ಸದನದಲ್ಲಿ ಮುಂದುವರಿದ ಗದ್ದಲ:  ಕಲಾಪ ನಾಳೆಗೆ ಮುಂದೂಡಿಕೆ.

kannada t-shirts

ಬೆಂಗಳೂರು,ಫೆಬ್ರವರಿ,21,2022(www.justkannada.in):  ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿದ್ದು ಈ ಮಧ್ಯೆ ಇಂದು ಸಹ ಸದನದಲ್ಲಿ ಪ್ರತಿಭಟನೆ ಮುಂದುವರೆಸಿತು.

ವಿಧಾನ ಪರಿಷತ್ ನಲ್ಲಿ ಕಲಾಪ ಮರು ಆರಂಭವಾದಾಗಲೂ ಕಾಂಗ್ರೆಸ್ ಧರಣಿ ಮುಂದುವರಿಯಿತು. ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಪರಿಷತ್ ಕಲಾಪವನ್ನ ಸಭಾಪತಿ ಬಸವರಾಜ ಹೊರಟ್ಟಿ ನಾಳೆಗೆ ಮುಂದೂಡಿದರು.

ವಿಧಾನ ಪರಿಷತ್ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಹಗಲು ರಾತ್ರಿ ಧರಣಿ ನಡೆಸುವ ಬದಲು ಸದನದಲ್ಲಿ‌ ಚರ್ಚೆ ನಡೆಸೋಣ. ಅದಕ್ಕೆ ಮುಕ್ತ ಅವಕಾಶ ಇದೆ. ದಯವಿಟ್ಟು ಪ್ರತಿಪಕ್ಷ ನಾಯಕರು ಧರಣಿ ಹಿಂಪಡೆದು ಸದನ ನಡೆಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಬಿಜೆಪಿ ಹಿರಿಯ ಸದಸ್ಯ ಪ್ರಾಣೇಶ್ ಮಾತನಾಡಿ, ಈ ಸದನದಲ್ಲಿ ಒಮ್ಮೆ ತಿರಸ್ಕರಿಸಿದರ ವಿಚಾರವನ್ನು ಪುನಃ ಚರ್ಚೆಗೆ ಅವಕಾಶ ಇದೆಯಾ? ಯಾವುದೇ ಪದ ಬಳಕೆಗೆ ಅವಕಾಶ ಇದೆಯಾ? ಇಲ್ಲಿ ಕಡತದಿಂದ ಪದ ತೆಗೆಸುವ ಅವಕಾಶ ಇದೆ. ಆದರೆ ಇದನ್ನು ಹೊರಗಿದ್ದು ಮಾಹಿತಿ ಪಡೆಯುವವರ ಮನಸ್ಸಿನಿಂದ ಶಬ್ದ ತೆಗೆದುಹಾಕುವುದು ಯಾರು? ಒಂದು ವಿಚಾರದ ಚರ್ಚೆ ನಡೆಸುವಾಗ ಇನ್ನೊಂದು ವಿಚಾರ ಪ್ರಸ್ತಾಪಿಸಿ ಗದ್ದಲ ಮಾಡುವುದು ಎಷ್ಟು ಸರಿ? ಪೀಠಕ್ಕೆ ಬೇಡದ ಮಾತು, ಚರ್ಚೆ, ಅನಗತ್ಯ ಕಾಲಹರಣ ತಡೆಯುವ ಅವಕಾಶ ಪೀಠಕ್ಕೆ ಇಲ್ಲವೇ? ನಮ್ಮನ್ನು ಇಡೀ ರಾಜ್ಯ ನೋಡುತ್ತಿರುತ್ತದೆ. ಕೊಟ್ಟ ಅವಕಾಶದ ಸಂದರ್ಭದಲ್ಲಿ ಅದೇ ವಿಚಾರ ಮಾತನಾಡಬೇಕು. ಇದಕ್ಕೆ ಉತ್ತರ ಬೇಕು ಎಂದರು.

