ಯಾವುದೇ ಮುಲಾಜಿಗೊಳಗಾಗದೇ ರಾಜ್ಯಾದ್ಯಂತ ಒತ್ತುವರಿ ತೆರವು ಕಾರ್ಯಾಚರಣೆ- ಸಚಿವ ಭೈರತಿ ಬಸವರಾಜು.

ಮೈಸೂರು,ಸೆಪ್ಟಂಬರ್,22,2022(www.justkannada.in):  ಯಾವುದೇ ಮುಲಾಜಿಗೆ ಒಳಗಾಗದೇ ರಾಜ್ಯದಾದ್ಯಂತ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು‌ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಹೇಳಿದರು.

ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಭೈರತಿ ಬಸವರಾಜು, ಬೆಂಗಳೂರು ನಗರ ಮಾತ್ರವಲ್ಲದೇ ರಾಜ್ಯದ ಉದ್ದಗಲಕ್ಕೂ ಒತ್ತುವರಿ ತೆರವು ಮಾಡಲಾಗುವುದು. ಕೆರೆ, ರಾಜಕಾಲವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪರಿಣಾಮ ಮಳೆ ಬಂದಾಗ ತೀವ್ರ ಸಮಸ್ಯೆ ಆಗುತ್ತಿದೆ. ಸಮಸ್ಯೆ ನಿವಾರಣೆ ಮಾಡುವ ಸಲುವಾಗಿ ರಾಜ್ಯದೆಲ್ಲೆಡೆ ಒತ್ತುವರಿ ತೆರವು ಮಾಡಲಾಗುವುದು. ಬಡವ ಶ್ರೀಮಂತ ಎಂಬ ತಾರತಮ್ಯವಿಲ್ಲದೇ ಯಾವುದೇ ಮುಲಾಜಿಗೆ ಒಳಗಾಗದೇ ಒತ್ತುವರಿ ತೆರವು ಮಾಡಲಾಗುವುದು ಎಂದರು.

ಗುತ್ತಿಗೆ ಪೌರ ಕಾರ್ಮಿಕರ ಖಾಯಮಾತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಭೈರತಿ ಬಸವರಾಜು, ಇತ್ತೀಚೆಗೆ 11 ಸಾವಿರಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. ಹಂತ ಹಂತವಾಗಿ ಇನ್ನುಳಿದ ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗುವುದು. ಪೌರ ಕಾರ್ಮಿಕರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.

Key words: State-wide -encroachment -eviction -operation – Minister- Bhairati Basavaraju