ಎಷ್ಟು ಪ್ರವಾಹ ಬಂದ್ರೇನು..? ಎಷ್ಟು ಜನ ಸತ್ರೇನು..? ಸರ್ಕಾರಕ್ಕೆ ಇಂತಹ ಮನಸ್ಥಿತಿ ಇದೆ- ಸದನದಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ…

ಬೆಂಗಳೂರು,ಅ,10,2019(www.justkannada.in): ಎಷ್ಟು ಪ್ರವಾಹ ಬಂದ್ರೇನು..? ಎಷ್ಟು ಜನ ಸತ್ರೇನು..? ಇಂತಹ ಮನಸ್ಥಿತಿ ಬಿಜೆಪಿ ಸರ್ಕಾರಕ್ಕೆ ಇದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ವಿಧಾನಸಭೆ ಕಲಾಪದಲ್ಲಿ ನೆರೆ ಪರಿಸ್ಥಿತಿ ಬಗ್ಗೆ ಇಂದು ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಬಜೆಟ್ ಗೆ ಲೇಖಾನುದಾನ ಪಡೆದಿರುವಾಗ ಮೂರು ದಿನಕ್ಕೆ ಕಲಾಪ ಮೊಟಕುಗೊಳಿಸುವ ಅಗತ್ಯವೇನಿತ್ತು. ಅಧಿವೇಶನ ಕರೆದಿರುವುದು ಸರ್ಕಾರವಲ್ಲ. ನೀವು.  ಸರ್ಕಾರದವರು ಪೂರ್ವಾಗ್ರಹ ಪೀಡಿತರು.  ಎಲ್ಲವನ್ನೂ ಮೊದಲೇ ನಿರ್ಧರಿಸಿಕೊಂಡು ಬಂದಿರುತ್ತಾರೆ. ನೀವು ನಮ್ಮ ಪರ ನಿಲ್ಲಬೇಕಿತ್ತು ಎಂದು ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಅವರಿಗೆ ಚಾಟಿ ಬೀಸಿದರು.

ರಾಜ್ಯದಲ್ಲಿ ಬರಗಾಲ, ನೆರೆ  ಒಟ್ಟಿಗೆ ಬಂದಿವೆ. ಏಳು ಲಕ್ಷ ಜನ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. 90 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ನಾಪತ್ತೆಯಾಗಿದ್ದಾರ. ರಾಜ್ಯದಲ್ಲಿ ಇಂತಹ ವಿಚಾರಗಳಿವೆ. ಆದರೆ ಕೇವಲ ಮೂರು ದಿನಕ್ಕೆ ಕಲಾಪ ಕರೆಯಲಾಗಿದೆ ಇದು ಸರಿಯಲ್ಲ ಎಂದು ವಿರೋಧಿಸಿದರು.

ಇದೇ ವೇಳೆ ನೆರೆ ಪರಿಹಾರ ಕುರಿತು ಡಿಸಿಎಂ  ಗೋವಿಂದ ಕಾರಜೋಳ ಕಾಲೆಳೆದ  ಸಿದ್ಧರಾಮಯ್ಯ, ಕಾರಜೋಳ ಅವರೇ ನಮ್ಮ ಜಿಲ್ಲೆಯಲ್ಲಿ  ಪ್ರವಾಹದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀವಿಲ್ಲಿ ಸುಮ್ಮನೆ ಕುಳಿತರೆ ಹೇಗೆ. ರೈತರ ಕಷ್ಟ ಅರ್ಥ ಆಗಲ್ವಾ..? ಎಂದು ಪ್ರಶ್ನಿಸಿದರು.

ಹಾಗೆಯೇ 2009ರಲ್ಲಿಯೂ ಪ್ರವಾಹ ಬಂದಿತ್ತು. ಆಗ  ಬಿಜೆಪಿಯವರು ಸುತ್ತೂರಿನಲ್ಲಿ  ಯೋಗ ಮಾಡುತ್ತಿದ್ರು. ಅಂದು ಸಿಎಂ ಬಿಎಸ್ ವೈ ಅವರೇ ಇಂದು ಸಿಎಂ ಆಗಿರುವುದು ಬಿಎಸ್  ಯಡಿಯೂರಪ್ಪನವರೇ.  ನೀವು ವಿಪಕ್ಷದಲ್ಲಿದ್ದಾಗ ಎಷ್ಟು ಜಬರ್ದಸ್ತ್ ಆಗಿ ಮಾತನಾಡಿದ್ರಿ. ಈಗ ಏಕೆ ಮೌನವಾಗಿದ್ದೀರಿ. ಮೌನಂ ಸಮ್ಮತಿ ಲಕ್ಷಣಂ ಎಂಬತ್ತಿದ್ದೀರಿ ಎಂದು ಡಿಸಿಎಂ ಗೋವಿಂದಕಾರಜೋಳ ಅವರಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಟಾಂಗ್ ನೀಡಿದರು.

Key words: session- Opposition party- Leader – siddaramaiah-bjp- govrnament-flood