ಶೀಘ್ರದಲ್ಲೇ ಅವನೇ ಶ್ರೀಮನ್ನಾರಾಯಣ ಟ್ರೈಲರ್​ ಔಟ್​​: ಟ್ರೈಲರ್​ ಬಗ್ಗೆ ಕುತೂಹಲ ಹೆಚ್ಚಿಸಿದ ರಕ್ಷಿತ್​ ಶೆಟ್ಟಿ ಮಾತು

ಬೆಂಗಳೂರು,ನ,11,2019(www.justkannada.in): ಟೀಸರ್​ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಶ್ರೀಮನ್ನಾರಾಯಣ ಚಿತ್ರದ ಬಗ್ಗೆ ರಕ್ಷಿತ್​ ಹೊಸ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ನಟ. ನಿರ್ದೇಶಕ ರಕ್ಷಿತ್​ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಅವನೇ ಶ್ರೀಮನ್ನಾರಾಯಣ ಟ್ರೈಲರ್​ ಶೀಘ್ರವೇ ಪ್ರೇಕ್ಷಕರ ಮುಂದೆ ದರ್ಶನ ನೀಡಲಿದೆ.  ಟೀಸರ್​ ಮೂಲಕ ಟ್ರೆಂಡ್​ ಸೃಷ್ಟಿಸಿರುವ ಅವನೇ ಶ್ರೀಮನ್ನಾರಾಯಣ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ವ್ಯಕ್ತವಾಗಿದೆ. ಈ ನಡುವೆ ರಕ್ಷಿತ್​ ಚಿತ್ರದ ಬಗ್ಗೆ ಹೇಳಿರುವ ಮಾತು ಅಭಿಮಾನಿಗಳ ಕುತೂಹಲದ ಎಲ್ಲೆ ಮೀರಿದೆ.

ನಟ ರಕ್ಷಿತ್​ ಸೋಮವಾರ, ನ.11 ರಂದು ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್​ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ ಎಂದು ಹೇಳಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಈ ಬಗ್ಗೆ ರಕ್ಷಿತ್​ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಸೋಮವಾರ ಮಾಹಿತಿ ಹಂಚಿಕೊಂಡಿದ್ದಾರೆ.

“ಶ್ರೀಮನ್ನಾರಾಯಣದ ಸಂಕಲನಗೊಂಡ ಮೊದಲ ಟ್ರೈಲರ್​ ಬಿಡುಗಡೆಯಾಗಲು ಸಜ್ಜಾಗಿದ್ದು ಅಭಿಮಾನಿಗಳ ಕಾತರವನ್ನು ಹೆಚ್ಚಿಸಲಿದೆ. ಟ್ರೈಲರ್​ ಬಿಡುಗಡೆಯಾದಾಗ ಎಲ್ಲ ಅಭಿಮಾನಿಗಳ ಪ್ರತಿಕ್ರಿಯೆಯನ್ನು ನೋಡಲು ನಾನು ಕಾಯುತ್ತಿದ್ದೇನೆ,” ಎಂದು ಹೇಳಿದ್ದಾರೆ.

“ನಾವು ಮೊದಲ ಟೀಸರ್​ ನಲ್ಲಿ ಚಿತ್ರದ ಬಗ್ಗೆ ಅಷ್ಟಾಗಿ ಮಾಹಿತಿಯನ್ನು ನೀಡಿಲ್ಲ. ಆದರೆ ಟ್ರೈಲರ್​ ನಿಮಗೆ ಸಂಪೂರ್ಣ ಚಿತ್ರಣವನ್ನು ನೀಡಲಿದೆ. ಟೀಸರ್​ ಮತ್ತು ಟ್ರೈಲರ್​ ನಡುವೆ ಸಾಮ್ಯತೆ ಇದೆ. ಇದನ್ನು ನೀವೂ ಗುರುತಿಸುತ್ತೀರಿ ಎಂಬ ನಂಬಿಕೆಯಿದೆ,” ಎಂದು ಬರೆದುಕೊಂಡಿದ್ದಾರೆ.

