ಸಾ.ರಾ ಮಹೇಶ್ ಮತ್ತು ಹೆಚ್.ವಿಶ್ವನಾಥ್ ಆಣೆ ಪ್ರಮಾಣ ವಿಚಾರ ಹಾಗೂ ಹುಣಸೂರು ಪ್ರತ್ಯೇಕ ಜಿಲ್ಲೆ ಕುರಿತು ಸಚಿವ ಸಿ.ಟಿ ರವಿ ಪ್ರತಿಕ್ರಿಯಿಸಿದ್ದು ಹೀಗೆ…?

ಮೈಸೂರು,ಅ,16,2019(www.justkannada.in):  ಮಾಜಿ ಸಚಿವ ಸಾ.ರಾ ಮಹೇಶ್  ಹಾಗೂ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಆಣೆ ಪ್ರಮಾಣಕ್ಕೆ ಮುಂದಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ,  ಪರಸ್ಪರ ಕೆಸರೆರಚಾಟ ಮಾಡಿಕೊಳ್ಳುವುದು ಸರಿ ಅಲ್ಲ. ಇಬ್ಬರು ಹಲವು ವರ್ಷಗಳಿಂದ ರಾಜಕೀಯ ರಂಗದಲ್ಲಿ‌ ಇದ್ದಾರೆ. ಸಾಕಷ್ಟು ಪ್ರಬುದ್ಧರಿದ್ದಾರೆ. ಹೀಗಾಗಿ ಸಾರ್ವಜನಿಕವಾಗಿ ಈ ರೀತಿ ವರ್ತಿಸುವುದು ಸರಿ ಅಲ್ಲ ಎಂದು ಸಲಹೆ ನೀಡಿದರು.

ಮೈಸೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಸಚಿವ ಸಿ.ಟಿ ರವಿ, ನೆರೆ ಪರಿಹಾರ ವಿಚಾರದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯ ತಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ಪರಿಹಾರ ನೀಡಿದ್ದರು. ನಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ಪರಿಹಾರ ನೀಡಿದ್ದೇವೆ ಎಂಬುದನ್ನ ತುಲನೆ ಮಾಡಲಿ. ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಂಡರೆ ಆಗುವುದಿಲ್ಲ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲಿತ್ತು ಎಂಬಂತೆ ಸಿದ್ದರಾಮಯ್ಯ ಹೇಳುತ್ತಿದ್ದಾರೆ.. ಹೀಗಾಗಿ ಜೆಪಿಪಿ ವಿರುದ್ದ ನಿರಂತರ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಹುಣಸೂರು ಪ್ರತ್ಯೇಕ ಜಿಲ್ಲೆ ಬೇಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸಿ,ಟಿ ರವಿ, ಈ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆ ಸೇರಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಪ್ರತ್ಯೇಕ ಜಿಲ್ಲೆ ರಚನೆಯ ಸಾಧಕ ಭಾದಕಗಳನ್ನು ಪರಿಶೀಲಿಸಿ ತೀರ್ಮಾನ ಮಾಡಬೇಕಾಗುತ್ತದೆ. ಈಗಾಗಲೇ ಸಾಕಷ್ಟು ಪ್ರತ್ಯೇಕ ಜಿಲ್ಲೆಯ ಬೇಡಿಕೆ ಕೇಳಿ ಬಂದಿದೆ ಎಂದರು.

ಹೆಚ್. ವಿಶ್ವನಾಥ್  ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸಿ,ಟಿ ರವಿ,  ನಾವು ಅವರನ್ನ ಭೇಟಿ ಮಾಡಿಲ್ಲ. ಅವರು ಕೂಡ ನನ್ನನ್ನು ಭೇಟಿ ಮಾಡಿಲ್ಲ. ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ ಎನ್ನುವುದು ಬರಿ ಊಹಾಪೋಹ‌ ಎಂದು ಸ್ಪಷ್ಟನೆ ನೀಡಿದರು.

15 ಕ್ಷೇತ್ರಗಳಿಗೆ ಉಪ ಚುನಾವಣೆ ವಿಚಾರ ಕುರಿತು ಮಾತನಾಡಿದ ಸಚಿವ ಸಿ.ಟಿ ರವಿ,  ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಆಧಾರದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ಉಪ ಚುನಾವಣೆಯಲ್ಲಿ ಅನರ್ಹರಿಗೆ ಟಿಕೆಟ್ ನೀಡುವ ಬಗ್ಗೆ ನಿರ್ಧಾರವಾಗಿಲ್ಲ. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಅನರ್ಹ ಶಾಸಕರ ಕ್ಷೇತ್ರಗಳ ಪರಾಜಿತ ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸ್ ಸೇರುವುದಿಲ್ಲ. ಕಾಂಗ್ರೆಸ್ ಸೇರುತ್ತಾರೆ ಎಂಬುದು ಕೇವಲ ವದಂತಿ. ಕಾಂಗ್ರೆಸ್ ಮುಳುಗುತ್ತಿರುವ. ಹಡಗು. ಎರಡು ರಾಜ್ಯಗಳನ್ನ ಹೊರತುಪಡಿಸದರೆ ಉಳಿದ ರಾಜ್ಯಗಳಲ್ಲಿ ಕಾಂಗ್ರೆಸ್ ಅಸ್ತಿತ್ವವೇ ಇಲ್ಲ. ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಲೇವಡಿ ಮಾಡಿದರು.

ಈ ಬಾರಿಯ ದಸರಾವನ್ನ ಸಚಿವ ಸೋಮಣ್ಣ ಅದ್ದೂರಿಯಾಗಿ ನೆರವೇರಿಸಿದ್ದಾರೆ

ಈ ಬಾರಿಯ ಮೈಸೂರು ದಸರವನ್ನ ಸಚಿವ ಸೋಮಣ್ಣ ಅದ್ಧೂರಿಯಾಗಿ ನೆರವೇರಿಸಿದ್ದಾರೆ. ದಸರಾದ ಏಕಾತಾನತೆ ಹೋಗಬೇಕು. ಪ್ರತಿ ವರ್ಷವೂ ಅದೇ ಕಾರ್ಯಕ್ರಮಗಳು ಪುನರಾವರ್ತನೆ ಆಗಬಾರದು. ಹೊಸ ಹೊಸ ಕಾರ್ಯಕ್ರಮ ಸೇರ್ಪಡೆಯಾಗಬೇಕು. ಮುಂಚಿತವಾಗಿಯೇ ದಸರೆಗೆ ಸಿದ್ದತೆ ಆರಂಭಿಸಿದರೆ ಮತ್ತಷ್ಟು ಅದ್ದೂರಿತನ ಬರಲಿದೆ. ಇದೆಲ್ಲವನ್ನ ಗಮನದಲ್ಲಿ ಇಟ್ಟುಕೊಂಡು ದಸರಾ ಪ್ರಾಧಿಕಾರ ರಚನೆ ಮಾಡಿದರೆ ಒಳಿತು ಎನ್ನುವುದು ನನ್ನ ಅಭಿಪ್ರಾಯ ಎಂದು ಸಿ.ಟಿ ರವಿ ತಿಳಿಸಿದರು.

Key words: sara Mahesh – H.Vishwanath -swearing -CT Ravi –reaction-mysore