ಮುಂದಿನ ವರ್ಷದವರೆಗೆ ಕಾಯಬೇಕಿಲ್ಲ: ಈ ವರ್ಷವೇ ಪಠ್ಯ ಪರಿಷ್ಕರಣೆ- ಶಿಕ್ಷಣ ಸಚಿವ ಮಧು ಬಂಗಾರಪ್ಪ

ಬೆಂಗಳೂರು,ಜೂನ್,8,2023(www.justkannada.in): ಬಿಜೆಪಿ ಅವಧಿಯಲ್ಲಿನ ಶಾಲಾ ಪಠ್ಯಪರಿಷ್ಕರಣೆಗೆ ಕೋಕ್ ನೀಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು ,ಈ ವರ್ಷವೇ  ಮತ್ತೆ ಪಠ್ಯ ಪರಿಷ್ಕರಣೆ ಮಾಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಕ್ಕಳು ತಪ್ಪು ಓದಬಾರದು ಹೀಗಾಗಿ ಈ ವರ್ಷದಿಂದಲೇ ಪಠ್ಯ ಪರಿಷ್ಕರಣೆ ಮಾಡುತ್ತೇವೆ.  ಮಕ್ಕಳ ಹಿತದೃಷ್ಠಿಯಿಂದ ಪಠ್ಯ ಪರಿಷ್ಕರಣೆ ಮಾಡುತ್ತೇವೆ ಹೊಸ ಪಠ್ಯಕ್ಕಾಗಿ ಮುಂದಿನ ವರ್ಷದವರೆಗೆ ಕಾಯಬೇಕಿಲ್ಲ ಎಂದರು.

ತಜ್ಞರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ಸಭೆ ನಡೆಯುತ್ತಿದೆ. ಪೂರಕ ಪಠ್ಯಪುಸ್ತಕ ನೀಡುತ್ತೇವೆ. ಯಾವ ಪಾಠ ಮಾಡಬೇಕು ಯಾವ ಪಾಠ ಮಾಡಬಾರದು ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಮಕ್ಕಳಿಗೆ ಅವಶ್ಯಕತೆ ಇಲ್ಲದ್ದನ್ನು ತಜ್ಞರು ಪರಿಶೀಲಿಸಿ ತೀರ್ಮಾನಿಸುತ್ತಾರೆ. ಸಂಪುಟದಲ್ಲಿ ಇಟ್ಟೇ ತೀರ್ಮಾನವಾಗಲಿದೆ. ಮುಂದಿನ ಸಂಪುಟದಲ್ಲೇ ಚರ್ಚೆ ಮಾಡಲಾಗುತ್ತದೆ. ಈ ಹಿಂದೆಯೂ ಸಪ್ಲಿಮೆಂಟರಿ ಪರಿಷ್ಕರಣೆ ಆಗಿದ್ದಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಒತ್ತಡ ಬೇಡ. ಆರಂಭದಲ್ಲಿ ಸೇತು ಬಂಧ ಇರಲಿದೆ. ಮಕ್ಕಳು ಪಠ್ಯಕ್ಕೆ ಹೋಗಲ್ಲ. ಮತ್ತು ಪಠ್ಯದಲ್ಲಿ ಏನು ಓದಿಸಬೇಕು, ಯಾವುದು ಬೇಡ ಎಂಬುದನ್ನು ನಿರ್ಧರಿಸಲಾಗುತ್ತದೆ. ಇದು ಬಹಳ ಸೂಕ್ಷ್ಮ ವಿಚಾರ. ಮಕ್ಕಳ ಹಿತದೃಷ್ಟಿಯಿಂದ ಕ್ರಮ ತೆಗೆದುಕೊಳ್ಳುತ್ತೇವೆ. ಮಕ್ಕಳ ಭವಿಷ್ಯಕ್ಕೆ ಒಳ್ಳೆಯ ಅಂಶ ಉಳಿಸಲಾಗುತ್ತದೆ  ಎಂದು ಮಧು ಬಂಗಾರಪ್ಪ ತಿಳಿಸಿದರು.

ಪಠ್ಯ ಪರಿಷ್ಕರಣೆಯಾಗಬೇಕೆಂದು ಸಾಹಿತಿಗಳು ಸಿಎಂಗೆ ಮನವಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಯವರು ಕೂಡ ಆಸಕ್ತಿ ತೋರಿಸಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಅದನ್ನು ಮಾಡುತ್ತೇವೆ. ಈ ವಿಷಯದಲ್ಲಿ ಮುಖ್ಯಮಂತ್ರಿಯವರೇ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಇದು ಖುಷಿಯ ವಿಚಾರ. ತಜ್ಞರು ಪಕ್ಷಕ್ಕೆ ಸೀಮಿತವಾಗಿರಲ್ಲ. ಅವರು ಕೊಡುವ ಸಲಹೆ ಪರಿಗಣಿಸಲಾಗುತ್ತದೆ. ತಪ್ಪು ತಿಳುವಳಿಕೆ ತಕ್ಷಣ ತಡೆ ಹಿಡಿಯಬೇಕಾಗುತ್ತದೆ. ಅದನ್ನು ನಾವು ಮಾಡುತ್ತೇವೆ. ಯಾವ ಪಠ್ಯ ಬೇಡ ಎಂದು ತಜ್ಞರು ಸೂಚಿಸುತ್ತಾರೋ ಅದನ್ನು ಬೋಧಿಸದಂತೆ ತಿಳಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಶಿಕ್ಷಕರ ನೇಮಕದಲ್ಲಿ ಎರಡು ಸಮಸ್ಯೆ ಇದೆ. ಕಾನೂನಿನ ತೊಡಕಿದೆ ಅದನ್ನು ಎಜಿ ಅವರ  ಜೊತೆ ಚರ್ಚೆ ಮಾಡಲಾಗುತ್ತದೆ‌. ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರೇ ಸಮಸ್ಯೆಗೆ ಪರಿಹಾರವಲ್ಲ. ಹೀಗಾಗಿ ಆದಷ್ಟು ಶೀಘ್ರವಾಗಿ  ಸಮಸ್ಯೆ ಪರಿಹರಿಸಲಾಗುತ್ತದೆ‌ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

Key words: Syllabus- revision- this year -Education Minister- Madhu Bangarappa