ಈ ಮಧ್ಯೆ ಶ್ರೀಮನ್ನಾರಾಯಣ ಚಿತ್ರತಂಡ ಹೊಸ ಮಾಹಿತಿಯನ್ನು ಹೇಳಿಕೊಂಡಿದೆ. ಚಿತ್ರದ ಟ್ರೈಲರ್​ ಇದೇ ತಿಂಗಳ 25 ರಂದು ಬಿಡುಗಡೆಯಾಗಲಿದೆ ಎಂದು ತಂಡ ಸಂತಸ ವ್ಯಕ್ತಪಡಿಸಿದೆ.

ಪ್ರಾರಂಭವಾದಾಗಿನಿಂದ ರಕ್ಷಿತ್  ಮತ್ತು ಶಾನ್ವಿ ಶ್ರೀವಾಸ್ತವ್​ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ  ಶ್ರೀಮನ್ನಾರಾಯಣ ಚಿತ್ರ ಕುತೂಹಲ ಮೂಡಿಸುತ್ತಿದೆ. ರಕ್ಷಿತ್​ ಇದರಲ್ಲಿ  ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.  ಶಾನ್ವಿ ಮೊದಲನೆಯ ಬಾರಿಗೆ ಕನ್ನಡ ಚಿತ್ರಕ್ಕಾಗಿ ಕಂಠ ನೀಡಿದ್ದಾರೆ. ಕನ್ನಡದಲ್ಲಿ ಡಬ್ ಮಾಡುತ್ತಿದ್ದೇನೆ ಎಂದು ಆಡಿಯೋ  ಕ್ಲಿಪ್  ಒಂದನ್ನು ಬಿಡುಗಡೆ ಮಾಡಿದ್ದರು. ಚಿತ್ರಕ್ಕೆ ಧನ್ಯವಾದ ಸಲ್ಲಿಸಿ ಕನ್ನಡಿಗರಿಗೆ ಒಂದು ಪತ್ರವನ್ನೂ ಬರೆದಿದ್ದರು.

ಶ್ರೀಮನ್ನಾರಾಯಣ ಚಿತ್ರವು ವಷಾಂತ್ಯದಲ್ಲಿ ಅಂದರೆ ಡಿಸೆಂಬರ್​ 27 ರಂದು ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಬೆಳ್ಳಿ ತೆರೆಗೆ ಅಪ್ಪಳಿಲಿದೆ. ಈ ಮಾಹಿತಿಯನ್ನು ಸ್ವತಃ ರಕ್ಷಿತ್​ ಅವರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು. “ಶ್ರೀಮನ್ನಾರಾಯಣ ಡಿಸೆಂಬರ್​ 27 ರಂದು ತೆರೆಗೆ ಬರುತ್ತಿದೆ”, ಎಂದು ಸಂತಸ ವ್ಯಕ್ತಪಡಿಸಿದರು. ಅಲ್ಲದೆ ಇದೇ ದಿನ ರಕ್ಷಿತ್​ ತಮ್ಮ ಹಿಂದಿನ ಯಶಸ್ವಿ ಚಿತ್ರವಾದ ಕಿರಿಕ್​ ಪಾರ್ಟಿ ಗೆ ಮೂರು ವರ್ಷಗಳು ತುಂಬುತ್ತವೆ. ಅದೂ ಕೂಡ ಡಿಸೆಂಬರ್​ 27 ರಂದು ಬಿಡುಗಡೆಯಾಗಿತ್ತು. ಇದರ ಬಗ್ಗೆಯೂ ರಕ್ಷಿತ್​ ಹೇಳಿಕೊಂಡಿದ್ದರು. “ನಾವು ಕಿರಿಕ್​ ಪಾರ್ಟಿಯ ಮೂರು ವರ್ಷಗಳ ಸಂಭ್ರಮವನ್ನು ಆಚರಿಸಲಿದ್ದೇವೆ”, ಎಂದು ಬರೆದುಕೊಂಡಿದ್ದರು.

