ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಸೂಕ್ತ ಆದ್ಯತೆ- ಸಚಿವ ಅಶ್ವತ್ ನಾರಾಯಣ್.

ಬೆಂಗಳೂರು,ಆಗಸ್ಟ್,4,2022(www.justkannada.in): ರಾಜ್ಯದಲ್ಲಿ ಸೆಮಿಕಂಡಕ್ಟರ್ ಮತ್ತು ವಿದ್ಯುನ್ಮಾನ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಇದರ ಅಂಗವಾಗಿ ಹುಬ್ಬಳ್ಳಿ- ಧಾರವಾಡ, ಶಿವಮೊಗ್ಗ ಮತ್ತು ಮೈಸೂರುಗಳನ್ನು ವಿಶೇಷ ಹೂಡಿಕೆ ವಲಯಗಳಾಗಿ ಗುರುತಿಸಲಾಗಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ. ಸಿ ಎನ್ ಅಶ್ವತ್ ನಾರಾಯಣ್ ಹೇಳಿದ್ದಾರೆ.

ನಗರದಲ್ಲಿ ಗುರುವಾರ ನಡೆದ ‘ಭಾರತ: ಪ್ರವರ್ಧಮಾನಕ್ಕೆ ಬರುತ್ತಿರುವ ವೈಮಾಂತರಿಕ್ಷ ವಿದ್ಯುನ್ಮಾನ ಕ್ಷೇತ್ರ’ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ದೇಶದಲ್ಲಿ 100 ಕೋಟಿ ಮೊಬೈಲ್ ಬಳಕೆದಾರರು ಈಗ ಇದ್ದಾರೆ. ಇದನ್ನು ಗಮನಿಸಿ ಕೃಷಿಯಿಂದ ಹಿಡಿದು ಮಿಕ್ಕ ಎಲ್ಲಾ ಕ್ಷೇತ್ರಗಳಿಗೂ ಡಿಜಿಟಲ್ ಮಾರುಕಟ್ಟೆಯನ್ನು ಸೃಷ್ಟಿಸುವ ಮತ್ತು ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಲವು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಭರವಸೆ ನೀಡಿದರು.

ಈಗಾಗಲೇ ಮೈಸೂರಿನಲ್ಲಿ ಸೆಮಿಕಂಡಕ್ಟರ್ ಅಭಿವೃದ್ಧಿ ಸಮಗ್ರ ಕೇಂದ್ರವನ್ನು ಸ್ಥಾಪಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಮೂಲಕ ದೇಶದಲ್ಲಿ ಈ ಕ್ಷೇತ್ರದಲ್ಲೂ ರಾಜ್ಯವೇ ನಂಬರ್ ಒನ್ ಆಗಿ ಹೊರಹೊಮ್ಮಲಿದೆ ಎಂದು ಅವರು ಭರವಸೆ ನೀಡಿದರು

ವಿನ್ಯಾಸ ಕ್ಷೇತ್ರದಲ್ಲಿ ಕೂಡ ರಾಜ್ಯವು ಪ್ರಪಂಚದಲ್ಲಿ ದ್ವಿತೀಯ ಸ್ಥಾನದಲ್ಲಿದ್ದು 11,000 ಜನರಿಗೆ ಸೂಕ್ತ ತರಬೇತಿ ಕೊಡಲಾಗಿದೆ. ಇದಕ್ಕೆ ಬಲ ಕೊಡುವಂತೆ ರಾಜ್ಯವು ಮೂರು ವರ್ಷಗಳಿಂದ ನಾವಿನ್ಯತ ಸೂಚ್ಯಂಕದಲ್ಲಿ ಸತತವಾಗಿ ಪ್ರಥಮ ಸ್ಥಾನದಲ್ಲಿದೆ. ಇವೆಲ್ಲವೂ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ನಮ್ಮಲ್ಲಿರುವ ಸೂಕ್ತ ಕಾರ್ಯ ಪರಿಸರ ಮತ್ತು ನೀತಿಗಳ ಸಂಕೇತವಾಗಿದೆ ಎಂದು ಅವರು ವಿವರಿಸಿದರು.

ಆಧುನಿಕ ಉದ್ಯಮಗಳ ಅಗತ್ಯಗಳ ಹಿನ್ನೆಲೆಯಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲ್ಯಗಳ ಕಲಿಕೆಗೆ ಒತ್ತು ಕೊಡಲಾಗಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರವು ವಾಸ್ತವ ದೃಷ್ಟಿಕೋನವನ್ನು ಹೊಂದಿದೆ. ಪ್ರಧಾನಿ ಮೋದಿ ಅವರ ಆಶಯದಂತೆ ಮುಂದಿನ 25 ವರ್ಷಗಳ ಕಾಲ ನಮಗೆ ಅಮೃತ ಕಾಲವಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಏರೋ ಸ್ಪೇಸ್ ಎಲೆಕ್ಟ್ರಾನಿಕ್ಸ್ ಹಬ್ ನ ಡಾ.ಜಾನ್, ಸಂಜಯ್ ಸೇರಿದಂತೆ ಶಿಕ್ಷಣ ಇಲಾಖೆ, ಐಟಿ-ಬಿಟಿ ಇಲಾಖೆ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಗಳ ಉನ್ನತ ಅಧಿಕಾರಿಗಳು ಹಾಗೂ ಸಿಂಗಾಪುರದಿಂದ ಆಗಮಿಸಿರುವ ನಿಯೋಗದ ಸದಸ್ಯರು ಹಾಜರಿದ್ದರು.

Key words: Suitable-preference – semiconductor-electronics-sector-Minister-Ashwath Narayan.