ಸಭಾಪತಿಗಳು ಮಾತನಾಡಿ, ಒಮ್ಮೆ ಪೀಠದಿಂದ ತಿರಸ್ಕಾರವಾದ ವಿಚಾರವನ್ನು ಮತ್ತೆ ಪ್ರಸ್ತಾಪಿಸುವ ಅವಕಾಶ ಇಲ್ಲ. ಆದರೆ ಮಾರನೇ ದಿನ ಇಲ್ಲವೇ ಎರಡು ದಿನ ಬಳಿಕ ಸೌಹಾರ್ದ ವಾತಾವರಣ ನಿರ್ಮಿಸಲು ಅವಕಾಶ ಆಗಲಿ ಅಂತ ಬೇರೆಯ ಅವಕಾಶದ ರೂಪದಲ್ಲಿ ವಿಚಾರ ಚರ್ಚೆಗೆ ಅವಕಾಶ ನೀಡಿದ್ದೆ. ಉತ್ತಮ ಅವಕಾಶ ಸಿಗಬೇಕು. ಸದನ ಸರಿಯಾಗಿ ನಡೆಯಲಿ ಎಂಬ ಕಾರಣಕ್ಕೆ ಮತ್ತೊಮ್ಮೆ ಚರ್ಚೆಗೆ ಅವಕಾಶ ನೀಡಿದ್ದೆ. ಫ್ಲೆಕಾರ್ಟ್ ಹಿಡಿಯಬಾರದು, ಧಿಕ್ಕಾರ ಕೂಗಬಾರದು ಅಂತಿದೆ. ನಾನು ತೆಗೆದುಕೊಂಡು ಹೋಗಿ ಕಬೋರ್ಡ್ ನಲ್ಲಿ ಇಟ್ಟಿದ್ದೆ. ಆದರೆ ಮತ್ತೆ ಬೇರೆ ಪ್ಲೆಕಾರ್ಟ್ ತರಲಾಗಿದೆ. 42 ವರ್ಷದ ಅನುಭವದಲ್ಲಿ ಇತ್ತೀಚೆಗೆ ಇಂತಹ ಅನುಭವ ಆಗುತ್ತದೆ. ನಾನು ದೇವರಲ್ಲ. ತಪ್ಪು ಆಗಬಹುದು. ಕ್ರಮ ಕೈಗೊಳ್ಳಬಹುದು. ಆದರೆ ಸೌಹಾರ್ದತೆ ನಿರ್ಮಿಸಲು ಪ್ರಯತ್ನಿಸಿದ್ದೇನೆ. ಕೈಹಿಡಿದು ಹೊರಹಾಕಬೇಕು. ಅದು ನನ್ನಿಂದ ಅದು ಸಾಧ್ಯವಿಲ್ಲ. ಹಿಂದೆ ತುಂಬಾ ಚೆನ್ನಾಗಿ ಸದನ ನಡೆಯುತ್ತಿತ್ತು. ಠೀಕೆ ಮಾಡಿ. ಅದು ಪ್ರಾಮಾಣಿಕವಾಗಿರಬೇಕು. ಬೇರೆಯವರಿಗೆ ಸಮಸ್ಯೆ ಆಗದಂತಿರಬೇಕು. ಪ್ರತಿಯೊಬ್ಬರು ಸಭಾಪತಿಗಳಿಗೆ ಪ್ರಶ್ನೆ ಮಾಡಬಾರದು. ಪೀಠಕ್ಕೆ ಅಗೌರವ ತೋರಬಾರದು. ನನ್ನ ಮಾತಿಗೆ ಬೆಲೆ ಸಿಗದಿದ್ದಾಗ ಸದನ ಮುಂದೂಡುವುದನ್ನು ನಿಟ್ಟರೆ ಬೇರೆ ರೀತಿ ನಡೆದುಕೊಳ್ಳಲು ನನಗೆ ಸಾಧ್ಯವಿಲ್ಲ. ಮೂರು ದಿನದಿಂದ ಪರಿಸ್ಥಿತಿ ತಿಳಿಗೊಳಿಸಲು ಯತ್ಇಸುತ್ತಿದ್ದೇನೆ. ಪ್ರಶ್ನೆ ಮಾಡುವ ಬದಲು ಪರಿಹಾರ ಸೂಚಿಸಿ. ನೀವು ಹೇಳಿದ ಎಲ್ಲಾ ಸಲಹೆ ಸ್ವೀಕರಿಸುತ್ತೇನೆ. ನಾವು ಇತರರಿಗೆ ಮಾರ್ಗದರ್ಶೊಯಾಗಿರಬೇಕು. ಮಾದರಿ ಆಗುವ ರೀತಿ ನಡೆದುಕೊಳ್ಳಬೇಕು. ಸದನ ಉತ್ತಮ ರೀತಿಯಲ್ಲಿ ನಡೆಸಲು ಅವಕಾಶ ನೀಡಿ ಎಂದು ಎಲ್ಲರಲ್ಲಿ ಮನವಿ ಮಾಡುತ್ತೇನೆ. ಹಿಂದೆ ಕುಳಿತು ಪ್ರತಿಭಟನೆ ಮಾಡುತ್ತಿದ್ದರು. ಈಗ ಬದಲಾಗಿದೆ ಎಂದರು.

ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ನಮ್ಮ ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ನಡೆಯಲಿದೆ. ದಯವಿಟ್ಟು ನಮ್ಮ ವಿಚಾರ ಬದಲಾಗುವುದಿಲ್ಲ. ನಮ್ಮ ವಿಚಾರದ ತೀರ್ಮಾನ ಆಗುವವರೆಗೆ ಇದೇ ರೀತಿ ಇರಲಿದೆ. ನೀವು ಸದನದಿಂದ ಹೊರ ಹಾಕಿದರೂ ಅಬ್ಯಂತರ ಇಲ್ಲ. ಆಡಳಿತ ಪಕ್ಷವೇ ಬೇಕಾದರೆ ಸದಸ್ಯ ಬಲ ಇದೆ ಅವರೇ ನಡೆಸಿಕೊಳ್ಳಲಿ ಎಂದರು.

ಸಚಿವ ಮಾಧುಸ್ವಾಮಿ ಮಾತನಾಡಿ, ಸಭಾಪತಿ ರೂಲಿಂಗ್ ಉಲ್ಲಂಘಿಸಿ ಹೋರಾಡುವುದು ಸರಿಯಲ್ಲ. ರಾಜೀನಾಮೆಗೆ ಪಟ್ಟು ಹಿಡಿಯುತ್ತದೆ. ಸರ್ಕಾರ ಸಹ ಸಚಿವರ ರಾಜೀನಾಮೆ ಪಡೆಯಲ್ಲ ಅಂತ ಹೇಳಿದ್ದೇವೆ. ಸದನದ ಕಲಾಪ ಹಾಳು ಮಾಡಬೇಡಿ. ಸದನದ ಹೊರಗೆ ಹೋರಾಟ ನಡೆಸಿ. ಸಭಾಪತಿಗಳು ತಿರಸ್ಕರಿಸಿದ ವಿಚಾರ ಎಷ್ಟು ದಿನ ಮುಂದುವರಿಸುತ್ತೀರಿ. ನೀವು ಸೂಕ್ತ ತೀರ್ಮಾನ ಕೈಗೊಳ್ಳಿ. ನಾವು ರಾಜೀನಾಮೆ ಪಡೆಯಲ್ಲ. ಸುಮ್ಮನೇ ಹೋರಾಟ ಮಾಡಿದರೆ ಬೆಲೆ ಇಲ್ಲ. ರಾಜ್ಯದ ವಿವಿಧ ಭಾಗ, ರಾಷ್ಟ್ರದ ವಿವಿಧ ಭಾಗದಲ್ಲಿ ಹೋರಾಡಿ. ಸಭೆಯನ್ನೇ ನಡೆಸಬಾರದು ಎಂದರೆ ಹೇಗೆ. ಇದು ಪೀಠಕ್ಕಾಗುತ್ತಿರುವ ಅವಮಾನ ಅನ್ನುವುದನ್ನು ಪ್ರತಿಪಕ್ಷ ಅರಿಯಬೇಕು. ಇಲ್ಲಿ ನಡೆಯುವ ಪ್ರತಿಭಟನೆ ಪೀಠಕ್ಕಾಗುವ ಅವಮಾನ. ಹೊರಗೆ ಬನ್ನಿ. ನಾವೂ ಉತ್ತರ ನೀಡ್ತೇವೆ ಎಂದರು.

