುರಿತ ಇ-ಮೇಲ್‌ ಸಂದೇಶ ಆತಂಕಕ್ಕೆ ಕಾರಣವಾಗಿದೆ.

ಆ.16ರಂದು ಅನಾಮಿಕ ಸಂದೇಶವೊಂದು ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಅಧಿಕೃತ ಇ-ಮೇಲ್‌ಗೆ ಬಂದಿದೆ. ಸಂಭಾವ್ಯ ದಾಳಿಯ ಬಗ್ಗೆ ಪಿಸಿಬಿ ತಕ್ಷಣ ಐಸಿಸಿ ಗಮನಕ್ಕೆ ತಂದಿದೆ. ಮಾತ್ರವಲ್ಲ ಬಿಸಿಸಿಐಗೂ ಸಂದೇಶ ತಲುಪಿಸಿದೆ. ಬಿಸಿಸಿಐ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೂ ವಿಷಯವನ್ನು ಮುಟ್ಟಿಸಿದೆ.

ಗೃಹ ಸಚಿವಾಲಯ ಕಾರ್ಯಪ್ರವೃತ್ತರಾಗಿದ್ದು, ಆಯಂಟಿಗುವಾದಲ್ಲಿರುವ ಭಾರತ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಭದ್ರತೆ ಹೆಚ್ಚಿಸಲು ತಿಳಿಸಿದೆ. ಸದ್ಯ ವಿಂಡೀಸ್‌ನಲ್ಲಿ ಟೆಸ್ಟ್‌ ಸರಣಿಗೆ ಸಿದ್ಧವಾಗುತ್ತಿರುವ ಭಾರತ ತಂಡದ ಭದ್ರತೆಯನ್ನು ಐಸಿಸಿ ಬಿಗಿಗೊಳಿಸಿದೆ.