ಸಕ್ಕರೆ ನಿಯಂತ್ರಣ ಕಾಯ್ದೆ ತಿದ್ದುಪಡಿ, ರೈತರಿಗೆ ಮರಣ ಶಾಸನ: ಕುರುಬೂರು ಶಾಂತಕುಮಾರ್

ತುಮಕೂರು, ಅಕ್ಟೋಬರ್ 17, 2020 (www.justkannada.in): ಕೇಂದ್ರ ನೀತಿ ಆಯೋಗ, ಸಕ್ಕರೆ ನಿಯಂತ್ರಣ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿದೆ. ಈ ಮೂಲಕ ರೈತರ ಮರಣ ಶಾಸನ ಬರೆಯಲು ಕೇಂದ್ರ ಹೊರಟಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸುದ್ದಿಗೋಷ್ಠಿಯಲ್ಲಿ ದೂರಿದ್ದಾರೆ.

ಕಬ್ಬಿನ ಹಣ ನೀಡಲು 60 ದಿನಗಳ ತನಕ ಕಾಲಾವಕಾಶ ನೀಡುವುದು. ಮೂರು ಕಂತುಗಳಲ್ಲಿ ನೀಡಬುಹುದು ಎಂಬ ತಿದ್ದುಪಡಿ ಮಾಡಲು ಸರಕಾರ ಹೊರಟಿದೆ. ಯಾವುದೇ ಕಾರಣಕ್ಕೆ ಈ ಕಾಯ್ದೆಗೆ ತಿದ್ದುಪಡಿ ತರಬಾರದು.
ರಾಜ್ಯ ಸರ್ಕಾರ ಇದಕ್ಕೆ ತಡೆ ಹಾಕಬೇಕು. ರಾಜ್ಯದ ಸಂಸದರು ಇದಕ್ಕೆ ತಡೆಯೊಡ್ಡುವ ಕೆಲಸ ಮಾಡಬೇಕು.
ಸಹಕಾರಿ ಬ್ಯಾಂಕುಗಳು ರೈತರಿಗೆ ಸಾಲ ಕೊಡದೇ ಸಾಕಷ್ಟು ಕಿರುಕುಳ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಹಕಾರಿ ನಿಯಮ ಗಾಳಿಗೆ ತೂರಿ 750 ಕೋಟಿ ರೂ. ವಸೂಲಾಗದ ಸಾಲ ಅಂತ ತೋರಿಸಿದ್ದಾರೆ. ಈ ಮೂಲಕ ಸಹಕಾರಿ ಕ್ಷೇತ್ರವನ್ನ ನಿರ್ನಾಮ ಮಾಡುವ ಹುನ್ನಾರ ಇದಾಗಿದೆ. ಈ ಪ್ರಕರಣವನ್ನು ಸಿಬಿಐ ತನಿಖೆ ಒಪ್ಪಿಸಬೇಕು.
ಅನೈತಿಕ ಚಟುವಟಿಕೆ ಮಾಡಿರುವವರನ್ನು ಜೈಲಿಗಟ್ಟುವ ಕೆಲಸವಾಗಬೇಕು. ಕಬ್ಬಿನ ಎಫ್ ಆರ್ ಪಿ ದರ ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ. ಸರ್ಕಾರ ಇದನ್ನು ಪುನರ್ ಪರಿಶೀಲಿಸುವ ಭರವಸೆ ನೀಡಿದೆ. ನಮ್ಮ ಭರವಸೆ ಈಡೇರಿಸದಿದ್ದರೆ ಮತ್ತೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ರಾಜ್ಯದಲ್ಲಿರುವ ರಸಗೊಬ್ಬರ ಅಭಾವ ಉಂಟಾಗಿದೆ. ಕಳ ಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ.
ಇದಕ್ಕೆ ತಡೆಯಾಗಬೇಕು. ಕೇಂದ್ರ ಸರ್ಕಾರ ರಸಗೊಬ್ಬರ ಅಭಾವ ಸೃಷ್ಟಿ ಆಗದಂತೆ ನೋಡಿಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.