ಈಶ್ವರಪ್ಪ ಅವರಿಂದ ರಾಷ್ಟ್ರಧ್ವಜ ಕ್ಕೆ ಅಗೌರವ ಆಗಿದೆ ಎನ್ನುವ ಸನ್ನಿವೇಶ ನಡೆದಿಲ್ಲ. ಅದನ್ನು ನಾವು ಸಾಬೀತುಪಡಿಸುತ್ತೇವೆ. ಹೊರಗೆ ಹೋರಾಡಿ. ಸದನದ ಸಮಯ ಹಾಳು ಮಾಡಬೇಡಿ ಎಂದು ಮಾಧುಸ್ವಾಮಿ ಮನವಿ ಮಾಡಿದರು.

ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್ ಸಹ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಹೋರಾಟ. ಪೀಠದ ವಿರುದ್ಧ ಅಲ್ಲ. ನಮ್ಮ ಹೋರಾಟ ನಡೆಯಲಿದೆ. ಹಿಂದೆ ಪಡೆಯವ ಪ್ರಶ್ನೆ ಇಲ್ಲ ಎಂದರು.

ಮಾಧುಸ್ವಾಮಿ ಮಾತನಾಡಿ, ಯಾಕೆ ಇಷ್ಟೊಂದು ಹಠ ಮಾಡುತ್ತೀರಿ. ದಾಖಲೆ ನೀಡಿ ಎಂದಿದ್ದೇವೆ. ಅದಕ್ಕೆ ಉತ್ತರ ಸಿಕ್ಕಿಲ್ಲ. ತಪ್ಪಿದ್ದರೆ ಸದನ ಬಿಟ್ಟರೆ ಬೇಕಷ್ಟು ಅವಕಾಶ ಇದೆ. ಅಲ್ಲಿ ಹೋರಾಡಿ. ಸದನದಲ್ಲಿ ಯಾಕೆ? ಜನರೇ ಅದಕ್ಕೆ ಉತ್ತರ ಕೊಡುತ್ತಾರೆ. ನೀವು ಹೋರಾಟ ಕೈಬಿಡಿ ಎಂದರು.

ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ಮಾತನಾಡಿ, ನಮಗೂ ಸದನ ನಡೆಯಲಿ ಎಂಬ ಆಶಯ ಇದೆ. ನಮ್ಮೊಂದಿಗೆ ಮಾತುಕತೆ ನಡೆಸುವ ಪ್ರಯತ್ನ ಆಗಿಲ್ಲ. ದೇಶದಲ್ಲಿ ರಾಷ್ಟ್ರಧ್ವಜ ಕ್ಕೆ ಅವಮಾನವಾಗಿದೆ. ಶಾಸನ ಮಾಡುವವರು ನಾವು. ಇಲ್ಲಲ್ಲದೇ ಬೇರೆ ಎಲ್ಲಿ ಹೋರಾಡಬೇಕು? ಸರ್ಕಾರದ ಉದ್ಧಟತನ ಇದಾಗಿದೆ. ರಾಷ್ಟ್ರಧ್ವಜ ಅಪಮಾನ ಸಹಿಸಲು ಸಾಧ್ಯವಿಲ್ಲ. ನಾವು ಹೊರಗೂ ಪ್ರತಿಭಟಿಸುತ್ತೇವೆ. ಶಾಸನ ರಚಿಸುವ ನಾವು ಇಲ್ಲಲ್ಲದೇ ಇನ್ನೆಲ್ಲಿ ಮಾತನಾಡಬೇಕು. ಇದೇ ಅವಕಾಶ. ಕ್ರಮ ಆಗುವವರೆಗೂ ಹೋರಾಟ ಇರಲಿದೆ ಎಂದರು.

