ತಮಿಳುನಾಡಿನ ಒತ್ತಡದ ಮುಲಾಜಿಗೆ ಮಣಿಯದೆ ತುರ್ತಾಗಿ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಿ- ಕುರುಬೂರು ಶಾಂತಕುಮಾರ್ ಆಗ್ರಹ.

ಬೆಂಗಳೂರು,ಜೂನ್,8,2023(www.justkannada.in): ಕಾವೇರಿ ಅಂತಿಮ ತೀರ್ಪಿನಲ್ಲಿ ಸೂಚಿಸಿರುವ ತಮಿಳುನಾಡಿನ 179 ಟಿಎಂಸಿ ಹಂಚಿಕೆ  ನೀರನ್ನು ಹರಿಸಿ ಹೆಚ್ಚುವರಿ ನೀರನ್ನು ರಾಜ್ಯಕ್ಕೆ ಬಳಸಿಕೊಳ್ಳಲು ಅಗತ್ಯವಾಗಿ ಮೇಕೆದಾಟು ಅಣೆಕಟ್ಟೆ ನಿರ್ಮಿಸಲು ರಾಜ್ಯ ಸರ್ಕಾರ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ತಮಿಳುನಾಡಿನ  ಒತ್ತಡದ ಮುಲಾಜಿಗೆ ಮಣಿಯಬಾರದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಒತ್ತಾಯಿಸಿದ್ದಾರೆ.

ಇಂದು ರಾಜ್ಯದ ಕಬ್ಬು ಬೆಳೆಗಾರರ ಬಾಕಿ ಹಣ ಕೊಡಿಸುವ ಬಗ್ಗೆ ನ್ಯಾಯಾಲಯದಲ್ಲಿರುವ ತಡೆಯಾಜ್ಞಾ ತೆರವುಗೊಳಿಸುವ ಬಗ್ಗೆ ಪ್ರಸಕ್ತ ಸಾಲಿನ ಕಬ್ಬಿನ ದರ ನಿಗದಿಪಡಿಸುವ ಬಗ್ಗೆ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ  ಸಚಿವ ಶಿವಾನಂದ ಪಾಟೀಲ್ ಜೊತೆ ರಾಜ್ಯ ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು ಕೃಷಿ ಮಾರುಕಟ್ಟೆ ಸಭಾಂಗಣದಲ್ಲಿ ಚರ್ಚಿಸಲಾಯಿತು.

ಬಳಿಕ ಮಾತನಾಡಿದ ಕುರುಬೂರು ಶಾಂತಕುಮಾರ್, ಕೇಂದ್ರ ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ಏರಿಕೆ ಮಾಡಿರುವುದು ಬಕಾಸುರನ ಹೊಟ್ಟೆಗೆ  ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.  ಒಂದು ಚೀಲ ಗೊಬ್ಬರಕ್ಕೆ 500ರೂ.  ಏರಿಕೆಯಾಗಿದೆ ರೈತರ ಭತ್ತಕ್ಕೆ 140ರೂ ಮಾತ್ರ ಏರಿಕೆ ಯಾಕೆ? ಎಂದು ಪ್ರಶ್ನಿಸಿದರು.

ಗೋಹತ್ಯ ನಿಷೇಧ   ಕಾಯ್ದೆ ರದ್ದು ಬೇಡ.  ರಾಜಕೀಯ ಪಕ್ಷಗಳು ಗೋವುಗಳ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಕೋಣಕ್ಕೂ  ಹಸುವಿಗೂ ಹೋಲಿಕೆ ಮಾಡಿರುವುದು ಸರಿಯಲ್ಲ. ಹಸುಗಳು ರೈತರ ಬದುಕಿಗೆ ಆಸರೆಯಾಗಿ ಜೀವನಾಡಿಯಾಗಿ ಕಾಯಕ ಮಾಡುತ್ತವೆ.  ರೈತರು ಗೌರವ ಭಾವನೆಯಿಂದ ಪೂಜಿಸುತ್ತೇವೆ.  ಗೋವುಗಳನ್ನು  ಹತ್ಯೆ ಮಾಡಿದರೆ ಏನು ತಪ್ಪು ಎಂದು ಹೇಳುವುದು ಒಪ್ಪುವಂತದ್ದಲ್ಲ. ಕಾನೂನಿನಲ್ಲಿರುವ  ಅಡೆ ತಡೆಗಳನ್ನು ನಿವಾರಿಸಿ ತಪ್ಪೇನಿಲ್ಲ. ಗೋಹತ್ಯೆ ಕಾಯ್ದೆ ರದ್ದು ಮಾಡಲು ರೈತರು ಒಪ್ಪುವುದಿಲ್ಲ. ಕಾಡು ಪ್ರಾಣಿಗಳ  ಹಾವಳಿಯಿಂದ ಕಾಡಂಚಿನ ಭಾಗದ ರೈತರ ಬದುಕು ಭಯದಿಂದ ತತ್ತರಿಸುತ್ತಿದೆ . ಕಾಡಿನ ಒಳಗೆ ಇರುವ ಮೋಜಿನತಾಣಗಳನ್ನು ಬಂದ್ ಮಾಡಲು ಗಣಿಗಾರಿಕೆಯನ್ನು ನಿಲ್ಲಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು  ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡರಗಳಾದ ರೇವಣ್ಣಯ್ಯ ಹಿರೇಮಠ, ಪರಶುರಾಮ್ ಎತ್ತಿನ ಗುಡ್ಡ, ಎನ್‌ಹೆಚ್ ದೇವಕುಮಾರ, ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಾನೂನು ಸಲಹೆಗಾರ ಕಿಸಾನ್, ನರಸಿಂಹಮೂರ್ತಿ, ಸಿದ್ದಲಿಂಗ ಒಡೆಯರ್, ಮಹಾಂತೇಶ್ ಕೆರುಟಗಿ, ಕಬ್ಬು ಹಾಗೂ ಸಕ್ಕರೆ ಅಭಿವೃದ್ಧಿ ಆಯುಕ್ತ ಶಿವಾನಂದ ಕೆಲಗಿರಿ ಉಪಸ್ಥಿತರಿದ್ದರು.

Key words: take up- mekedatu project- Kuruburu Shanthakumar- demands.