ಶ್ರೀಶೈಲದಲ್ಲಿ ಕನ್ನಡಿಗರ ಮೇಲೆ ಹಲ್ಲೆ: ಪ್ರಕರಣ ದಾಖಲು.

ಆಂಧ್ರಪ್ರದೇಶ,ಜೂನ್,4,2022(www.justkannada.in): ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರದಲ್ಲಿ ಕನ್ನಡಿಗರ ಮೇಲೆ  ಹಲ್ಲೆ ನಡೆಸಲಾಗಿದೆ. ಕಾರಣವೇ ಇಲ್ಲದೇ ಆಂಧ್ರಪ್ರದೇಶದ ಶ್ರೀಶೈಲ ಶ್ರೀಕ್ಷೇತ್ರದಲ್ಲಿ ಬಸ್ ಚಾಲಕ, ನಿರ್ವಾಹಕರ ಮೇಲೆ 10ರಿಂದ 12 ಜನರ ಗುಂಪು ಹಲ್ಲೆ ನಡೆಸಿದ್ದಾರೆ.

ವಿಜಯಪುರ ಬಸ್ ಚಾಲಕ ಬಸವರಾಜ ಬಿರಾದಾರ ಮೇಲೆ ಹಲ್ಲೆಯಾಗಿದ್ದು ಇವರ ಮುಖ, ಕಾಲಿಗೆ ಗಂಭೀರ ಗಾಯಗಳಾಗಿವೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ಘಟಕಕ್ಕೆ ಸೇರಿದ ಬಸ್ ಶ್ರೀಶೈಲ ಕ್ಷೇತ್ರಕ್ಕೆ ತೆರಳಿತ್ತು. ಜೂನ್ 2 ರಂದು ಮಧ್ಯ ರಾತ್ರಿ ಶ್ರೀಶೈಲದ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಚಾಲಕ- ನಿರ್ವಾಹಕ ಮಲಗಿದ್ದರು.

ಮಧ್ಯ ರಾತ್ರಿ ಏಕಾಏಕಿ ಆಗಮಿಸಿದ ಸುಮಾರು 10ರಿಂದ 12 ಜನರಿದ್ದ ತಂಡ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದಾರೆ. ದಾಳಿಯ ವೇಳೆ ಚಾಲಕ ಬಸವರಾಜ ಚೀರಾಟ ಕೇಳಿ ಅಕ್ಕಪಕ್ಕದಲ್ಲಿದ್ದ ಇತರೆ ವಾಹನಗಳ ಚಾಲಕ, ಕಂಡಕ್ಟರ್‌ಗಳು ಬಸವರಾಜ ಅವರ ರಕ್ಷಣೆಗಾಗಿ ಓಡಿ ಬಂದಿದ್ದಾರೆ. ಇದನ್ನು ಕಂಡ ಪುಂಡರು ಅಲ್ಲಿಂದ ಓಡಿ ಹೋಗಿದ್ದಾರೆ.

ಈ ಬಗ್ಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಶ್ರೀಶೈಲ ಪೊಲೀಸ್ ಠಾಣೆಯಲ್ಲಿ ಚಾಲಕರ ಬಸವರಾಜ ದೂರು ನೀಡಿದ್ದಾರೆ. ಈ ಕುರಿತು ಶ್ರೀಶೈಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Srisaila- Kannadiga- assaulted- Case -file