ಮಾಧುಸ್ವಾಮಿ ಮಾತನಾಡಿ, ಸಭೆಯಲ್ಲಿ ತಮ್ಮ ಮಾತಿಗೆ ಗೌರವ ನೀಡದವರು ರಾಷ್ಟ್ರಧ್ವಜ ಕ್ಕೆ ಎಷ್ಟು ಗೌರವ ಕೊಡುತ್ತಾರೆ? ಇಲ್ಲಿ ಸಲ್ಲದವರು ಎಲ್ಲಿ ಸಲ್ಲುತ್ತಾರೆ ಎಂದರು.

ಪಾಯಿಂಟ್ ಆಫ್ ಆರ್ಡರ್ ಅಡಿ ಮಾತನಾಡಿದ ಪ್ರತಿಪಕ್ಷ ನಾಯಕರು, ತಮ್ಮ ಪೀಠಕ್ಕೆ ನಮ್ಮಿಂದ ಎಲ್ಲಿ ಅಪಮಾನ ಆಗಿದೆ ತಿಳಿಸಿ. ನಾವು ಒಬ್ಬ ಸಚಿವರ ವಿರುದ್ಧ ಹೋರಾಡುತ್ತಿರುವುದು. ಅವರು ಕ್ರಮ ಕೈಗೊಳ್ಳುವವರೆಗೂ ನಮ್ಮ ಹೋರಾಟ ಇರಲಿದೆ ಎಂದರು. ಆಯನೂರು ಮಂಜುನಾಥ್ ಮಾತನಾಡಿ, ನೋಟಿಸ್ ನೀಡದೇ ಸದನದ ನಾಲ್ಕು ದಿನ ಕಳೆದಿದೆ. ಇದಕ್ಕೆ ಇನ್ನಷ್ಟು ಅವಕಾಶ ಸರಿಯಲ್ಲ. ಮಾತನಾಡಲು ಇನ್ನೂ ಅವಕಾಶ ಇದೆಯಾ? ಎಂದು ಕೇಳಿದರು.

ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಸಹ ಪ್ರತಿಪಕ್ಷ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಪ್ರತಿಪಕ್ಷ ಸದಸ್ಯರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ರು ಮಾತಿಗೆ ಮುಂದಾದ ಸಂದರ್ಭ ಆಡಳಿತ ಪಕ್ಷ ಸದಸ್ಯರು ಪ್ರತಿಪಕ್ಷ ವಿರುದ್ಧ ಆಡಳಿತ ಪಕ್ಷದ ಸದಸ್ಯರು ಘೋಷಣೆ ಕೂಗಿದರು. ಸಭಾಪತಿಗಳು ಎದ್ದುನಿಂತು, ಕ್ರಮ ಕೈಗೊಳ್ಳುವುದು ಕಷ್ಟವಲ್ಲ. ಬೇಡಾಂತ ಸುಮ್ಮನಿದ್ದೇನೆ. ಸದನ ಸುಗಮವಾಗಿ ನಡೆಸುವುದು ಆಶಯ ಎಂದರು.

ಈ ಮಧ್ಯೆ ಗಮನ ಸೆಳೆಯುವ ಸೂಚನೆಯನ್ನು ಸಭಾಪತಿಗಳು ಕೈಗೆತ್ತಿಕೊಂಡರು. ಸಚಿವರಿಲ್ಲ ಎಂಬ ಕಾರಣಕ್ಕೆ ಸದನವನ್ನು ನಾಳೆ ಬೆಳಗ್ಗೆ 11 ಕ್ಕೆ ಮುಂದೂಡಿದರು.

Key words: session-congress-protest-bjp

website developers in mysore