ಚಿತ್ರವು ಬಹುಭಾಷೆಯಲ್ಲಿ ನಿರ್ಮಾಣವಾಗಿದೆ. ತೆಲುಗು ಅವತರಣಿಕೆಯ ಚಿತ್ರಕ್ಕೆ ಟಾಲಿವುಡ್​ ನ ಖ್ಯಾತ ನಾಮ ಚಿತ್ರ ಸಾಹಿತಿಯಾದ ರಾಮಜೋಗಯ್ಯ ಶಾಸ್ತ್ರಿ ಗೀತ ರಚನೆ ಮಾಡಿದ್ದಾರೆ. ಇವರು ಈ ಮುನ್ನ ದರ್ಶನ್​ ರ ಕುರುಕ್ಷೇತ್ರ ಮತ್ತು ಸುದೀಪ್​ ರ ಪೈಲ್ವಾನ್​ ಚಿತ್ರದ ತೆಲುಗು ಅವತರಣಿಕೆಯ ಚಿತ್ರಗಳಿಗೂ ರಾಮಜೋಗಯ್ಯ ಲೇಖನಿ ಹಿಡಿದಿದ್ದರು.

ಶ್ರೀಮನ್ನಾರಾಯಣ ಚಿತ್ರತಂಡವು ಅ.1 ರಿಂದಲೇ ಅಧಿಕೃತವಾಗಿ ಚಿತ್ರಕ್ಕೆ ಪ್ರಮೋಷನ್ ಕಾರ್ಯ ಆರಂಭಿಸಿದೆ. ನಿರ್ಮಾಪಕ ಮಲ್ಲಿಕಾರ್ಜುನಯ್ಯ ಹಲವು ನಿರ್ಮಾಣ ಸಂಸ್ಥೆಗಳೊಂದಿಗೆ ಚಿತ್ರ ಹಂಚಿಕೆಯ ಕುರಿತಂತೆ ಮಾತುಕತೆ ನಡೆಸಿದ್ದಾರೆ.

ಚಿತ್ರದ ಇತರೆ ಭಾಷೆಗಳ ಡಬ್ಬಿಂಗ್​ ಕಾರ್ಯವು ಪ್ರಗತಿಯಲ್ಲಿದೆ. ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈಗಾಗಲೇ ಡಬ್ಬಿಂಗ್​ ಕಾರ್ಯ ಪೂರ್ಣಗೊಂಡಿದೆ. ತೆಲುಗು ಮತ್ತು ಹಿಂದಿಯಲ್ಲಿ ಪೂರ್ಣಗೊಳ್ಳುವ ಹಂತದಲ್ಲಿದೆ. ಎಲ್ಲ ಡಬ್ಬಿಂಗ್​ ಕಾರ್ಯವು ಬೇಗ ಪೂರ್ಣಗೊಳ್ಳಲಿದ್ದು ಆದಷ್ಟು ಬೇಗ ಅವನೇ ಶ್ರೀಮನ್ನಾರಾಯಣ ಟ್ರೈಲರ್​ ಜಾಲತಾಣದಲ್ಲಿ ಟ್ರೆಂಡ್​ ಸೃಷ್ಟಿಸಲಿದೆ.

80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀಮನ್ನಾರಾಯಣ ಚಿತ್ರಕ್ಕೆ ಸಚಿನ್​ ರವಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಪುಷ್ಕರ ಮಲ್ಲಿಖಾರ್ಜುನಯ್ಯ ಮತ್ತು ಎ ಕೆ ಪ್ರಕಾಶ್​ ಬಂಡವಾಳ ಹೂಡಿದ್ದಾರೆ. ಬಿ ಅಜನೀಶ್​ ಲೋಕನಾಥ್​ ಮತ್ತು ಚರಣ್​ ರಾಜ್​ ರಾಗ ಸಂಯೋಜನೆ ಮಾಡಿದ್ದಾರೆ.

ಅವನೇ ಶ್ರೀಮನ್ನಾರಾಯಣ ನವಿರು ಪ್ರೇಮ ಮತ್ತು ಹಾಸ್ಯ ಮಿಶ್ರಿ ಕಥೆಯಾಗಿದೆ. ಕರ್ಮ್​ ಚಾವ್ಲಾ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.  ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ್ ಒಳಗೊಂಡಂತೆ ಅಚ್ಯುತ್​ ಕುಮಾರ್​, ಪ್ರಮೋದ್​ ಶೆಟ್ಟಿ, ಬಾಲಾಜಿ ಮನೋಹರ್​ ತಾರಾಗಣದಲ್ಲಿದ್ದಾರೆ.

Key words: Soon- trailer -Srimannarayana -release